ಮೈಸೂರು: ಮಂಡ್ಯ ಜಿಲ್ಲೆಯಲ್ಲಿ ರೈತ ಕುಟುಂಬದ ಅನೇಕ ಹೆಣ್ಣು ಮಕ್ಕಳು ಅನಾಥರಾದಾಗ ಅವರಿಗೆ ಬದುಕುವ ದಾರಿ ತೋರಿಸಿದ್ದು, ಈ ಕುಮಾರಸ್ವಾಮಿ. ಅವರು ಕಣ್ಣೀರು ಹಾಕುವಾಗ ಆಯಮ್ಮ ಬಂದಿಲ್ಲ. ಅವರ ಕಣ್ಣೀರು ಒರೆಸಿದ್ದು ನಾನು ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಸುಮಲತಾ ಅವರ ಬಗ್ಗೆ ವ್ಯಂಗ್ಯವಾಡಿದ್ದಾರೆ.
ಮೈಸೂರಿನಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಸಿಎಂ ಕುಮಾರಸ್ವಾಮಿ, ನನಗೆ ಅಂಬರೀಶ್ ಹೆಸರು ಬಳಸುವ ಅಗತ್ಯವಿಲ್ಲ. ಮಂಡ್ಯಕ್ಕೆ ದುಡಿಮೆ ಮಾಡಿದ್ದೇನೆ. ಅದನ್ನು ಇಟ್ಟುಕೊಂಡು ಮತ ಕೇಳುತ್ತಿದ್ದೇನೆ. ಮಂಡ್ಯ ಜಿಲ್ಲೆಯಲ್ಲಿ ರೈತ ಕುಟುಂಬದ ಅನೇಕ ಹೆಣ್ಣು ಮಕ್ಕಳು ಅನಾಥರಾದಾಗ ಅವರಿಗೆ ಬದುಕುವ ದಾರಿ ತೋರಿಸಿದ್ದು ಈ ಕುಮಾರಸ್ವಾಮಿ. ಅವರು ಕಣ್ಣೀರು ಹಾಕುವಾಗ ಕಣ್ಣೀರು ಒರೆಸಿದ್ದು ನಾನು, ಆಯಮ್ಮ ಅಲ್ಲ. ಎರಡು ದಿನ ಅಲ್ಲ, ಎರಡು ಗಂಟೆ, 2 ನಿಮಿಷ ಕೂಡ ಅಂಬರೀಶ್ ಹೆಸರು ಹೇಳಿ ವೋಟ್ ಕೊಡಿ ಎಂದು ಕೇಳುವುದಿಲ್ಲ ಎಂದು ಸುಮಲತಾಗೆ ತಿರುಗೇಟು ನೀಡಿದರು.
ಅಂಬರೀಶ್ ಅವರ ಹೆಸರನ್ನು ನಾನು ಚುನಾವಣೆಯಲ್ಲಿ ಎಲ್ಲೂ ಹೇಳಿಲ್ಲ. ಅಂಬರೀಶ್ ಅವರು ಬದುಕಿದ್ದಾಗ ಅವರು ಹೇಗೆ ನೋಡಿ ಕೊಂಡಿದ್ದಾರೋ, ಅದೇ ರೀತಿ ನಾನು ಅವರನ್ನು ನೋಡಿಕೊಂಡಿದ್ದೇನೆ. ನಾನಲ್ಲ, ಅವರು ಅಂಬರೀಶ್ ಹೆಸರನ್ನು ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ. ಅಂಬರೀಶ್ ಹೆಸರಲ್ಲಿ ರಾಜಕಾರಣ ಮಾಡುತ್ತಾ ಅವರ ಹೆಸರನ್ನು ರಾಜಕೀಯಕ್ಕೆ ಬಳಸುತ್ತಿದ್ದಾರೆ. ಅವರ ಅಂತ್ಯಕ್ರಿಯೆಯಲ್ಲಿ ನಾನು ಸಲ್ಲಿಸಬೇಕಾದ ಗೌರವವನ್ನು ಸಲ್ಲಿಸಿದ್ದೇನೆ ಎಂದರು.
ದೇವೇಗೌಡರ ಕುಟುಂಬವನ್ನು ಸರ್ವನಾಶ ಮಾಡಲು ಒಂದು ವರ್ಗ ಕಳೆದ 50 ವರ್ಷದಿಂದ ಯತ್ನಿಸುತ್ತಿದೆ. ಅವರು ಯಶಸ್ವಿಯಾಗಿಲ್ಲ ಈಗಲೂ ಅದಕ್ಕಾಗಿ ಮಂಡ್ಯ, ಹಾಸನ, ತುಮಕೂರಿನಲ್ಲಿ ಕುತಂತ್ರ ಮಾಡುತ್ತಿದ್ದಾರೆ. ನಮ್ಮನ್ನು ಸರ್ವನಾಶ ಮಾಡುವ ವರ್ಗ ಎಲ್ಲಾ ಪಕ್ಷದಲ್ಲೂ ಇದ್ದಾರೆ. ಮೈತ್ರಿ ಧರ್ಮದ ಅನುಸಾರ ನಾನು ಎಲ್ಲಾ ಕಡೆ ಪ್ರಚಾರಕ್ಕೆ ಹೋಗುತ್ತೇನೆ. ಕಾಂಗ್ರೆಸ್ ಅವರು ಬರಬೇಕು. ಮೈತ್ರಿ ಧರ್ಮದ ಪಾಲನೆ ಅವರಿಗೆ ಬಿಟ್ಟಿದ್ದು, ಆದರೆ ನಮ್ಮ ಪಕ್ಷದವರು ಮೈತ್ರಿಧರ್ಮ ಪಾಲನೆ ಮಾಡುತ್ತಿದ್ದೇವೆ ಎಂದು ಸಿಎಂ ಕುಮಾರಸ್ವಾಮಿ ಹೇಳಿದರು.