ಬೆಂಗಳೂರು: ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಅವರು ತಮ್ಮ ರಾಜಕೀಯದ ಬಿಡುವಿಲ್ಲದ ಕೆಲಸ ಕಾರ್ಯಗಳ ಮಧ್ಯೆಯೂ ಬಿಡುವು ಮಾಡಿಕೊಂಡು ಮಗ ನಿಖಿಲ್ ಕುಮಾರಸ್ವಾಮಿ ಅವರ ಶೂಟಿಂಗ್ ನೋಡಲು ಹೋಗಿದ್ದರು.
ನಟ ನಿಖಿಲ್ ಕುಮಾರ್ ಅಭಿನಯದ `ಸೀತಾರಾಮ ಕಲ್ಯಾಣ’ ಚಿತ್ರದ ಶೂಟಿಂಗ್ ನಡೆಯುತ್ತಿದೆ. ಚಿತ್ರೀಕರಣದ ಸೆಟ್ ಗೆ ಕುಮಾರಸ್ವಾಮಿ ಮತ್ತು ಅನಿತಾ ಕುಮಾರಸ್ವಾಮಿ ದಂಪತಿ ಇಬ್ಬರು ಹೋಗಿದ್ದಾರೆ. ಅಲ್ಲಿ ಸ್ವಲ್ಪ ಸಮಯ ಕಾಲ ಕಳೆದು ಮಗ ನಿಖಿಲ್ ನಟನೆಯನ್ನು ನೋಡಿದ್ದಾರೆ.
ಮಗನ ಅಭಿನಯ ನೋಡಿ ಕುಮಾರಸ್ವಾಮಿ ಮೆಚ್ಚುಗೆಯನ್ನು ಸೂಚಿಸಿದ್ದಾರೆ. ಈ ಸಂದರ್ಭದಲ್ಲಿ ಚಿತ್ರೀಕರಣದಲ್ಲಿದ್ದ ನಟಿ ರಚಿತಾ ರಾಮ್, ನಿರ್ದೇಶಕ ಎ.ಹರ್ಷ ಸೇರಿದಂತೆ ಅನೇಕರು ಸಿಎಂ ಕುಮಾರಸ್ವಾಮಿ ದಂಪತಿ ಜೊತೆಗೆ ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ. ಸಿಎಂ ಕುಮಾರಸ್ವಾಮಿ ಅವರು ತನ್ನ ರಾಜಕೀಯ ಜೀವನದಲ್ಲಿ ಎಷ್ಟೇ ಒತ್ತಡದ ಕೆಲಸವಿದ್ದರೂ ಮಗನ ಸಿನಿಮಾದ ಬಗ್ಗೆ ಕೂಡ ಕಾಳಜಿ ವಹಿಸಿದ್ದಾರೆ. ಈ ಹಿಂದೆ ಕೂಡ `ಜಾಗ್ವಾರ್’ ಸಿನಿಮಾದ ಚಿತ್ರೀಕರಣ ನಡೆಯುತ್ತಿದ್ದಾಗ ಹತ್ತಿರದಿಂದ ಇದ್ದು ಎಲ್ಲವನ್ನು ಗಮನಿಸಿದ್ದರು.
`ಸೀತಾರಾಮ ಕಲ್ಯಾಣ’ ಸಿನಿಮಾ ಕುಮಾರಸ್ವಾಮಿ ಅವರ ಚಿನ್ನಾಂಬಿಕಾ ಬ್ಯಾನರ್ ನಲ್ಲಿ ನಿರ್ಮಾಣವಾಗುತ್ತಿದೆ. ನಿಖಿಲ್ `ಜಾಗ್ವಾರ್’ ನಂತರ ನಿರ್ದೇಶಕ ಮುನ್ನಿರತ್ನ ಅವರ `ಕುರುಕ್ಷೇತ್ರ’ ಸಿನಿಮಾದಲ್ಲಿ ಅಭಿಮನ್ಯುವಿನ ಪಾತ್ರದಲ್ಲಿ ನಟಿಸಿದ್ದಾರೆ. ಈಗ ಎ.ಹರ್ಷ ಅವರ ನಿರ್ದೇಶನದ `ಸೀತಾರಾಮ ಕಲ್ಯಾಣ’ ಸಿನಿಮಾದಲ್ಲಿ ಅಭಿನಯಿಸುತ್ತಿದ್ದು, ಚಿತ್ರೀಕರಣ ಮೈಸೂರಿನಲ್ಲಿ ಮುಕ್ತಾಯಗೊಂಡಿದ್ದು, ಈಗ ಬೆಂಗಳೂರಿನಲ್ಲಿ ಶೂಟಿಂಗ್ ನಡೆಯುತ್ತಿದೆ.