ಬೆಂಗಳೂರು: ನಮ್ಮ ಜೊತೆ ಚೆಲ್ಲಾಟ ಆಡಬೇಡಿ ಎಂದು ಆದಾಯ ತೆರಿಗೆ ಇಲಾಖೆ ಮಖ್ಯಸ್ಥ ಬಾಲಕೃಷ್ಣ ಹೆಸರು ಹೇಳಿ ಸಿಎಂ ಕುಮಾರಸ್ವಾಮಿ ಅವರು ಧಮ್ಕಿ ಹಾಕಿದ್ದಾರೆ.
ಬೆಂಗಳೂರು ದಕ್ಷಿಣ ಕ್ಷೇತ್ರದ ಅಭ್ಯರ್ಥಿ ಹರಿಪ್ರಸಾದ್ ಪರ ನಗರದ ವಿದ್ಯಾಪೀಠ ಸರ್ಕಲ್ ನಲ್ಲಿ ಬಹಿರಂಗ ಪ್ರಚಾರ ಸಭೆ ಉದ್ದೇಶಿ ಮಾತನಾಡಿದ ಸಿಎಂ, ಕರ್ನಾಟಕದಲ್ಲಿ ಜನತೆಯ ವಿಶ್ವಾಸ ಗಳಿಸಿ ಆಡಳಿತ ನಡೆಸುತ್ತಿದ್ದು, ನಮ್ಮ ಜೊತೆ ಚೆಲ್ಲಾಟ ಆಡಬೇಡಿ ಎಂದು ಐಟಿ ಮುಖ್ಯಸ್ಥರಿಗೆ ಧಮ್ಕಿ ಹಾಕಿದರು. ಮಂಡ್ಯಗೆ 300 ಜನ ಕಳಿಸಿದೆ ರೇಡ್ ಮಾಡಿಸುತ್ತೀಯಾ? ಎಲ್ಲಿದ್ದೀಯಾಪ್ಪಾ ಬಾಲಕೃಷ್ಣ ಎಂದು ಏಕವಚನದಲ್ಲಿ ಪ್ರಶ್ನಿಸಿ ಧಮ್ಕಿ ಹಾಕಿದರು. ಅಲ್ಲದೇ ಬಾಲಕೃಷ್ಣ ಕೊಟ್ಟಿರುವ ದೂರು ಬಿಜೆಪಿ ಹೆಡ್ ಕ್ವಾಟ್ರಸ್ ನಲ್ಲಿ ಟೈಪ್ ಮಾಡಿರುವುದು ಎಂದು ಆರೋಪ ಮಾಡಿದರು.
ಶ್ರೀಕಾಂತ್ ಎಂಬವರು ನನ್ನ ಮನೆಗೆ ಬಂದು ಹೋದಾಗ, 30 ಜನ ಐಟಿ ಅವರು ಅವರನ್ನ ತಪಾಸಣೆ ಮಾಡಿದರು. ಫೋನ್ ಚೆಕ್ ಮಾಡಿದ್ದೀರಿ ಇದನೆಲ್ಲಾ ಏಕೆ ಮಾಡಿದ್ರಿ ಎಂದು ಸಿಎಂ ಪ್ರಶ್ನೆ ಮಾಡಿದರು. ಅಲ್ಲದೇ ಬಾಲಕೃಷ್ಣನ್ನ ರಾಜ್ಯಪಾಲ ಮಾಡುತ್ತಾರೆ, ಅದಕ್ಕೆ ಹೀಗೆಲ್ಲ ಮಾಡುತ್ತಿದ್ದಾನೆ ದೂರಿದರು.
ಮೋದಿ ಹಿಟ್ಲರ್ ಆಗಿದ್ದು ದೇಶವನ್ನ ಹಾಳು ಮಾಡುತ್ತಿದ್ದಾನೆ. ಡಿಕ್ಟೇಟರ್ ಕ್ಕಿಂತ ಕೆಟ್ಟವನು ಎಂದು ಪ್ರಧಾನಿ ಮೋದಿ ವಿರುದ್ಧವೂ ಏಕವಚನ ದಲ್ಲಿ ಸಿಎಂ ವಾಗ್ದಾಳಿ ನಡೆಸಿ, ಮಂಡ್ಯ, ಹಾಸನದಲ್ಲಿ ಮಾತ್ರ ಗುತ್ತಿಗೆದಾರರು ಇದ್ದರಾ? ಬೇರೆ ಎಲ್ಲೂ ಗುತ್ತಿಗೆದಾರರು ಇಲ್ಲವಾ? ಇದಕ್ಕೆಲ್ಲ ನಾನು ಭಯಪಡಲ್ಲ. ಎಲ್ಲವನ್ನು ಹೋರಾಟ ಮಾಡಿ ಗೆಲ್ಲುತ್ತೇವೆ. ಮೋದಿ ಆಟ ಇನ್ನು ನಡೆಯುವುದು 15 ದಿನ ಮಾತ್ರ. ಇಂತಹವರಿಗೆ ಮತ ನೀಡಬೇಡಿ ಎಂದು ಮನವಿ ಮಾಡಿದರು.
ಇದೇ ವೇಳೆ ಚುನಾವನಾ ಆಯೋಗದ ಮೇಲು ಸಿಎಂ ಆಕ್ರೋಶ ವ್ಯಕ್ತಪಡಿಸಿ, ಚುನಾವಣೆ ಆಯೋಗವೇ ಜಿಲ್ಲಾಧಿಕಾರಿಗಳನ್ನು ನೇಮಕ ಮಾಡಿದೆ. ಆದರೆ ಮಂಡ್ಯ ಡಿಸಿ ವರ್ಗಾವಣೆಗೆ ಮಾಡಿದ್ದಾರೆ. ಈ ಚುನಾವಣೆಯಲ್ಲಿ 6 ಡಿಸಿ ಗಳನ್ನು ಬದಲಾವಣೆ ಮಾಡಲಾಗಿದೆ. ನಾಳೆ ಬೇರೆ ಯಾರದರು ಇವರ ಮೇಲೆ ದೂರು ಕೊಟ್ಟರೆ ಅವರನ್ನು ಬದಲಾವಣೆ ಮಾಆಡುತ್ತೀರಾ ಎಂದು ಪ್ರಶ್ನೆ ಮಾಡಿದರು. ಅಲ್ಲದೇ ಇಂತಹ ಚುನಾವಣೆ ಆಯೋಗ ನಾನು ಎಲ್ಲೂ ನೋಡಿಲ್ಲ. ಚುನಾವಣೆ ಆಯೋಗ, ಇಡಿ, ಸಿಬಿಐ ಮೋದಿ ಆಣತಿಯಂತೆ ನಡೆಯುತ್ತಿದೆ ಎಂದು ವಾಗ್ದಾಳಿ ನಡೆಸಿದರು.
ಐಟಿ ದೂರು: ಚುನಾವಣೆ ಸಮಯದಲ್ಲಿ ಜೆಡಿಎಸ್-ಕಾಂಗ್ರೆಸ್ ಬೆಂಬಲಿತ ಗುತ್ತಿಗೆದಾರರ ಮೇಲೆ ರೇಡ್ ಖಂಡಿಸಿ ಬೆಂಗಳೂರಿನ ಐಟಿ ಪ್ರಧಾನ ಕಚೇರಿ ಎದುರು ಸಿಎಂ, ಡಿಸಿಎಂ ಆದಿಯಾಗಿ ದೋಸ್ತಿ ನಾಯಕರು ಪ್ರತಿಭಟನೆ ಮಾಡಿದ್ದರು. ಇದನ್ನು ಖಂಡಿಸಿದ ಐಟಿ ಈಗ ಚುನಾವಣಾ ಆಯೋಗಕ್ಕೆ ದೂರು ನೀಡಿದೆ. ನಿಮ್ಮ ಅನುಮತಿಯನ್ನೇ ಪಡೆಯದೆ ನೀತಿ ಸಂಹಿತೆ ಇದ್ದರೂ ಪ್ರತಿಭಟನೆ ಮಾಡಿರೋದು ತಪ್ಪು. ಜೊತೆಗೆ ತಮ್ಮ ಕರ್ತವ್ಯಕ್ಕೂ ಅಡಿಪಡಿಸಿದ್ದಾರೆ. ತಕ್ಷಣವೇ ಕ್ರಮಕೈಗೊಳ್ಳಿ ಅಂತ ಐಟಿ ಮನವಿ ಮಾಡಿದೆ. ಮಂಡ್ಯ, ಮೈಸೂರು, ಹಾಸನ ಭಾಗದ ದಾಳಿ ವೇಳೆ, 8.14 ಕೋಟಿ ಹಣ, 1.69 ಕೋಟಿ ಬೆಲೆಬಾಳುವ ಚಿನ್ನಾಭರಣ ವಶಪಡಿಸಿಕೊಂಡಿದ್ದೇವೆ ಎಂದು ತಿಳಿಸಿದ್ದಾರೆ.