ಚಿಕ್ಕಬಳ್ಳಾಪುರ: ಬೆಳಗಾವಿ ಅಧಿವೇಶನದ ವೇಳೆ ಬಿಜೆಪಿಯವರು ಒಂದು ಲಕ್ಷ ಜನರನ್ನು ಸೇರಿಸಿ ಪ್ರತಿಭಟನೆ ಮಾಡ್ತೀನಿ ಅಂತಾ ಹೇಳ್ತಾರೆ. ಏನು ಕಿತ್ತು ಗುಡ್ಡೆ ಹಾಕಿದ್ದೀರಿ ಅಂತಾ ಪ್ರತಿಭಟನೆ ಮಾಡ್ತೀರಿ. ಪ್ರಧಾನಿ ರೈತರಿಗೆ ಏನು ಮಾಡಿದ್ದಾರೆ ಎಂದು ಸಿಎಂ ಹೆಚ್.ಡಿ. ಕುಮಾರಸ್ವಾಮಿ ಪ್ರಶ್ನೆ ಮಾಡಿದ್ದಾರೆ.
ದೊಡ್ಡಬಳ್ಳಾಪುರದಲ್ಲಿ ರೈತರ ಬೆಳೆಸಾಲ ಋಣಮುಕ್ತ ಪತ್ರ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದ ಸಿಎಂ, ಸಮ್ಮಿಶ್ರ ಸರ್ಕಾರ 45 ಸಾವಿರ ಕೋಟಿ ರೂ. ಸಾಲಮನ್ನಾ ಮಾಡುವ ದಿಟ್ಟ ಹೆಜ್ಜೆಯನ್ನು ಇಟ್ಟಿದೆ. ಕೆಲವರು ಸರ್ಕಾರದ ಅನಿಶ್ಚಿತತೆಯ ಬಗ್ಗೆ ಸುಳ್ಳು ಸುದ್ದಿಗಳನ್ನು ಹರಿಬಿಡುತ್ತಿದ್ದಾರೆ. ರಾಷ್ಟ್ರೀಕೃತ ಬ್ಯಾಂಕ್ ಗಳಿಂದ ರೈತರ ಸಂಪೂರ್ಣ ಮಾಹಿತಿಯನ್ನು ಪಡೆದುಕೊಂಡು ಸರ್ಕಾರದ ಅಧಿಕಾರಿಗಳು ನಿರಂತರವಾಗಿ ಚರ್ಚೆ ನಡೆಸುತ್ತಿದ್ದಾರೆ ಅಂದರು.
ತಮಿಳುನಾಡಿನ ಸಾವಿರಾರು ರೈತರು ದೆಹಲಿಗೆ ತೆರಳಿ ಕೇಂದ್ರ ಸರ್ಕಾರದ ವಿರುದ್ಧ ಹಲವಾರು ತಿಂಗಳು ಸಾಲಮನ್ನಾ ಮಾಡಿ ಅಂತಾ ಪ್ರತಿಭಟನೆ ಮಾಡಿದರು. ಅರೆ ಬೆತ್ತಲೆಯಾಗಿ ಮೆರವಣಿಗೆ ಮಾಡಿದರು. ಪ್ರತಿಭಟನಾಕಾರರು ತಮ್ಮ ಮೂತ್ರವನ್ನ ತಾವೇ ಕುಡಿದರು. ಪ್ರಧಾನಿ ಮೋದಿಯವರು ರೈತರನ್ನು ಭೇೀಟಿ ಮಾಡಿ ಮನವಿಯನ್ನು ಸ್ವೀಕರಿಸಬೇಕಿತ್ತು. ರೈತರಿಗೆ ಕಿಂಚಿತ್ತು ಗೌರವವನ್ನು ಕೊಡಲಿಲ್ಲ. ಇತ್ತೀಚೆಗೆ ಕರ್ನಾಟಕದಿಂದ 2 ಸಾವಿರ ರೈತರು ಮತ್ತು ಇತರೇ ರಾಜ್ಯದ ರೈತರು ಕೇಂದ್ರ ಸರ್ಕಾರದ ಗಮನ ಸೆಳೆಯಲು ದೆಹಲಿಗೆ ತೆರಳಿದ್ದರು. ಆದ್ರೆ ಕೇಂದ್ರದ ಬಿಜೆಪಿ ಸರ್ಕಾರದ ಯಾವ ನಾಯಕರು ರೈತರ ಅಹವಾಲು ಸ್ವೀಕರಿಸಲು ಬರಲಿಲ್ಲ ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.
ಯಾವ ರೈತರನ್ನು ಉಳಿಸಿದ್ದೇವೆ ಅಂತಾ ಬಿಜೆಪಿ ಅವರು ಪ್ರತಿಭಟನೆ ಮಾಡುತ್ತಿದ್ದಾರೆ ಅಂತಾ ಗೊತ್ತಾಗುತ್ತಿಲ್ಲ. ಕಬ್ಬು ಬೆಳೆಗಾರರಿಗೆ ಕಾರ್ಖಾನೆಯ ಮಾಲೀಕರು ಎಫ್.ಆರ್.ಪಿ ದರ ನೀಡಬೇಕೆಂದು ಕೇಂದ್ರ ಸರ್ಕಾರವೇ ಕಾನೂನು ಮಾಡಿದೆ. ನಮ್ಮ ಸರ್ಕಾರ ಬಂದಾಗ ರಾಜ್ಯದ ರೈತರಿಗೆ 2 ಸಾವಿರ ಕೋಟಿ ರೂ. ಎಫ್.ಆರ್.ಪಿ ಹಣ ಹೋಗಿರಲಿಲ್ಲ. ಸಮ್ಮಿಶ್ರ ಸರ್ಕಾರ ರಚನೆಯಾದ ಮೇಲೆ 1,968 ಕೋಟಿ ಹಣ ರೈತರಿಗೆ ಹೋಗುವಂತೆ ಮಾಡಿದ್ದೇವೆ. ಇನ್ನು 32 ಕೋಟಿ ಉಳಿದುಕೊಂಡಿದೆ. ಉತ್ತರ ಕರ್ನಾಟಕದಲ್ಲಿ ಬಿಜೆಪಿ ನಾಯಕರ ಸಕ್ಕರೆ ಕಾರ್ಖಾನೆಗಳಿದ್ದು, ಹೆಚ್ಚಿನ ಉತ್ಪಾದನೆಗಾಗಿ ಮೌಖಿಕವಾಗಿ 3 ಸಾವಿರ ಕೊಡ್ತೋವಿ ಅಂತಾ ರೈತರಿಗೆ ಹೇಳುತ್ತಾರೆ. ಯಾವ ಒಪ್ಪಂದ ಪತ್ರವಿಲ್ಲದೇ ರೈತರು ಕಬ್ಬು ನೀಡಿದ್ದಾರೆ. ಯಾವ ದಾಖಲೆಗಳಿಲ್ಲದೇ ನಾನು ಅವರ ಕ್ರಮತೆಗೆದುಕೊಳ್ಳಲಿ ಎಂಬ ಪ್ರಶ್ನೆ ಹುಟ್ಟಿಕೊಂಡಿದೆ ಎಂದು ಸಿಎಂ ಬೇಸರ ವ್ಯಕ್ತಪಡಿಸಿದ್ರು.
ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಇಂದು ದೊಡ್ಡಬಳ್ಳಾಪುರದಲ್ಲಿ ರೈತರಿಗೆ ಕೊಟ್ಟ ಮಾತಿನಂತೆ ಬೆಳೆ ಸಾಲ ಮನ್ನಾ ಋಣಮುಕ್ತ ಪತ್ರವನ್ನು ಪ್ರದಾನ ಮಾಡಿದರು
ಸಮಾರಂಭದಲ್ಲಿ ಉಪ ಮುಖ್ಯಮಂತ್ರಿ ಡಾ ಜಿ ಪರಮೇಶ್ವರ್, ಹಿರಿಯ ರಾಜಕಾರಣಿ ವೀರಪ್ಪ ಮೊಯಿಲಿ, ಸಚಿವರುಗಳಾದ ಡಿ ಕೆ ಶಿವಕುಮಾರ್, ಕೃಷ್ಣ ಭೈರೇಗೌಡ ಮತ್ತು ಶಿವಶಂಕರ ರೆಡ್ಡಿ ಉಪಸ್ಥಿತರಿದ್ದರು pic.twitter.com/p6lhyKreq8
— CM of Karnataka (@CMofKarnataka) December 8, 2018