ನವದೆಹಲಿ: ಜೆಡಿಎಸ್ ಹಾಗೂ ಕಾಂಗ್ರೆಸ್ ಸಮ್ಮಿಶ್ರ ಸರ್ಕಾರದ ನೂರು ದಿನಗಳ ಆಡಳಿತವು ಸಂಪೂರ್ಣವಾಗಿ ತೃಪ್ತಿ ತಂದಿಲ್ಲ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿಕೆ ನೀಡಿದ್ದಾರೆ.
ಮೈತ್ರಿ ಸರ್ಕಾರದ ನೂರು ದಿನಗಳ ಹಿನ್ನೆಲೆ ಪಬ್ಲಿಕ್ ಟಿವಿಗೆ ಪ್ರತಿಕ್ರಿಯಿಸಿದ ಅವರು, ಸಮ್ಮಿಶ್ರ ಸರ್ಕಾರದ ನೂರು ದಿನಗಳ ಆಡಳಿತ ನನಗೆ ಸಂಪೂರ್ಣವಾಗಿ ತೃಪ್ತಿ ತಂದಿಲ್ಲ. ಸಾಕಷ್ಟು ಸವಾಲುಗಳನ್ನು ದಾಟಿ ಕೆಲ ತೀರ್ಮಾನಗಳನ್ನು ಮಾಡಿದ್ದೇನೆ. ಅಂತಹ ನಿರ್ಣಯಗಳು ಸ್ವಲ್ಪದರ ಮಟ್ಟಿಗೆ ತೃಪ್ತಿ ತಂದಿದೆ. ಅಧಿಕಾರಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡುತ್ತಿದ್ದೇನೆ. ಜನರ ನೀರಿಕ್ಷೆಯಂತೆ ಬದಲಾವಣೆಯನ್ನು ಮಾಡಿದ್ದೇನೆ ಎನ್ನುವ ನಂಬಿಕೆಯಿದೆ ಎಂದು ತಿಳಿಸಿದರು.
ಇನ್ನೂ ಸಾಕಷ್ಟು ಕ್ರಿಯಾಯೋಜನೆಗಳು ಬಾಕಿ ಇವೆ. ಶಿಕ್ಷಣ, ಆರೋಗ್ಯ ಹಾಗೂ ವಸತಿ ಸೇರಿದಂತೆ ಇನ್ನೂ ಅನೇಕ ವಲಯಗಳಲ್ಲಿ ಸಾಕಷ್ಟು ಕನಸುಗಳನ್ನು ಹೊಂದಿದ್ದೇನೆ. ಬೆಂಗಳೂರಿನ ಕೆಲ ಸಮಸ್ಯೆಗಳಿಗೆ ಮುಕ್ತಿ ನೀಡಬೇಕಾಗಿದೆ. ನನ್ನ ಮುಂದಿನ ಎಲ್ಲಾ ಕೆಲಸಗಳನ್ನು ಶೀಘ್ರವೇ ತಿಳಿಸುತ್ತೇನೆ ಎಂದರು.
ಸಚಿವ ಸಂಪುಟ ಸದಸ್ಯರ ಸಹಕಾರ ಸಿಕ್ಕಿದ್ದು, ಜೊತೆಗೆ ಕಾಂಗ್ರೆಸ್ಸಿನ ಹಿರಿಯ ನಾಯಕರ ಸಂಪೂರ್ಣ ಸಹಕಾರವೂ ಸಹ ಸಿಕ್ಕಿದೆ. ಆರ್ಥಿಕ ಕಾರ್ಯಕ್ರಮಗಳ ಅನುಷ್ಠಾನದಲ್ಲಿ ನನಗೆ ಕಾಂಗ್ರೆಸ್ಸಿನ ಹಿರಿಯ ನಾಯಕರ ಸಹಕಾರ ಹೆಚ್ಚು ಸಿಕ್ಕಿದೆ. ಮೈತ್ರಿ ಸರ್ಕಾರದಲ್ಲಿ ಕೆಲ ಭಿನ್ನಾಭಿಪ್ರಾಯಗಳನ್ನು ಕಾಣುವುದು ಸಹಜ. ಒಂದೇ ಪಕ್ಷ ಅಧಿಕಾರ ಇದ್ದಾಗಲೂ ಸಾಕಷ್ಟು ಗೊಂದಲಗಳಿರುತ್ತವೆ. ಸದ್ಯ ಸಮ್ಮಿಶ್ರ ಸರ್ಕಾರದಲ್ಲಿ ಯಾವುದೇ ಗೊಂದಲಗಳಿಲ್ಲವೆಂದು ಹೇಳಿದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv