ಬೆಂಗಳೂರು: ಲೋಕಸಭಾ ಚುನಾವಣೆ ಮುಗಿದು ಫಲಿತಾಂಶಕ್ಕೆ ಇನ್ನೇನು ಕೆಲವೇ ದಿನಗಳು ಬಾಕಿ ಇದ್ದು, ಈ ಮಧ್ಯೆ ರಾಜ್ಯ ರಾಜಕಾರಣದಲ್ಲಿ ದಿನದಿಂದ ದಿನಕ್ಕೆ ಭಾರೀ ಬೆಳವಣಿಗೆಗಳು ನಡೆಯುತ್ತಿದೆ. ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ತಮ್ಮ ಮೈತ್ರಿ ಸರ್ಕಾರ ಉಳಿಸಿಕೊಳ್ಳಲು ಸಾಕಷ್ಟು ಕಸರತ್ತುಗಳನ್ನು ನಡೆಸುತ್ತಿದ್ದಾರೆ.
ತನ್ನ ಸರ್ಕಾರ ಉಳಿಸಿಕೊಳ್ಳಲು ಎಚ್ಡಿಕೆ ಮೆಗಾ ಪ್ಲಾನ್ ಮಾಡಿದ್ದು, ಮೊದಲು ಯಡಿಯೂರಪ್ಪ ಮತ್ತು ತಂಡದ ಮೇಲೆ ಹದ್ದಿನಗಣ್ಣಿಟ್ಟಿದ್ದರು. ಈಗ ದೋಸ್ತಿ ಪಕ್ಷದ ಮಾಜಿ ಸಿಎಂ ಸಿದ್ದರಾಮಯ್ಯ ಮತ್ತು ತಂಡದ ಮೇಲೆ ಸಿಎಂ ನಿಗಾ ಇಟ್ಟಿದ್ದಾರೆ ಎಂಬ ಮಾಹಿತಿ ಮೂಲಗಳಿಂದ ತಿಳಿದುಬಂದಿದೆ.
ಈ ಮೂಲಕ ಏಕಕಾಲದಲ್ಲಿ ಯಡಿಯೂರಪ್ಪ, ಸಿದ್ದರಾಮಯ್ಯ ತಂಡಗಳ ಮೇಲೆ ಸಿಎಂ `ಗುಪ್ತ’ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಮಾಜಿ ಸಿಎಂ ಸಿದ್ದರಾಮಯ್ಯ ಎಲ್ಲಿ ಹೋಗುತ್ತಾರೆ? ಏನ್ ಮಾಡುತ್ತಾರೆ?, ಸಿದ್ದರಾಮಯ್ಯ ಟೀಂ ಏನು ಮಾಡುತ್ತಿದೆ? ಯಾರು ಯಾರ ಜೊತೆ ಜೊತೆ ಸಂಪರ್ಕದಲ್ಲಿದ್ದಾರೆ? ಹೀಗೆ ಇಂಚಿಂಚು ಮಾಹಿತಿ ಕಲೆ ಹಾಕಲು ಗುಪ್ತ ಪಡೆಗೆ ಸಿಎಂ ನಿರ್ದೇಶನ ನೀಡಿದ್ದಾರೆ ಎನ್ನಲಾಗಿದೆ.
ಒಟ್ಟಿನಲ್ಲಿ ಇದೀಗ ಮೈತ್ರಿ ಸರ್ಕಾರದಲ್ಲಿ `ಗೂಢಚರ್ಯೆ’ಯ ಭಯ ಶುರುವಾಗಿದ್ದು, ಗುಪ್ತ್ ಗುಪ್ತ್ ಕಾರ್ಯಾಚರಣೆಯಿಂದ ಸಿಎಂಗೆ ಅನುಕೂಲ ಆಗುತ್ತಾ ಎಂಬುದನ್ನು ಕಾದು ನೋಡಬೇಕು.