ಬೆಂಗಳೂರು: ಕರ್ನಾಟಕ ಕಾಂಗ್ರೆಸ್ನಲ್ಲಿ (Congress) ನಡೆಯುತ್ತಿದ್ದ ನಾಯಕತ್ವ ಬದಲಾವಣೆ ಸಮರದಲ್ಲಿ ಈಗ ಕದನ ವಿರಾಮ ಘೋಷಣೆಯಾಗಿದೆ. ಕಳೆದ ಒಂದು ತಿಂಗಳಿನಿಂದ ಸಿಎಂ ಸ್ಥಾನಕ್ಕಾಗಿ ಡಿಕೆ ಶಿವಕುಮಾರ್ (DK Shivakumar) ಹಾಗೂ ಸಿದ್ದರಾಮಯ್ಯ ನಡುವೆ ನಡೆಯುತ್ತಿದೆ ಎನ್ನಲಾದ ಯುದ್ಧಕ್ಕೆ ಒಂದೇ ಒಂದು ಬ್ರೇಕ್ಫಾಸ್ಟ್ ಮೀಟಿಂಗ್ ಅಲ್ಪ ವಿರಾಮ ಇಟ್ಟಿದ್ದು, ಮುಂದಿನ ನಿರ್ಧಾರ ಹೈಕಮಾಂಡ್ ಮೇಲೆ ಬಿಟ್ಟಿದ್ದಾರೆ.
ಅಂದ್ಹಾಗೆ ನಿನ್ನೆ ಸೋನಿಯಾ ಗಾಂಧಿ (Sonia Gandhi) ನೇತೃತ್ವದಲ್ಲಿ ಹೈಕಮಾಂಡ್ ಸಭೆ ನಡೆಯಲಾಗಿತ್ತಾದ್ರೂ ಕರ್ನಾಟಕದ ರಾಜಕೀಯ ಬೆಳವಣಿಗೆ ವಿಚಾರವಾಗಿ ಯಾವುದೇ ಚರ್ಚೆ ನಡೆದಿರಲಿಲ್ಲ. ಸಂಸತ್ ಅಧಿವೇಶನ ಅಜೆಂಡಾಗಳ ಬಗ್ಗೆ ಚರ್ಚೆ ನಡೆದಿತ್ತು. ಈ ಬೆನ್ನಲ್ಲೇ ಇಂದು ರಾಜ್ಯದ ವಿದ್ಯಮಾನಗಳ ಬಗ್ಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjun Kharge), ʻಕೈʼ ನಾಯಕಿ ಸೋನಿಯಾ ಗಾಂಧಿ ಅವರಿಗೆ ವರದಿ ನೀಡಿದ್ದಾರೆ ಎಂದು ಪಕ್ಷದ ಉನ್ನತ ಮೂಲಗಳಿಂದ ತಿಳಿದುಬಂದಿದೆ.
ರಾಜ್ಯದಲ್ಲಿ ನಡೆಯುತ್ತಿರುವ ʻಕುರ್ಚಿʼ ಫೈಟ್, ಬ್ರೇಕ್ ಫಾಸ್ಟ್ ಮೀಟಿಂಗ್, ಜಂಟಿ ಸುದ್ದಿಗೋಷ್ಠಿ ಬಗ್ಗೆ ಖರ್ಗೆ ಅವರು ಸೋನಿಯಾ ಗಾಂಧಿ ಅವರಿಗೆ ವರದಿ ನೀಡಿದ್ದು, ಮಧ್ಯಪ್ರವೇಶಿಸುವಂತೆ ಮನವಿ ಮಾಡಿದ್ದಾರೆ. 2-3 ನಿಮಿಷಗಳಲ್ಲಿ ರಾಜ್ಯದ ವಿಷಯ ಪ್ರಸ್ತಾಪಿಸಿದ್ದಾರೆ. ಇದಕ್ಕೆ ಶೀಘ್ರವೇ ಪರಿಶೀಲಿಸುವುದಾಗಿ ಸೋನಿಯಾ ಗಾಂಧಿ ತಿಳಿಸಿದ್ದಾರೆ. ಆದ್ರೆ ಸಿಎಂ, ಡಿಸಿಎಂ ದೆಹಲಿ ಬುಲಾವ್ ವಿಚಾರನ್ನ ತಾತ್ಕಾಲಿಕವಾಗಿ ಮುಂದೂಡಿದ್ದಾರೆ.
ʻಹೈʼಆದೇಶದತ್ತ ಚಿತ್ತ
ಕುರ್ಚಿಗಾಗಿ ಜಿದ್ದಿಗೆ ಬಿದ್ದಿರುವ ಡಿಕೆ ಶಿವಕುಮಾರ್ ಹೈಕಮಾಂಡ್ ಆದೇಶ ಏನಾಗುತ್ತೆ ಅಂತ ಚಿತ್ತ ಹರಿಸಿದ್ದಾರೆ. ಹೈಕಮಾಂಡ್ ಹೇಳಿದಂತೆ ನಡೆದುಕೊಳ್ತೀವಿ ಅಂತ ಹೇಳಿರುವ ಡಿಕೆಶಿ-ಸಿದ್ದು ನಡುವೆ ನಿನ್ನೆ ಸಂಧಾನದ ಬ್ರೇಕ್ಫಾಸ್ಟ್ ನಡೆದಿದೆ. ಬ್ರೇಕ್ಫಾಸ್ಟ್ ಮೂಲಕ ಶೀತಲ ಸಮರಕ್ಕೆ ಅಲ್ಪ ವಿರಾಮ ಹಾಕಿದ್ದಾರೆ. ನಮ್ಮಿಬ್ಬರ ನಡುವೆ ಯಾವುದೇ ಭಿನ್ನಾಭಿಪ್ರಾಯ ಇಲ್ಲ ಅಂತ ಡಿಕೆಶಿ ಪುನರುಚ್ಛರಿಸಿದ್ದಾರೆ.



