ತುಮಕೂರು: ಉಪಚುನಾವಣೆಯಲ್ಲಿ ನಾಡಿನ ಜನರು ನಮಗೆ ಆಶೀರ್ವಾದ ಮಾಡಿದ್ದಾರೆ. ಹಾಗಾಗಿ ನೆಮ್ಮದಿಯಿಂದ ಎಲ್ಲಾ ಕಾರ್ಯಕ್ರಮಗಳನ್ನು ಮಾಡಲು ಸಾಧ್ಯವಾಗುತ್ತಿದೆ. ಇನ್ನೂ ಮೂರುವರೆ ವರ್ಷಗಳ ಕಾಲ ಯಾವುದೇ ತಂಟೆ ತಕರಾರು ಇಲ್ಲದೇ ಕೆಲಸ ಮಾಡಿಕೊಂಡು ಹೋಗುತ್ತೇವೆ ಎಂದು ಸಿಎಂ ಯಡಿಯೂರಪ್ಪ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಜಿಲ್ಲೆಯ ಚಿಕ್ಕನಾಯಕನಹಳ್ಳಿಯ ಕುಪ್ಪೂರು ಮಠದ ಧಾರ್ಮಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಸಿಎಂ, ಉಪ ಚುನಾವಣೆ 12 ಸ್ಥಾನ ಗೆದ್ದಿದಕ್ಕೆ ಈ ಕಾರ್ಯಕ್ರಮದಲ್ಲಿ ನೆಮ್ಮದಿಯಿಂದ ಬಂದು ಭಾಗವಹಿಸಿದ್ದೇನೆ. ಇಲ್ಲದಿದ್ದರೆ ಸಮಾಧಾನ ಇರುತ್ತಿರಲಿಲ್ಲ. ಅದಕ್ಕಾಗಿ ನಾಡಿನ ಜನತೆಗೆ ಅಭಿನಂದನೆ ಸಲ್ಲಿಸುತ್ತೆನೆ ಎಂದರು.
ಮುಂದಿನ ಅವಧಿಯಲ್ಲಿ ನಾಡಿನ ರೈತರ ಸಂಕಷ್ಟಗಳನ್ನು ಬಗೆಹರಿಸುವ ಆದ್ಯತೆ ಜೊತೆಗೆ, ಮಹಿಳಾ ಸಬಲೀಕರಣ ಹಾಗೂ ನಿರುದ್ಯೋಗದ ಸಂಬಂಧಿಸಿದಂತೆ ಫೆಬ್ರವರಿ ಬಜೆಟಿನಲ್ಲಿ ಸಾಕಷ್ಟು ಯೋಜನೆಗಳನ್ನು ಘೋಷಿಸುತ್ತೇವೆ ಎಂದು ಭರವಸೆ ನೀಡಿದರು. ಕರ್ನಾಟಕವನ್ನ ಮಾದರಿ ರಾಜ್ಯವನ್ನಾಗಿ ಮಾಡುವ ಗುರಿ ಇದ್ದು, ಸ್ವಾಭಿಮಾನದಿಂದ ಬದುಕಲು ನೀವೆಲ್ಲಾ ಏನು ನಿರೀಕ್ಷೆ ಮಾಡುತ್ತಿರೋ ಅದನೆಲ್ಲಾ ಜಾರಿಗೆ ತಂದು ನಾಡು ಸುಭೀಕ್ಷೆಯಾಗಿರುವಂತೆ ಗಮನವಹಿಸುತ್ತೇವೆ ಎಂದರು.