ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರು ಲಾಕ್ಡೌನ್ ಬಗ್ಗೆ ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳ ಜೊತೆ ಮ್ಯಾರಥಾನ್ ವಿಡಿಯೋ ಕಾನ್ಫರೆನ್ಸ್ ನಡೆಸಿದ್ದು, ಈ ವೇಳೆ ತಮಿಳುನಾಡು ಸಿಎಂ ಸೇರಿದಂತೆ ಹಲವು ಮುಖ್ಯಮಂತ್ರಿಗಳು ವಿಶೇಷ ಪ್ಯಾಕೇಜ್ ನೀಡುವಂತೆ ಮನವಿ ಮಾಡಿದ್ದಾರೆ. ಆದರೆ ಸಿಎಂ ಬಿಎಸ್ ಯಡಿಯೂರಪ್ಪ ಅವರು ಪ್ರಧಾನಿಗಳ ಎದುರು ರಾಜ್ಯಕ್ಕೆ ವಿಶೇಷ ಪ್ಯಾಕೇಜ್ ನೀಡುವ ಪ್ರಸ್ತಾಪ ಮಾಡಿಲ್ಲ ಎಂಬ ಮಾಹಿತಿ ಲಭಿಸಿದೆ.
ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ರಾತ್ರಿ 7 ಗಂಟೆ ಸುಮಾರಿಗೆ 20 ನಿಮಿಷ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಸಂವಾದ ನಡೆಸಿದ್ದು, ಸಭೆಯಲ್ಲಿ ಕೇಂದ್ರ ಸರ್ಕಾರಕ್ಕೆ ಕೆಲವೊಂದು ಸಲಹೆ ಕೊಟ್ಟಿದ್ದಾರೆ. ಮೇ ಅಂತ್ಯದವರೆಗೆ ಈಗಿರುವ ಲಾಕ್ಡೌನ್ ಮುಂದುವರಿಯವುದು. ಬೆಂಗಳೂರಿಗೆ ರೈಲು, ವಿಮಾನಯಾನ ಸೇವೆ ಸದ್ಯ ಆರಂಭ ಮಾಡದಿರುವುದು. ರೆಡ್, ಗ್ರೀನ್, ಆರೆಂಜ್ ಝೋನ್ ಬದಲಾಗಿ ಕಂಟೈನ್ಮೆಂಟ್ ಝೋನ್ ಮಾತ್ರ ಮುಂದುವರಿಸುವ ವಿಶೇಷ ಸಲಹೆಗಳನ್ನು ನೀಡಿದ್ದಾರೆ. ಆದರೆ ಈ ವೇಳೆ ರಾಜ್ಯಕ್ಕೆ ವಿಶೇಷ ಪ್ಯಾಕೇಜ್ ನೀಡುವ ಪ್ರಸ್ತಾಪ ಮಾಡಿಲ್ಲ.
ಮೇ 08ರಂದು ಸಿಎಂ ಬಿಎಸ್ ಯಡಿಯೂರಪ್ಪ ಅವರನ್ನು ಭೇಟಿ ಮಾಡಿದ್ದ ಸಿದ್ದರಾಮಯ್ಯ ನೇತೃತ್ವದ ಪ್ರತಿಪಕ್ಷ ನಿಯೋಗ, ಲಾಕ್ಡೌನ್ನಿಂದ ರಾಜ್ಯದಲ್ಲಿ ಜನತೆ ಎದುರಿಸುತ್ತಿರುವ ಸಂಕಷ್ಟ ನಿವಾರಿಸಲು 50 ಸಾವಿರ ಕೋಟಿ ವಿಶೇಷ ಆರ್ಥಿಕ ಪ್ಯಾಕೇಜ್ ಘೋಷಿಸುವಂತೆ ಕೇಂದ್ರವನ್ನು ಒತ್ತಾಯ ಮಾಡಬೇಕು ಎಂದು ಆಗ್ರಹಿಸಿದ್ದರು.
ಉಳಿದಂತೆ ಮೇ 17ರ ನಂತರ ಲಾಕ್ಡೌನ್ ವಿಸ್ತರಿಸಬೇಕಾ? ಅಥವಾ ಸಡಿಲ ಮಾಡಬೇಕಾ? ಎಂಬ ಬಗ್ಗೆ ಸಿಎಂ ಬಿಎಸ್ವೈ ಸೇರಿದಂತೆ ಎಲ್ಲಾ ಮುಖ್ಯಮಂತ್ರಿಗಳು ತಮ್ಮ ಸಲಹೆಗಳನ್ನು ಪ್ರಧಾನಿಗಳಿಗೆ ನೀಡಿದರು. ಎಲ್ಲಾ ಸಿಎಂಗಳೊಂದಿಗೆ ಪ್ರತ್ಯೇಕವಾಗಿ ಪ್ರಧಾನಿಗಳು ಚರ್ಚೆ ನಡೆಸಿದ ಕಾರಣ ಹಲವು ಸಲಹೆಗಳನ್ನು ಮುಖ್ಯಮಂತ್ರಿಗಳು ಪ್ರಧಾನಿಗಳ ಮುಂದಿಟ್ಟರು. ಇದೇ ವೇಳೆ ತಮಿಳುನಾಡು ಸಿಎಂ ಕೋವಿಡ್-19 ವಿರುದ್ಧ ಹೋರಾಟಲು ರಾಜ್ಯಕ್ಕೆ 2 ಸಾವಿರ ಕೋಟಿ ರೂ. ವಿಶೇಷ ಅನುದಾನ ನೀಡುವಂತೆ ಮನವಿ ಮಾಡಿದರು. ಅಲ್ಲದೇ ಜಿಎಸ್ಟಿ ಪರಿಹಾರ ಬಾಕಿ ಉಳಿಸಿಕೊಂಡಿರುವ ಹಣ ಹಾಗೂ 2020-21ರ ಅವಧಿಯಲ್ಲಿ ಅನುಮತಿಸಲಾಗಿರುವ ಸಾಲಕ್ಕಿಂತ ಶೇ.33 ರಷ್ಟು ಹೆಚ್ಚುವರಿ ಸಾಲ ನೀಡುವಂತೆ ಮನವಿ ಮಾಡಿದ್ದರು.
ಇತ್ತ ಕೊರೊನಾದಿಂದಾಗಿ ಕುಂಠಿತಗೊಂಡಿರುವ ದೇಶದ ಆರ್ಥಿಕತೆಯ ಬಲವರ್ಧನೆಗೆ ಕೇಂದ್ರ ಸರ್ಕಾರ ಸಾಧ್ಯ ಇರೋ ಎಲ್ಲಾ ದಾರಿಗಳ ಶೋಧದಲ್ಲಿದೆ. ಮೋದಿ ಜೊತೆಗಿನ ಇವತ್ತಿನ ಸಭೆಯಲ್ಲಿ ಮುಖ್ಯಮಂತ್ರಿಗಳ ಸ್ಪೆಷಲ್ ಪ್ಯಾಕೇಜ್ ಮನವಿಯ ಬೆನ್ನಲ್ಲೇ ನಿತನ್ ಗಡ್ಕರಿ ಅವರು ಇನ್ನೊಂದೆರಡು ದಿನಗಳಲ್ಲಿ ಕೈಗಾರಿಕೆಗಳಿಗೆ ವಿಶೇಷ ಪ್ಯಾಕೇಜ್ ಘೋಷಣೆ ಮಾಡೋದಾಗಿ ಸುಳಿವು ನೀಡಿದ್ದಾರೆ. ಇನ್ನು, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಾತನಾಡಿ, ಕೇಂದ್ರ ಸರ್ಕಾರಿ ನೌಕರರ ವೇತನ ಕಡಿತ ಇಲ್ಲ ಎಂದು ಸ್ಪಷ್ಟ ಪಡಿಸಿದ್ದಾರೆ.
Participated in the Video Conference held by PM Shri @NarendraModi with Chief Ministers of all states. Strategy to tackle #Covid19 & measures to be taken for relaxation of lockdown were discussed. My cabinet colleagues and senior officials were present. pic.twitter.com/phTQTcAUKP
— B.S. Yediyurappa (@BSYBJP) May 11, 2020