– ಜನಪ್ರಿಯ ಯೋಜನೆಗಳು ರಾಮನಗರದಿಂದ ಶಿಫ್ಟ್
ಬೆಂಗಳೂರು: ಮುಖ್ಯಮಂತ್ರಿಗಳಾಗಿ ಅಧಿಕಾರ ವಹಿಸಿಕೊಂಡ ಬಳಿಕ ಮಾತನಾಡಿದ್ದ ಸಿಎಂ ಬಿಎಸ್ವೈ, ಯಾವುದೇ ಕಾರಣಕ್ಕೂ ದ್ವೇಷದ ರಾಜಕಾರಣ ಮಾಡುವುದಿಲ್ಲ ಎಂದಿದ್ದರು. ಆದರೆ ರಾಜಕೀಯ ಬೆಳವಣಿಗೆಗಳು ಬದಲಾದಂತೆ ಸಿಎಂ ಬಿಎಸ್ವೈ ತಮ್ಮ ನಿರ್ಧಾರವನ್ನು ಬದಲಿಸಿದ್ದು ಇದಕ್ಕೆ ಉದಾಹರಣೆ ಎಂಬಂತೆ ರಾಮನಗರಕ್ಕೆ ನೀಡಲಾಗಿದ್ದ ಪ್ರಮುಖ ಯೋಜನೆಯನ್ನು ಬಿಎಸ್ವೈ ವಾಪಸ್ ಪಡೆದಿದ್ದಾರೆ.
ಈ ಹಿಂದೆ ಸಚಿವರಾಗಿದ್ದ ಡಿಕೆ ಶಿವಕುಮಾರ್ ಅವರ ನಿವಾಸಕ್ಕೆ ಭೇಟಿ ನೀಡಿದ್ದ ಬಿಎಸ್ವೈ ಅವರು, ತಮ್ಮ ಜಿಲ್ಲೆಗೆ ಬೇಕಾಗಿದ್ದ ಯೋಜನೆಗಳನ್ನು ಮಂಜೂರು ಮಾಡಿಸಿಕೊಂಡಿದ್ದರು. ಅಲ್ಲಿಂದ ಬಿಎಸ್ವೈ ಹಾಗೂ ಡಿಕೆಶಿ ನಡುವೆ ಉತ್ತಮ ಬಾಂಧವ್ಯ ಬೆಳೆದಿತ್ತು. ಆದರೆ ಮೈತ್ರಿ ಸರ್ಕಾರದ ಬಳಿಕ ಡಿಕೆಶಿ ಹಾಗೂ ಎಚ್ಡಿ ಕುಮಾರಸ್ವಾಮಿ ಅವರ ನಡುವೆ ಆಪ್ತತೆ ಹೆಚ್ಚಾಗಿತ್ತು. ಇದೇ ಬಿಎಸ್ವೈ ಅವರು ತಮ್ಮ ಮನಸ್ಸು ಬದಲಿಸಲು ಕಾರಣ ಎನ್ನಲಾಗಿದೆ.
ಯಾವ ಯೋಜನೆಗಳು ಸ್ಥಳಾಂತರ?
ಮೈತ್ರಿ ಸರ್ಕಾರಯಾದ ಬಳಿಕ ರಾಮನಗರ ಹಾಗೂ ಕನಕಪುರಕ್ಕೆ ಹಲವು ಯೋಜನೆಗಳು ಮಂಜೂರಾಗಿತ್ತು. ಪ್ರಮುಖವಾಗಿ ವೈದ್ಯಕೀಯ ಕಾಲೇಜು ಕನಕಪುರಕ್ಕೆ ಮಂಜೂರಾಗಿತ್ತು. ಆದರೆ ಈ ಯೋಜನೆಯನ್ನು ಸಿಎಂ ಬಿಎಸ್ವೈ ಅವರು ಚಿಕ್ಕಬಳ್ಳಾಪುರಕ್ಕೆ ಸ್ಥಳಾಂತರ ಮಾಡಿದ್ದರು. ಇದಕ್ಕೆ ಸಮರ್ಥನೆಯನ್ನು ನೀಡಿದ್ದ ಬಿಜೆಪಿ ಸರ್ಕಾರ, ಜಿಲ್ಲೆಗೆ ಒಂದರಂತೆ ವೈದ್ಯಕೀಯ ಕಾಲೇಜು ನೀಡಲು ನಿರ್ಧರಿಸಲಾಗಿದೆ. ಆದರೆ ಇಲ್ಲಿ ರಾಮನಗರ ಮತ್ತು ಕನಕಪುರಕ್ಕೆ ಎರಡಕ್ಕೂ ನೀಡಲಾಗಿದೆ ಎಂದಿದ್ದರು.
ಸದ್ಯ ವೈದ್ಯಕೀಯ ಕಾಲೇಜು ಬಳಿಕ ಚಿತ್ರನಗರಿ, ಆರೋಗ್ಯ ವಿಶ್ವವಿದ್ಯಾಲಯ ಮತ್ತು ರಾಮನಗರಕ್ಕೆ ಕಾವೇರಿ ನೀರು ಯೋಜನೆಗಳನ್ನು ರಾಮನಗರದಿಂದ ಸ್ಥಳಾಂತರ ಮಾಡಲು ಬಿಎಸ್ವೈ ನೇತೃತ್ವದ ಸರ್ಕಾರ ನಿರ್ಧಾರ ಮಾಡಿದೆ ಎನ್ನಲಾಗಿದೆ. ಆರೋಗ್ಯ ವಿವಿಯನ್ನು ಶ್ರೀರಾಮುಲು ಕ್ಷೇತ್ರಕ್ಕೆ ನೀಡಲು ಮುಂದಾಗಿದ್ದರೆ ಎಂಬ ಮಾಹಿತಿ ಲಭಿಸಿದೆ. ಆ ಮೂಲಕ ಕುಮಾರಸ್ವಾಮಿ ಹಾಗೂ ಡಿಕೆಶಿ ವಿರುದ್ಧ ಬ್ರಹ್ಮಾಸ್ತ್ರವನ್ನು ಪ್ರಯೋಗಿಸಿ ಅವರ ಭದ್ರಕೋಟೆಯನ್ನು ಮುರಿಯಲು ತಂತ್ರ ಬಳಕೆ ಮಾಡಿದ್ದಾರೆ ಎನ್ನಲಾಗಿದೆ.