ಬೆಂಗಳೂರು: ಗಣೇಶೋತ್ಸವ ಆಚರಣೆಗೆ ಅನುಮತಿ ನೀಡಲು ಹಿಂದೂ ಸಂಘಟನೆಗಳ ಭಾರೀ ಒತ್ತಾಯ ಹಿನ್ನೆಲೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಗಣೇಶೋತ್ಸವಕ್ಕೆ ಷರತ್ತುಬದ್ಧ ಅನುಮತಿ ನೀಡುವ ಸಾಧ್ಯತೆಯಿದೆ.
ಗಣೇಶೋತ್ಸವ ಆಚರಣೆಗೆ ಸಂಬಂಧಿಸಿದಂತೆ ಹಿಂದೂ ಸಂಘಟನೆಗಳು ಮತ್ತು ಸ್ವಪಕ್ಷೀಯರ ಒತ್ತಡ ಹಾಕುತ್ತಿರುವುದನ್ನು ಮನಗಂಡು ಬೊಮ್ಮಾಯಿ ಷರತ್ತುಬದ್ಧ ಅನುಮತಿ ನೀಡಲು ಚಿಂತನೆ ನಡೆಸಿದ್ದಾರೆ ಎನ್ನಲಾಗುತ್ತಿದೆ. ಇದನ್ನೂ ಓದಿ: ಸಾಮೂಹಿಕ ಗಣೇಶೋತ್ಸವಕ್ಕೆ ಅನುಮತಿ ನೀಡಿ- ಚಕ್ರವರ್ತಿ ಸೂಲಿಬೆಲೆ ಒತ್ತಾಯ
ಸಾರ್ವಜನಿಕವಾಗಿ ಗಣೇಶ ಮೂರ್ತಿ ಪ್ರತಿಷ್ಠಾಪನೆಗೆ ಭಾರೀ ಕೂಗು ಕೇಳಿ ಬರುತ್ತಿದ್ದು, ಇದರೊಂದಿಗೆ ಗಣೇಶೋತ್ಸವಕ್ಕೆ ಅನುಮತಿಸಲು ಬಿಜೆಪಿಯವರಿಂದಲೇ ಸರ್ಕಾರದ ಮೇಲೆ ಹೆಚ್ಚು ಒತ್ತಡ ಕೇಳಿಬಂದಿದೆ. ಚುನಾವಣೆ, ಮದುವೆ, ವಿಜಯೋತ್ಸವ ಆಚರಣೆ ಭಾರೀ ಸಂಖ್ಯೆಯಲ್ಲಿ ಜನ ಸೇರುತ್ತಿದ್ದಾರೆ. ಹೀಗಿರುವಾಗ ಗಣೇಶೋತ್ಸವ ಆಚರಣೆಗೆ ನಿರ್ಬಂಧ ಯಾಕೆ? ರಾಜಕಾರಣಿಗಳಿಗೆ ಒಂದು ನ್ಯಾಯ? ಜನರಿಗೆ ಒಂದು ನ್ಯಾಯ ಎಷ್ಟು ಸರಿ ಎಂದು ಪ್ರಶ್ನಿಸಿ ಹಿಂದೂ ಸಂಘಟನೆಗಳ ನಾಯಕರು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದರು.
ಈ ಬಗ್ಗೆ ಇಂದು ಸಂಜೆ 4 ಗಂಟೆಗೆ ಕೊರೊನಾ ನಿಯಂತ್ರಣ ಸಂಬಂಧ ಮಹತ್ವದ ಸಭೆ ನಡೆಸಿ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದ್ದು, ಒಂದೆರಡು ದಿನಗಳಲ್ಲೇ ಷರತ್ತಿನ ಗಣೇಶೋತ್ಸವ ಆಚರಣೆಗೆ ಮಾರ್ಗಸೂಚಿ ಬಿಡುಗಡೆಯಾಗುವ ಸೂಚನೆಯಿದೆ. ಇದನ್ನೂ ಓದಿ: ಶುಕ್ರವಾರ ನಮಾಜ್, ಸಂಡೇ ಪ್ರಾರ್ಥನೆ ನಡೆಯುತ್ತಲ್ವಾ? ಗಣೇಶೋತ್ಸವಕ್ಕೂ ಅವಕಾಶ ಕೊಡಿ: ಪ್ರತಾಪ್ ಸಿಂಹ
ಸರ್ಕಾರ ಯಾವ ಷರತ್ತುಗಳನ್ನು ಹಾಕಬಹುದು?
ಹಬ್ಬವನ್ನು ಸರಳವಾಗಿ ದೇವಸ್ಥಾನ, ಮನೆ, ಸರ್ಕಾರಿ, ಖಾಸಗಿ, ಸಾರ್ವಜನಿಕ ಬಯಲು ಪ್ರದೇಶಗಳಲ್ಲಿ ಕನಿಷ್ಟ ಸಂಖ್ಯೆಯೊಂದಿಗೆ ಆಚರಣೆಗೆ ಅವಕಾಶ ಸಾಧ್ಯತೆ ಇದೆ. ಸಾರ್ವಜನಿಕ ಸ್ಥಳಗಳಲ್ಲಿ 4 ಅಡಿ ಎತ್ತರದ ಹಾಗೂ ಮನೆಯೊಳಗೆ 2 ಅಡಿ ಎತ್ತರದ ಗಣೇಶ ಮೂರ್ತಿಗೆ ಪೂಜೆ ಅವಕಾಶ.
ಒಂದು ವಾರ್ಡಿಗೆ ಅಥವಾ ಗ್ರಾಮಕ್ಕೆ ಒಂದು ಅಥವಾ ಎರಡು ಸಾರ್ವಜನಿಕ ಗಣೇಶೋತ್ಸವ ಆಚರಿಸಲು ಅವಕಾಶ. ಕೋವಿಡ್ ನಿಯಮಗಳ ಪಾಲನೆಯೊಂದಿಗೆ ಒಮ್ಮೆಲೇ 20 ಜನ ಭಕ್ತಾದಿಗಳಿಗೆ ಮಾತ್ರ ಅವಕಾಶ ನೀಡಿ ಸ್ಥಳದಲ್ಲಿ ಮಾಸ್ಕ್, ಸ್ಯಾನಿಟೈಸರ್, ಸಾಮಾಜಿಕ ಅಂತರ ಕಡ್ಡಾಯ ಗೊಳಿಸಬಹುದು. ಇದನ್ನೂ ಓದಿ: ಗುಂಡು ಹೊಡೆಯೋದಾದ್ರೆ ಹೊಡಿರಿ, ವಿಜೃಂಭಣೆಯಿಂದ ಗಣೇಶೋತ್ಸವ ಆಚರಣೆ: ಯತ್ನಾಳ್
ಗಣೇಶ ಮೂರ್ತಿ ಪ್ರತಿಷ್ಠಾಪನೆ ಸ್ಥಳದಲ್ಲಿ ಸಾಂಸ್ಕೃತಿಕ, ಸಂಗೀತ, ನೃತ್ಯದಂತಹ ಮನರಂಜನಾ ಕಾರ್ಯಕ್ರಮಗಳಿಗೆ ಅವಕಾಶ ನೀಡದೆ ಇರಲು ಸರ್ಕಾರ ಪ್ಲ್ಯಾನ್ ಮಾಡಿದೆ. ಇದಲ್ಲದೆ ಗಣೇಶ ಮೂರ್ತಿಗಳನ್ನು ತರುವಾಗ ಮತ್ತು ವಿಸರ್ಜಿಸುವಾಗ ಮೆರವಣಿಗೆಗಳಿಗೆ ಅವಕಾಶ ಕೊಡದಿರಲು ಸರ್ಕಾರ ನಿರ್ಧರಿಸುವ ಸಾಧ್ಯತೆ ಇದೆ.