ಬೆಂಗಳೂರು: ಸರ್ಕಾರಿ ನೌಕರರಿಗೆ 17 ಪರ್ಸೆಂಟ್ ವೇತನ ಹೆಚ್ಚಳ ಮಾಡುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಘೋಷಿಸಿದರು.
ಸರ್ಕಾರಿ ನೌಕರರ (Government Employees) ಮುಷ್ಕರ ಹಿನ್ನೆಲೆಯಲ್ಲಿ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಂಗಳವಾರ ನೌಕರರ ಜೊತೆ ಚರ್ಚೆ ಆದ ಬಳಿಕ ಹಣಕಾಸು ಇಲಾಖೆ ಅಧಿಕಾರಿಗಳ ಜೊತೆ ಮಾತಾಡಿದೆ, ಈ ವೇಳೆ ಒಂದು ಒಪ್ಪಂದಕ್ಕೆ ಬಂದಿದ್ದೇವೆ. 17% ಹೆಚ್ಚಳಕ್ಕೆ ಒಪ್ಪಿಗೆ ನೀಡಲಾಗಿದೆ. ಇದು ಮಧ್ಯಂತರ ಪರಿಹಾರ ರೂಪದಲ್ಲಿ ಇರಲಿದೆ. ಆಯೋಗದ ವರದಿ ಬಳಿಕ ಶೇಕಡವಾರು ಪ್ರಮಾಣದಲ್ಲಿ ಬದಲಾವಣೆ ಆಗಬಹುದು. ಸರ್ಕಾರಿ ನೌಕಕರು ಮುಷ್ಕರ ಕೈಬಿಡ್ತಾರೆ ಎಂಬ ವಿಶ್ವಾಸ ಇದೆ ಎಂದು ತಿಳಿಸಿದರು.
ಎನ್ ಪಿಎಸ್ ರದ್ದು ಬಗ್ಗೆ ಸಮಿತಿ ರಚನೆ ಬಳಿಕ ಸರ್ಕಾರದಿಂದ ಮಹತ್ವದ ನಿರ್ಣಯ ಕೈಗೊಳ್ಳಲಾಗುವುದು. ಹೊಸ ಪಿಂಚಣಿ ಯೋಜನೆ (NPS) ರದ್ದು ಮಾಡುವ ಬೇಡಿಕೆ ಪರಾಮರ್ಶೆ ಮಾಡ್ತೇವೆ. ಎಸಿಎಸ್ ನೇತೃತ್ವದಲ್ಲಿ ಸಮಿತಿ ರಚಿಸುತ್ತೇವೆ. ಬೇರೆ ರಾಜ್ಯಗಳಲ್ಲಿ ಯಾವ ರೀತಿ ಪರಿಸ್ಥಿತಿ ಇದೆ ಅಂತ ಅಧ್ಯಯನ ನಡೆಸಿ ವರದಿ ಕೊಡಲು ಸೂಚಿಸ್ತೇವೆ ಎಂದರು.
ಒಟ್ಟಿನಲ್ಲಿ 7 ನೇ ವೇತನ ಆಯೋಗದಿಂದ ಸರ್ಕಾರ ಇನ್ನೂ ವರದಿ ಪಡೆದಿಲ್ಲ. ಆದರೆ ಸರ್ಕಾರಿ ನೌಕರರ ಒತ್ತಡ ತೀವ್ರವಾದ ಹಿನ್ನೆಲೆಯಲ್ಲಿ 17% ಮಧ್ಯಂತರ ಪರಿಹಾರಕ್ಕೆ ಭರವಸೆ ಕೊಟ್ಟಿದೆ. ಇದನ್ನೂ ಓದಿ: ಬುಧವಾರದಿಂದ ಸರ್ಕಾರಿ ನೌಕರರ ಮುಷ್ಕರ: ಯಾವ ಕಚೇರಿಗಳು ಬಂದ್ ಆಗಲಿವೆ?
ಚುನಾವಣೆಯ ಹೊತ್ತಲ್ಲೇ ಸರ್ಕಾರದ ವಿರುದ್ಧ ಸರ್ಕಾರಿ ನೌಕರರು ಸಮರ ಸಾರಿದ್ದಾರೆ. 7ನೇ ವೇತನ ಆಯೋಗ ಜಾರಿ, ಹೊಸ ಪಿಂಚಣಿ ನೀತಿ ವಿರೋಧಿಸಿ ಹಳೇ ಪಿಂಚಣಿ ನೀತಿಗೆ ಆಗ್ರಹಿಸಿ ಸರ್ಕಾರಿ ನೌಕರರು ಮುಷ್ಕರ (Indefinite Strike) ಕೈಗೊಂಡಿದ್ದಾರೆ.