ಬೆಂಗಳೂರು: ಆಡಳಿತ ಯಂತ್ರಕ್ಕೆ ಚುರುಕು ನೀಡುವ, ಅಭಿವೃದ್ಧಿ ಕಾರ್ಯಗಳನ್ನು ಪರಿಶೀಲನೆ ನಡೆಸುವ ಉದ್ದೇಶದಿಂದ ಸಿಎಂ ಬಿಎಸ್ ಯಡಿಯೂರಪ್ಪ ಅವರು ನಾಳೆ ಬೆಂಗಳೂರು ನಗರ ಪ್ರದಕ್ಷಿಣೆಯನ್ನು ಮಾಡಲಿದ್ದಾರೆ.
ಮುಖ್ಯಮಂತ್ರಿಗಳ ಸಿಟಿ ರೌಂಡ್ಸ್ ಗೆ ಬಿಎಂಟಿಸಿಯ ವೋಲ್ವೋ ಬಸ್ಗಳು ಸಿದ್ಧವಾಗಿದ್ದು, ನಗರದ ಹೆಬ್ಬಾಳ, ಟಿನ್ ಫ್ಯಾಕ್ಟರಿ, ಬೆಳ್ಳಂದೂರು ಹಾಗೂ ಸಿಲ್ಕ್ ಬೋರ್ಡ್ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸಿಎಂ ಪರಿಶೀಲನೆ ನಡೆಸಲಿದ್ದಾರೆ. ಬೆಳಗ್ಗೆ 9 ರಿಂದ ಮಧ್ಯಾಹ್ನ 12 ವರೆಗೆ ಸಿಎಂ ನಗರ ಸಂಚಾರ ಮಾಡಲಿದ್ದಾರೆ. ಈ ಹಿಂದೆ ಸಿದ್ದರಾಮಯ್ಯ ಸಿಎಂ ಆಗಿದ್ದ ಸಂದರ್ಭದಲ್ಲಿ ಬಸ್ಸಿನಲ್ಲೇ ನಗರ ಪ್ರದಕ್ಷಿಣೆ ನಡೆಸಿದ್ದರು. ಈ ವೇಳೆ ಬಿಎಂಟಿಸಿಯ ವೋಲ್ವೋ ಬಸ್ 2 ಬಾರಿ ಕೈ ಕೊಟ್ಟಿತ್ತು. ಈ ಹಿನ್ನೆಲೆ ಕಳೆದ ಬಾರಿಯಾದ ಘಟನೆ ಮರುಕಳಿಸದಂತೆ ಅಧಿಕಾರಿಗಳು ಎಚ್ಚರಿಕೆ ವಹಿಸಿದ್ದಾರೆ ಎಂಬ ಮಾಹಿತಿ ಲಭಿಸಿದೆ.
ಈ ಬಗ್ಗೆ ಮಾತನಾಡಿದ ಸಿಎಂ ಬಿಎಸ್ವೈ ಅವರು, ನಾಳೆ ಸಿಟಿ ರೌಂಡ್ಸ್ ಕಾರ್ಯಕ್ರಮ ಆಯೋಜಿಸಲಾಗಿದೆ. ಎರಡು ಬಸ್ಸಿನಲ್ಲಿ ಬೆಂಗಳೂರಿನ ಪ್ರಮುಖ ಸ್ಥಳಗಳಿಗೆ ಭೇಟಿ ನೀಡುತ್ತೇವೆ. ಭಾನುವಾರ ಆಗಿರುವುದರಿಂದ ಟ್ರಾಫಿಕ್ ಸಮಸ್ಯೆ ಇರುವ ಸಾಧ್ಯತೆಯೂ ಇದ್ದು. ಪರಿಣಾಮ 15-20 ಕಾರುಗಳಲ್ಲಿ ತೆರಳುವುದನ್ನು ಬಿಟ್ಟು ಬಸ್ಸಿನಲ್ಲಿ ತೆರಳಿ ಪರಿಶೀಲನೆ ನಡೆಸಲಿದ್ದೇವೆ. ನಮ್ಮ ಜೊತೆ ಎಲ್ಲಾ ಅಧಿಕಾರಿಗಳು ಬರುತ್ತಾರೆ ಎಂದರು.
ಇದೇ ವೇಳೆ ರಾಜ್ಯದಲ್ಲಿ ಎದುರಾಗಿರುವ ನೆರೆಗೆ ಪರಿಹಾರ ನೀಡುವ ವಿಚಾರದಲ್ಲಿ ಮಾಹಿತಿ ನೀಡಿದ ಸಿಎಂ ಬಿಎಸ್ವೈ, ಪ್ರವಾಹ ಪರಿಸ್ಥಿತಿ ಬಗ್ಗೆ ಪ್ರಧಾನಿ ಜೊತೆ ಮಾತನಾಡಿದ್ದೇನೆ. ಈ ಹಿಂದೆ ಕೂಡ ದೆಹಲಿಗೆ ಹೋದಾಗಲೂ ಚರ್ಚೆ ನಡೆಸಿದ್ದೆ. ಬಳಿಕ ಅಮಿತ್ ಶಾ ಹಾಗೂ ಹಣಕಾಸು ಸಚಿವರನ್ನು ಭೇಟಿ ಮಾಡಿದ್ದೆ. ಈಗಾಗಲೇ ಅಧಿಕಾರಿಗಳು ಬಂದು ಪ್ರವಾಹದ ಬಗ್ಗೆ ಕೇಂದ್ರಕ್ಕೆ ವರದಿ ಸಲ್ಲಿಸಿದ್ದಾರೆ. ನಾಲ್ಕಾರು ದಿನಗಳಲ್ಲಿ ಪರಿಹಾರ ಬಿಡುಗಡೆಯಾಗುವ ನಿರೀಕ್ಷೆ ಇದ್ದು, ಹೆಚ್ಚಿನ ಪ್ರಮಾಣದಲ್ಲಿ ನೆರವು ಸಿಗುತ್ತದೆ. ಬೇರೆಲ್ಲ ಕಾರ್ಯಗಳನ್ನು ಪಕ್ಕಕ್ಕೆ ಸರಿಸಿ, ಕಷ್ಟಕ್ಕೆ ಸಿಲುಕಿರುವವರಿಗೆ ನೆರವು ನೀಡುತ್ತೇವೆ ಎಂದು ಆಶ್ವಾಸನೆ ನೀಡಿದರು.