– ಸಿಎಂ ಪ್ರಭಾವ ಬಳಸಿಲ್ಲ; ಲೋಕಾ ಅಂತಿಮ ವರದಿಯಲ್ಲಿ ಉಲ್ಲೇಖ
– ಪಾರ್ವತಿ ಅವ್ರ ಗಮನಕ್ಕೆ ಬಾರದೇ ಕೆಲವೊಂದು ಪತ್ರ ವ್ಯವಹಾರ
ಬೆಂಗಳೂರು/ಮೈಸೂರು: ಸಿಎಂ ಮತ್ತು ಕುಟುಂಬದ ವಿರುದ್ಧದ ಮುಡಾ ಪ್ರಕರಣಕ್ಕೆ (MUDA Case) ಸಂಬಂಧಿಸಿದಂತೆ ಲೋಕಾಯುಕ್ತ ಅಂತಿಮ ವರದಿ ತಯಾರಿಸಿದ್ದು, ಇದರಲ್ಲಿನ ಸ್ಫೋಟಕ ಅಂಶಗಳು ʻಪಬ್ಲಿಕ್ ಟಿವಿʼಗೆ ಲಭ್ಯವಾಗಿದೆ. ವರದಿಯಲ್ಲಿ ಸಿಎಂ ಕುಟುಂಬಕ್ಕೆ ಕ್ಲೀನ್ಚಿಟ್ ಕೊಡುವ ಜೊತೆಗೆ ಸಿಎಂ ಕುಟುಂಬವೇ ಸಂತ್ರಸ್ತರು ಎಂದು ಲೋಕಾಯುಕ್ತ (Lokayukta) ಉಲ್ಲೇಖಿಸಿರುವುದಾಗಿ ಉನ್ನತ ಮೂಲಗಳಿಂದ ತಿಳಿದುಬಂದಿದೆ.
Advertisement
ಹೌದು. ಮೈಸೂರಿನ (Mysuru) ಕೆಸರೆಯಲ್ಲಿನ ತಮ್ಮ ಜಮೀನಿಗೆ ಬದಲಿಯಾಗಿ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ವಿಜಯನಗರದ 3 ಮತ್ತು 4ನೇ ಹಂತಗಳಲ್ಲಿ ವಿವಿಧ ಅಳತೆಯಲ್ಲಿ ಸಿಎಂ ಕುಟುಂಬಕ್ಕೆ 14 ನಿವೇಶನಗಳನ್ನ ಹಂಚಿಕೆ ಮಾಡಿತ್ತು. ಇದರಲ್ಲಿ ಅಕ್ರಮ ನಡೆದಿದೆ ಎಂದು ಪ್ರಕರಣ ದಾಖಲಾದ ಬಳಿಕ ಹೈಕೋರ್ಟ್ ಲೋಕಾಯುಕ್ತ ತನಿಖೆಗೆ ನೀಡಿತ್ತು. ಇದೀಗ ತನಿಖೆ ನಡೆಸಿದ ʻಲೋಕಾʼ ಅಂತಿಮ ವರದಿ ತಯಾರಿಸಿದ್ದು, ಸಿಎಂ ಕುಟುಂಬವೇ ಸಂತ್ರಸ್ತರು ಎಂದು ಉಲ್ಲೇಖಿಸಿದೆ ಎನ್ನಲಾಗಿದೆ.
Advertisement
Advertisement
ಮುಡಾ ಮಾಜಿ ಆಯುಕ್ತ ಪ್ರಮುಖ ಆರೋಪಿ:
ಮುಡಾದ ಮಾಜಿ ಆಯುಕ್ತ ನಟೇಶ್ ಈ ಪ್ರಕರಣ ಪ್ರಮುಖ ಆರೋಪಿ. ಭೂ ಮಾಲೀಕ ಎನ್ನಲಾದ ದೇವರಾಜು ಭೂಮಿ ಮಾರುವಾಗ ಸಾಕಷ್ಟು ಮಾಹಿತಿ ಮುಚ್ಚಿಟ್ಟಿದ್ರು. ಭೂಮಿಯನ್ನು ಮುಡಾ ವಶಕ್ಕೆ ಪಡೆದಿದ್ದ ಮಾಹಿತಿಯನ್ನೂ ಮುಚ್ಚಿಟ್ಟಿದ್ರು. ಈ ವಿಷಯ ತಿಳಿಯದೇ ಮಲ್ಲಿಕಾರ್ಜುನ್ ದೇವರಾಜು ಬಳಿಯಲ್ಲಿ ಜಮೀನು ಖರೀದಿ ಮಾಡಿದ್ದಾರೆ. ಆದ್ರೆ ಅಂದಿನ ಮುಡಾ ಆಯುಕ್ತರಾಗಿದ್ದ ನಟೇಶ್ ಸರ್ಕಾರದ ನಡಾವಳಿಯನ್ನು ಸಂಪೂರ್ಣವಾಗಿ ಗಾಳಿಗೆ ತೂರಿದ್ದಾರೆ ಎಂದು ಲೋಕಾಯುಕ್ತ ವರದಿಯಲ್ಲಿ ಉಲ್ಲೇಖಿಸಿರುವುದಾಗಿ ಮೂಲಗಳಿಂದ ತಿಳಿದುಬಂದಿದೆ.
Advertisement
ಲೋಕಾಯುಕ್ತ ವರದಿಯಲ್ಲಿನ ಸ್ಫೋಟಕ ಅಂಶಗಳೇನು?
ಸಿಎಂ ಮತ್ತು ಕುಟುಂಬದ ಸದಸ್ಯರು ಈ ಪ್ರಕರಣದಲ್ಲಿ ಸಂತ್ರಸ್ತರಾಗಿದ್ದಾರೆ. ಭೂಮಿ ಖರೀದಿ ಮಾಡುವಾಗ ಆಗಲಿ, ದಾನ ಮಾಡುವಾಗ ಆಗಲಿ ಯಾವುದೇ ಪ್ರಭಾವ ಬೀರಿಲ್ಲ. ಸಿಎಂ ಸಿದ್ದರಾಮಯ್ಯ ಸಹ ಅಧಿಕಾರ ದುರುಪಯೋಗ ಮಾಡಿಕೊಂಡಿರುವುದಾಗಲಿ ಪ್ರಭಾವ ಬೀರಿರುವುದಾಗಲಿ ಸಾಕ್ಷ್ಯ ಸಿಕ್ಕಿಲ್ಲ. ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿಯೂ ಪ್ರಭಾವ ಬೀರಿರೋದಕ್ಕೆ ಸಾಕ್ಷ್ಯಗಳು ಇಲ್ಲ ಎಂದು ಹೇಳಿದೆ.
2004ರಲ್ಲಿ ಮಲ್ಲಿಕಾರ್ಜುನಸ್ವಾಮಿ ಜಮೀನು ಖರೀದಿ ಮಾಡುವಾಗ ಯಾವುದೇ ಕಾನೂನು ತೊಡಕು ಇರಲಿಲ್ಲ. 5 ಲಕ್ಷದ 95,000 ರೂಪಾಯಿ ಹಣಕ್ಕೆ 3 ಎಕರೆ 26 ಗುಂಟೆ ಜಮೀನು ಖರೀದಿ ಮಾಡಿದ್ದಾರೆ. 3 ಎಕರೆ ಜಮೀನು ಖರೀದಿ ಮಾಡುವಾಗ ಯಾವುದೇ ಕಾನೂನು ಬಾಹಿರ, ನೊಂದಣಿ ಶುಲ್ಕದಲ್ಲಿ ಮೋಸ ಮಾಡಿಲ್ಲ. 2010 ರಲ್ಲಿ ಕೂಡ ದಾನ ಪತ್ರ ನೀಡುವಾಗ ಕೂಡ ಕಾನೂನಾತ್ಮವಾಗಿದೆ. ಕೆಸರೆಯ ಜಮೀನನ್ನು ಮುಡಾ ವಶಕ್ಕೆ ಪಡೆಯುವಾಗ ನಿಯಮ ಪ್ರಕಾರವೇ ಇದೆ. ಆದ್ರೆ 14 ಸೈಟುಗಳನ್ನ ಮರು ಹಂಚಿಕೆ ಮಾಡುವಾಗ ಕಾನೂನು ಬಾಹಿರ ಮಾಡಲಾಗಿದೆ ಎಂದು ವರದಿಯಲ್ಲಿ ಉಲ್ಲೇಖವಾಗಿದೆ.
ಸಿಎಂ ಅವರ ಪತ್ನಿ ಇದೇ ಜಾಗದಲ್ಲಿ ಸೈಟ್ ಬೇಕು ಅಂತ ಮನವಿ ಮಾಡಿಲ್ಲ. ಮುಡಾ ಅಧಿಕಾರಿಗಳ ಜೊತೆ ನಡೆದಿರೋ ಪತ್ರ ವ್ಯವಹಾರದಲ್ಲಿ ಕೆಲವೊಂದು ಲೋಪಗಳು ಇದ್ದಾವೆ. ಆದ್ರೆ ಪಾರ್ವತಿ ಅವರ ಗಮನಕ್ಕೆ ಬಾರದಂತೆ ಕೆಲವೊಂದು ಪತ್ರ ವ್ಯವಹಾರ ನಡೆದಿದೆ. ಮುಡಾದ ಆಯುಕ್ತರು ಮತ್ತು ಅಧಿಕಾರಿಗಳಿಂದ ನಡಾವಳಿಯ ದುರ್ಬಳಕೆ ಆಗಿದೆ. ಮುಡಾದ ಮಾಜಿ ಆಯುಕ್ತ ನಟೇಶ್ ಕೇವಲ 14 ಸೈಟ್ಗಳಲ್ಲಿ ಮಾತ್ರವಲ್ಲ ಸಾಕಷ್ಟು ಪ್ರಕರಣಗಳಲ್ಲಿ ಅಕ್ರಮ ಮಾಡಿದಂತೆ ಇದೆ. ಅದರ ಮುಂದುವರಿದ ತನಿಖೆ ಆಗಬೇಕಿದೆ ಎಂದು ಲೋಕಾಯುಕ್ತ ತನ್ನ ಅಂತಿಮ ವರದಿಯಲ್ಲಿ ಉಲ್ಲೇಖಿಸಿದೆ ಎಂದು ತಿಳಿದುಬಂದಿದೆ.