– ಬೆಂಗ್ಳೂರಿನಲ್ಲಿ ಇನ್ನೂ ಎರಡು ದಿನ ಮಳೆ
– ರಾಮನಗರ, ಮಂಡ್ಯ, ಕೋಲಾರದಲ್ಲೂ ವರುಣನ ಆಗಮನ
ಬೆಂಗಳೂರು: ಇಷ್ಟು ದಿನ ಬಿಸಿಲು ಸುಡುತ್ತಿದ್ದ ಸಿಲಿಕಾನ್ ಸಿಟಿ ಬೆಂಗಳೂರಿನ ಮಂದಿಗೆ ವರುಣನ ಸಿಂಚನವಾಗಿದ್ದು, ಇನ್ನೂ ಎರಡು ದಿನಗಳ ಕಾಲ ಮಳೆ ಆಗಲಿದೆ.
ಯಶವಂತಪುರ, ಮಲ್ಲೇಶ್ವರಂ, ರಾಜಾಜಿನಗರ ಸುತ್ತಮುತ್ತ ವರುಣನ ಸಿಂಚನವಾಗಿದ್ದು, ಮೋಡ ಕವಿದ ವಾತಾವರಣ ಇದೆ. ಒಡಿಶಾ ಮತ್ತು ತಮಿಳುನಾಡಿನಲ್ಲಿ ಕಾಣಿಸಿಕೊಂಡಿರುವ ಮೇಲ್ಮೈ ಸುಳಿಗಾಳಿ ಹಿನ್ನೆಲೆ ಮಳೆ ಆಗುತ್ತಿದೆ. ಬೆಂಗಳೂರು, ರಾಮನಗರ ಮಂಡ್ಯ ಮತ್ತು ಕೋಲಾರ ಇನ್ನೂ ಎರಡು ದಿನ ಮಳೆ ಆಗುವ ಸಾಧ್ಯತೆಗಳಿದ್ದು, ಮೋಡ ಕವಿದ ವಾತಾವರಣ ಇರಲಿದೆ.
ಶುಕ್ರವಾರ ಬೆಳಗ್ಗೆ ರಾಯಚೂರಿನಲ್ಲಿ ಮೋಡ ಕವಿದ ವಾತಾವರಣವಿತ್ತು. ಜೊತೆಗೆ ಜಿಟಿ ಜಿಟಿ ಮಳೆ ಕೂಡ ಆಗಿತ್ತು. ಬಿಸಿಲ ನಾಡು ವಿಜಯಪುರದಲ್ಲೂ ಹವಾಮಾನದಲ್ಲಿ ಭಾರೀ ಬದಲಾವಣೆ ಆಗಿತ್ತು. ಬಿಸಿಲ ನಾಡಲ್ಲಿ ಬೇಸಿಗೆಯಲ್ಲೂ ಚಳಿಯ ವಾತಾವರಣವಿತ್ತು, ಜಿಲ್ಲೆಯ ಕೆಲವು ಕಡೆ ಮಂಜು ಮುಸುಕಿತ್ತು.
ವಿಜಯಪುರ ಜಿಲ್ಲೆಯ ಸಾರವಾಡ ಬಳಿ ದಟ್ಟವಾದ ಮಂಜು ಆವರಿಸಿತ್ತು. ದಟ್ಟವಾದ ಮಂಜು ಇರುವ ಕಾರಣ ಚಾಲಕರು ಹೆಡ್ಲೈಟ್ ಬಳಸಿ ವಾಹನ ಚಲಾಯಿಸುತ್ತಿದ್ದರು.