ಬೆಂಗಳೂರು: ನಂದಿನಿ ಕರ್ನಾಟಕದ ಹೆಮ್ಮೆಯ ಬ್ರ್ಯಾಂಡ್, ಈಗ ಸರ್ಕಾರದ ಅಂಗ ಸಂಸ್ಥೆಯಾದ ಬಿಎಂಟಿಸಿಗೆ (BMTC) ಬೇಡವಾಗಿದೆ. ಶಕ್ತಿ ಯೋಜನೆಯ ಖರ್ಚು ಸರಿದೂಗಿಸಬೇಕಾದ ಒತ್ತಡದಲ್ಲಿ, ಹೆಚ್ಚು ಆದಾಯದ ಆಸೆಯಿಂದ ನಂದಿನಿ ಪಾರ್ಲರ್ಗಳನ್ನ ಜನರಲ್ ಸ್ಟೋರ್ (General Store) ಆಗಿ ಬದಲಾಯಿಸುವ ಮೂಲಕ ನಂದಿನಿ ಬೂತ್ (Nandini Parlor) ಎತ್ತಂಗಡಿ ಮಾಡಿದೆ.
2023ರ ವಿಧಾನಸಭಾ ಚುನಾವಣೆ (Election 2023) ಸಂಧರ್ಭದಲ್ಲಿ ನಂದಿನಿ ವಿಚಾರವನ್ನೇ ಹೆಚ್ಚು ಬಳಕೆ ಮಾಡಿಕೊಂಡಿದ್ದ ಕಾಂಗ್ರೆಸ್, ಅಧಿಕಾರಕ್ಕೆ ಬಂದ ಬಳಿಕ ಬಹುಶಃ ನಾಡಿನ ಹೆಮ್ಮೆಯ ನಂದಿನಿಯನ್ನೇ ಮರೆತಂತೆ ಕಾಣುತ್ತಿದೆ. ಬಿಎಂಟಿಸಿ ತನ್ನ ಆದಾಯದ ಮೂಲವನ್ನ ಹೆಚ್ಚಿಸಿಕೊಳ್ಳಬೇಕಾದ ಭರದಲ್ಲಿ, ತನ್ನ ವ್ಯಾಪ್ತಿಯ ವ್ಯಾಪಾರ ಸ್ಥಳಗಳಲ್ಲಿದ್ದ ನಂದಿನಿ ಪಾರ್ಲರ್ಗಳನ್ನ ಏಕಾಏಕಿ ಜನರಲ್ ಸ್ಟೋರ್ಗಳನ್ನಾಗಿ ಪರಿವರ್ತನೆ ಮಾಡುವ ಕೆಲಸಕ್ಕೆ ಮುಂದಾಗಿದೆ.
ಮೆಜೆಸ್ಟಿಕ್ ಬಿಎಂಟಿಸಿ ಬಸ್ ನಿಲ್ದಾಣದಲ್ಲಿ ಕಳೆದ ಅನೇಕ ವರ್ಷಗಳಿಂದ ನಂದಿನಿ ಪಾರ್ಲರ್ಗಳನ್ನ ತೆರೆಯಲಾಗಿತ್ತು. ಪ್ರತಿ ತಿಂಗಳು 30 ಸಾವಿರ ಬಾಡಿಗೆ ಕೂಡ ಪಡೆಯುತ್ತಿತ್ತು. ಆದರೀಗ ಆದಾಯ ಹೆಚ್ಚಿಸುವ ಭರದಲ್ಲಿ ಎಲ್ಲಾ ಪಾರ್ಲರ್ಗಳನ್ನ ಜನರಲ್ ಸ್ಟೋರ್ಗಳನ್ನಾಗಿ ಬದಲಾಯಿಸಿದೆ. ಕಾರಣ ನಂದಿನಿ ಪಾರ್ಲರ್ಗಳಿಗೆ ಹೋಲಿಕೆ ಮಾಡಿದ್ರೆ ಜನರಲ್ ಸ್ಟೋರ್ಗಳಿಂದ ಬಿಎಂಟಿಸಿಗೆ ಆದಾಯ ಹೆಚ್ಚು. ಟೆಂಡರ್ನಲ್ಲಿ ಪ್ರತಿ ಜನರಲ್ ಸ್ಟೋರ್ಗಳು ತಿಂಗಳಿಗೆ 90 ಸಾವಿರ ಬಾಡಿಗೆ ಪಡೆಯುವುದಾಗಿ ಬಿಡ್ ಪಡೆದಿವೆ. ನಂದಿನಿ ಪಾರ್ಲರ್ಗಿಂತ ಮೂರು ಪಟ್ಟು ಹೆಚ್ಚಿಗೆ ಹಣವನ್ನ ಜನರಲ್ ಸ್ಟೋರ್ ನೀಡುತ್ತಿರೋ ಕಾರಣ ಪಾರ್ಲರ್ಗಳನ್ನೇ ಪರಿವರ್ತನೆ ಮಾಡಲು ನಿಗಮ ಮುಂದಾಗಿದೆ. ಇದನ್ನೂ ಓದಿ: ‘ಕೈ’ ತೆಲಂಗಾಣ ಗೆದ್ದಿದ್ದಕ್ಕೆ ಬಿಜೆಪಿ ಅಸೂಯೆ ಪಡುವ ಬದಲು ತಾನು ಗೆದ್ದ ರಾಜ್ಯಗಳಲ್ಲಿ ಸಿಎಂ ಆಯ್ಕೆ ಮಾಡಲಿ: ದಿನೇಶ್ ಗುಂಡೂರಾವ್
ಇನ್ನೂ ಮೆಜೆಸ್ಟಿಕ್ ಬಿಎಂಟಿಸಿ ನಿಲ್ದಾಣದಲ್ಲಿ 14 ನಂದಿನಿ ಪಾರ್ಲರ್ಗಳನ್ನ ಈಗಾಗಲೇ ಕ್ಲೋಸ್ ಮಾಡಲಾಗಿದೆ. ಕೆಲವು ಪಾರ್ಲರ್ಗಳನ್ನ ಜನರಲ್ ಸ್ಟೋರ್ಗಳಾಗಿ ಬದಲಾಯಿಸಿ ನಂದಿನಿ ಹೆಸರಿನ ಮೇಲೆಯೇ ಜನರಲ್ ಸ್ಟೋರ್ ಅನ್ನೋ ಬೋರ್ಡಗಳನ್ನ ಹಾಕಲಾಗಿದೆ. ಬಿಎಂಟಿಸಿಯ ಈ ನಡೆ ಕನ್ನಡ ಸಂಘಟನೆಗಳ ಕೆಂಗಣ್ಣಿಗೆ ಗುರಿಯಾಗಿದೆ. ಕೂಡಲೇ ಸಚಿವರು, ಅಧಿಕಾರಿಗಳು ಈ ಬಗ್ಗೆ ಕ್ರಮ ಕೈಗೊಳ್ಳದಿದ್ದರೆ ಉಗ್ರ ಹೋರಾಟ ಮಾಡುವ ಎಚ್ಚರಿಕೆ ನೀಡಿದ್ದಾರೆ. ಇದನ್ನೂ ಓದಿ: ಕರಾವಳಿಯಲ್ಲಿ ಮತ್ತೆ ಧರ್ಮ ದಂಗಲ್ – ಕುಡುಪು ಜಾತ್ರೆಯಲ್ಲಿ ಮುಸ್ಲಿಂ ವ್ಯಾಪಾರಿಗಳಿಗೆ ನಿರ್ಬಂಧ?