ಅಯೋಧ್ಯೆ: ಜನವರಿ 14 ರಿಂದ ದೇಶದ ಎಲ್ಲಾ ದೇವಾಲಯಗಳಲ್ಲಿ ಸ್ವಚ್ಛತೆ ಅಭಿಯಾನ ನಡೆಸಬೇಕು ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ (Narendra Modi) ಕರೆ ನೀಡಿದ್ದಾರೆ.
ಶನಿವಾರ ಅಯೋಧ್ಯೆಯಲ್ಲಿ (Ayodhya) ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಿ ಮಾತನಾಡಿದ ಮೋದಿ, ಜನವರಿ 22 ರಂದು ರಾಮಮಂದಿರದ ಶಂಕುಸ್ಥಾಪನೆಗೆ ಒಂದು ವಾರ ಮೊದಲು ದೇಶದಾದ್ಯಂತ ಎಲ್ಲಾ ಯಾತ್ರಾ ಸ್ಥಳಗಳಲ್ಲಿ ಸ್ವಚ್ಛತಾ ಅಭಿಯಾನವನ್ನು ನಡೆಸಬೇಕು ಎಂದಿದ್ದಾರೆ. ಇದನ್ನೂ ಓದಿ: ಜ.22ರಂದು ಅಯೋಧ್ಯೆಗೆ ಬರುವ ಮನಸ್ಸು ಮಾಡ್ಬೇಡಿ – ರಾಮ ಭಕ್ತರಿಗೆ ಮೋದಿ ವಿನಂತಿ
ಅಯೋಧ್ಯೆ ನಗರವನ್ನು ಭಾರತದ ಸ್ವಚ್ಛ ನಗರವನ್ನಾಗಿ ಮಾಡಲು ಜನರು ಸಂಕಲ್ಪ ಮಾಡಬೇಕು. ಈ ಸ್ವಚ್ಛ ಅಯೋಧ್ಯೆ ಇಲ್ಲಿನ ಜನರ ಜವಾಬ್ದಾರಿ. ಇದಕ್ಕಾಗಿ ನಾವು ಒಟ್ಟಾಗಿ ಪ್ರತಿ ಹೆಜ್ಜೆ ಇಡಬೇಕು. ಇಂದು ನಾನು ದೇಶದ ಎಲ್ಲಾ ಯಾತ್ರಾ ಸ್ಥಳಗಳು ಮತ್ತು ದೇವಾಲಯಗಳಿಗೆ ಹೇಳಲು ಬಯಸುತ್ತೇನೆ. ರಾಮಮಂದಿರ ಉದ್ಘಾಟನೆಗೆ ಒಂದು ವಾರ ಮೊದಲು, ಜನವರಿ 14 ರಿಂದ (ಮಕರ ಸಂಕ್ರಾಂತಿ) ಇಡೀ ದೇಶದ ಯಾತ್ರಾ ಸ್ಥಳಗಳಲ್ಲಿ ಸ್ವಚ್ಛತೆಯ ದೊಡ್ಡ ಅಭಿಯಾನವನ್ನು ನಡೆಸಬೇಕು ಎಂದು ತಿಳಿಸಿದ್ದಾರೆ.
ಈ ಅಭಿಯಾನವನ್ನು ದೇಶದ ಮೂಲೆ ಮೂಲೆಯಲ್ಲಿರುವ ಪ್ರತಿ ದೇವಸ್ಥಾನಗಳಲ್ಲಿ ನಡೆಸಬೇಕು ಎಂದು ಮೋದಿ ತಿಳಿಸಿದ್ದಾರೆ. ಇಂದು ಅಯೋಧ್ಯೆಯಲ್ಲಿ ವಿಮಾನ ನಿಲ್ದಾಣ, ಅಯೋಧ್ಯಾ ಧಾಮ್ ಜಂಕ್ಷನ್ ರೈಲು ನಿಲ್ದಾಣ ಮತ್ತು 15,700 ಕೋಟಿ ರೂಪಾಯಿಗಳ ಅಭಿವೃದ್ಧಿ ಯೋಜನೆಗಳನ್ನು ಮೋದಿ ಉದ್ಘಾಟಿಸಿದರು. ಇದನ್ನೂ ಓದಿ: ರಾಮಮಂದಿರ ಉದ್ಘಾಟನೆಯಂದು ಪ್ರತಿಯೊಬ್ಬರೂ ಮನೆಯಲ್ಲಿ ದೀಪ ಬೆಳಗಿಸಿ: ಮೋದಿ ಕರೆ
ಜಗತ್ತಿನಲ್ಲಿ ಯಾವುದೇ ದೇಶವಾಗಿರಲಿ, ಅದು ಅಭಿವೃದ್ಧಿಯ ಹೊಸ ಎತ್ತರವನ್ನು ತಲುಪಬೇಕಾದರೆ ತನ್ನ ಪರಂಪರೆಯನ್ನು ನೋಡಿಕೊಳ್ಳಬೇಕು. ಇಂದು ರಾಮಲಲ್ಲಾಗೆ ಮಾತ್ರವಲ್ಲದೆ ದೇಶದ ನಾಲ್ಕು ಕೋಟಿ ಬಡವರಿಗೂ ಪಕ್ಕಾ ಮನೆ ನೀಡಲಾಗಿದೆ. ಭಾರತವನ್ನು ಅಭಿವೃದ್ಧಿ ಹೊಂದಿದ ದೇಶವನ್ನಾಗಿ ಮಾಡುವ ಅಭಿಯಾನಕ್ಕೆ ಅಯೋಧ್ಯೆಯಿಂದ ಹೊಸ ಶಕ್ತಿ ಬರುತ್ತಿದೆ ಎಂದು ಮೋದಿ ತಿಳಿಸಿದ್ದಾರೆ.