ಹುಬ್ಬಳ್ಳಿ: ಪ್ರಧಾನಿ ಮೋದಿಯವರ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಬಿಜೆಪಿ ಸೇವಾ ದಿನದ ಆಚರಣೆಯ ಆಸಲಿಯತ್ತು ಬಯಲಾಗಿದೆ. ಪೌರ ಕಾರ್ಮಿಕರಿಂದ ಕ್ಲೀನ್ ಮಾಡಿಸಿ ಅದನ್ನ ಬಿಜೆಪಿ ಸೇವಾ ದಿನ ಅಂತ ಹೇಳಿಕೊಳುತ್ತಿದೆ.
ಹಳೇ ಹುಬ್ಬಳ್ಳಿಯ ಸದರ್ಸುಪಾ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಇಂದು ಬೆಳಗ್ಗೆ 7 ಗಂಟೆಗೆ ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಬಿಜೆಪಿ ಸೇವಾ ದಿನಕ್ಕೆ ಚಾಲನೆ ನೀಡಬೇಕಿತ್ತು. ಆದರೆ ಅದಕ್ಕೂ ಮುಂಚೆ ಸುಮಾರು 20 ಪೌರ ಕಾರ್ಮಿಕರು ಬೆಳಂಬೆಳಗ್ಗೆ ಸ್ವಚ್ಛತೆ ಮಾಡಿದ್ದರು. ನಂತರ 7.45ರ ಸುಮಾರಿಗೆ ಸಚಿವರು ಸ್ಥಳಕ್ಕಾಗಮಿಸಿದ್ದಾರೆ. ಸಚಿವರು ಬರುವ ಮುಂಚೆ ಮಾಧ್ಯಮಗಳನ್ನು ಕಂಡ ಬಿಜೆಪಿ ಕಾರ್ಯಕರ್ತರು ದಿಢೀರ್ ಅಂತ ಸೇವಾ ದಿನದ ಕಾರ್ಯಕ್ರಮದ ಸ್ಥಳವನ್ನು ನಗರದ ಹುಬ್ಬಳ್ಳಿ ಸರ್ಕಾರಿ ಹೆರಿಗೆ ಆಸ್ಪತ್ರೆ ಆವರಣಕ್ಕೆ ಬದಲಾಯಿಸಿದರು.
ಆಸ್ಪತ್ರೆಯ ಬಳಿ ಬಂದ ಸಚಿವರು ಕೇವಲ ಎರಡು ನಿಮಿಷಗಳಲ್ಲಿ ಪೊರಕೆ ಹಿಡಿದು ಸ್ವಚ್ಛತಾ ಕಾರ್ಯಕ್ರಮದಲ್ಲಿ ಭಾಗಿಯಾದರು. ಇನ್ನೂ ಮೇಲಾಧಿಕಾರಿಗಳ ಆದೇಶದಂತೆ ಕ್ಲೀನ್ ಮಾಡಿದ್ದ ಪೌರಕಾರ್ಮಿಕರಿಗೆ ನಿಮಗೆ ಯಾರು ಇಲ್ಲಿ ಬಂದು ಕ್ಲೀನ್ ಮಾಡಿ ಅಂತ ಹೇಳಿದ್ದು, ಇವತ್ತು ಸ್ವಚ್ಛತೆ ಮಾಡಲು ನಿನಗೆ ಸೂಚನೆ ಕೊಟ್ಟವರ್ಯಾರೆಂದು ಎಂದು ಬಿಜೆಪಿಯ ಪಾಲಿಕೆ ಸದಸ್ಯ ಶಿವುಮೆಣಸಿನಕಾಯಿ ಕಾರ್ಮಿಕರಿಗೆ ಅವಾಜ್ ಹಾಕಿದ್ದಾರೆ.