ಗಾಂಧಿನಗರ: ಬೋರ್ಡ್ ಎಕ್ಸಾಂ ಬರೆಯಲು ಬಂದಿದ್ದ 12ನೇ ತರಗತಿ ವಿದ್ಯಾರ್ಥಿ ಪರೀಕ್ಷಾ ಕೇಂದ್ರದಲ್ಲಿಯೇ ಮೃತಪಟ್ಟಿರುವ ಘಟನೆ ಗುಜರಾತ್ ನ ಆನಂದ್ ಜಿಲ್ಲೆಯಲ್ಲಿ ನಡೆದಿದೆ.
17 ವರ್ಷದ ಧವಳಸಿನ್ಹ ಪಧಿಯರ್ ಮೃತ ವಿದ್ಯಾರ್ಥಿ. ಅಂಕ್ಲವ್ ತಾಲೂಕಿನ ಕಹನ್ವಾಡಿ ಗ್ರಾಮದ ನಿವಾಸಿಯಾಗಿದ್ದು, ಪರೀಕ್ಷಾ ಕೇಂದ್ರದಲ್ಲಿ ಇದ್ದಕ್ಕಿದ್ದಂತೆ ಕುಸಿದು ಬಿದ್ದು ಮೃತಪಟ್ಟಿದ್ದಾನೆ.
ಪಧಿಯರ್ ಪರೀಕ್ಷೆ ಬರೆಯಲು ಅಂಕ್ಲವ್ ಸ್ಕೂಲ್ ನ ಪರೀಕ್ಷಾ ಕೇಂದ್ರಕ್ಕೆ ಹಾಜರಾಗಿದ್ದನು. ಪರೀಕ್ಷಾ ಕೊಠಡಿಯಲ್ಲಿ ಕುಳಿತು ಇನ್ನೇನು ಉತ್ತರ ಪತ್ರಿಕೆ ಬರೆಯಲು ಆರಂಭಿಸುತ್ತಿದ್ದನು. ಅಷ್ಟರಲ್ಲಿ ಕಣ್ಣು ಕತ್ತಲೆಯಾಗಿ ಕುಸಿದು ಬಿದ್ದಿದ್ದಾನೆ. ಕೂಡಲೇ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಅವನನ್ನು ಸಮೀಪದ ಆಸ್ಪತ್ರೆಗೆ ಕರೆದುಕೊಂಡು ದಾಖಲಿಸಿದ್ದಾರೆ. ಆದರೆ ಮಾರ್ಗ ಮಧ್ಯೆಯೇ ವಿದ್ಯಾರ್ಥಿ ಸಾವನ್ನಪ್ಪಿದ್ದಾನೆ ಎಂದು ವೈದ್ಯರು ತಿಳಿಸಿದ್ದಾರೆ ಎಂದು ಪೊಲೀಸರು ಹೇಳಿದರು.
ಮರಣೋತ್ತರ ಪರೀಕ್ಷೆಯ ವರದಿಯಲ್ಲಿ ಧವಳಸಿನ್ಹ ಪಧಿಯರ್ ತನ್ನ ಗ್ರಾಮದಿಂದ ಸುಮಾರು 5 ಕಿಲೋಮೀಟರ್ ದೂರದಿಂದ ಪ್ರಯಾಣಿಸಿಕೊಂಡು ಬಂದಿದ್ದ. ತಕ್ಷಣ ಅತಿಯಾದ ಬಿಸಿಲಿನ ತಾಪದಿಂದ ಕುಸಿದು ಬಿದ್ದು ಮೃತಪಟ್ಟಿರಬಹುದು ಎಂದು ವೈದ್ಯರು ತಿಳಿಸಿದ್ದಾರೆ.
ಪರೀಕ್ಷೆ ಮಧ್ಯಾಹ್ನ 3 ರಿಂದ ಸಂಜೆ 6ಗಂಟೆಗಳವರೆಗೆ ನಿಗದಿಯಾಗಿತ್ತು. ಅವರ ಪೋಷಕರು ಆರ್ಥಿಕವಾಗಿ ಹಿಂದುಳಿದಿದ್ದು, ಕೃಷಿ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದಾರೆ. ಸದ್ಯಕ್ಕೆ ಮರಣೋತ್ತರ ಪರೀಕ್ಷೆಯ ವರದಿ ಮತ್ತು ವಿಧಿ ವಿಜ್ಞಾನ ಪ್ರಯೋಗಾಲಯದ ವರದಿಗೂ ಕಾಯುತ್ತಿದ್ದೇವೆ ಎಂದು ಪೊಲೀಸರು ಹೇಳಿದ್ದಾರೆ.