ಹೈದರಾಬಾದ್: ಶಾಲೆಯಲ್ಲಿ ವಿದ್ಯಾರ್ಥಿಗಳ ನಾಯಕನಾಗಿ ಆಯ್ಕೆಯಾಗದ್ದಕ್ಕೆ ಮನನೊಂದು ಬಾಲಕನೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತೆಲಂಗಾಣದ ನಲ್ಗೊಂಡಾದಲ್ಲಿ ನಡೆದಿದೆ.
ಹಿಮಾಚರಣ್ (13) ಆತ್ಮಹತ್ಯೆಗೆ ಶರಣಾದ ಬಾಲಕ. ಬಾಲಕನ ಶವ ರೈಲ್ವೇ ಹಳಿಗಳ ಮೇಲೆ ಸಿಕ್ಕಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಹಿಮಾಚರಣ್ ಸರ್ಕಾರಿ ಶಾಲೆಯಲ್ಲಿ 8ನೇ ತರಗತಿ ವ್ಯಾಸಂಗ ಮಾಡುತ್ತಿದ್ದನು.
ಜೂನ್ ತಿಂಗಳಲ್ಲಿ ಶಾಲೆಯಲ್ಲಿ ವಿದ್ಯಾರ್ಥಿಗಳ ನಾಯಕನಿಗಾಗಿ ಚುನಾವಣೆ ನಡೆದಿತ್ತು. ಈ ಚುನಾವಣೆಯಲ್ಲಿ ಹಿಮಾಚರಣ್ ನಿಂತಿದ್ದನು. ಈತನ ವಿರುದ್ಧ ಅದೇ ತರಗತಿ ಬಾಲಕಿ ನಿಂತಿದ್ದಳು. ಮೂರು ದಿನಗಳ ಹಿಂದೆ ಫಲಿತಾಂಶ ಬಂದಿದೆ. ಆಗ ಚುನಾವಣೆಯಲ್ಲಿ ಬಾಲಕಿ ಗೆದ್ದು ವಿದ್ಯಾರ್ಥಿಗಳ ನಾಯಕಿಯಾಗಿ ಆಯ್ಕೆಯಾಗಿದ್ದಳು. ಇದರಿಂದ ಹಿಮಾ ಚರಣ್ ಮನನೊಂದಿದ್ದ.
ಇತ್ತ ಬಾಲಕಿ ಮುಂದೆ ಸೋತ ಎಂದು ಸ್ನೇಹಿತರು ರೇಗಿಸಿದ್ದಾರೆ. ಆಗ ಹಿಮಾಚರಣ್ ಗುರುವಾರ ಶಾಲೆಯಿಂದ ಮನೆಗೆ ಬಂದು ಬ್ಯಾಗ್ ಇಟ್ಟು ಸಂಜೆ ಹೊರಗಡೆ ಹೋಗಿದ್ದನು. ಸ್ವಲ್ಪ ಸಮಯದ ನಂತರ ಗ್ರಾಮಸ್ಥರು ರೈಲ್ವೆ ಹಳಿಯ ಮೇಲೆ ಹಿಮಾಚರಣ್ ಮೃತದೇಹವನ್ನು ನೋಡಿದ್ದಾರೆ. ತಕ್ಷಣ ಪೊಲೀಸರಿಗೆ ಮತ್ತು ಪೋಷಕರಿಗೆ ಮಾಹಿತಿ ತಿಳಿಸಿದ್ದಾರೆ.
ಈ ಕುರಿತು ನಾಲ್ಗೊಂಡಾ ರೈಲ್ವೇ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಮುಂದುವರಿಸಿದ್ದಾರೆ.