ಕೊಪ್ಪಳ: ರಥಕ್ಕೆ ಹೂವಿನ ಹಾರ ಹಾಕುವ ವಿಚಾರಕ್ಕೆ ಎರಡು ಗುಂಪುಗಳ ನಡುವೆ ಗಲಾಟೆಯಾಗಿ, ಆರು ಜನ ಗಾಯಗೊಂಡ ಘಟನೆ ಕೊಪ್ಪಳ ತಾಲೂಕಿನ ಚಳ್ಳಾರಿ ಗ್ರಾಮದಲ್ಲಿ ನಡೆದಿದೆ.
ಚಳ್ಳಾರಿ ಗ್ರಾಮದಲ್ಲಿ ಇಂದು ದುರಗಮ್ಮ ಹಾಗೂ ದ್ಯಾಮಮ್ಮನ ಜಾತ್ರೆ ನಡೆದಿತ್ತು. ಜಾತ್ರೆಯ ನಿಮಿತ್ತ ಕುರುಬ ಹಾಗೂ ಎಸ್ಟಿ ಸಮುದಾಯದವರು ತಲಾ ಒಂದೊಂದು ಹಾರ ತಂದಿದ್ದರು. ರಥಕ್ಕೆ ಮೊದಲು ಹಾರ ಯಾರು ಹಾಕಬೇಕು ಎನ್ನುವ ವಿಚಾರಕ್ಕೆ ಎರಡು ಗುಂಪುಗಳ ಮಧ್ಯೆ ಮಾತುಕತೆ ಆರಂಭವಾಗಿದೆ. ಮತು ಜೋರಾಗಿ ಪರಸ್ಪರ ವಾಗ್ದಾಳಿ ನಡೆಸಿ ನಂತರ ಕಲ್ಲು ಹಾಗೂ ಕೋಲಿನಿಂದ ಬಡಿದಾಡಿಕೊಂಡಿದ್ದಾರೆ.
ಇತ್ತ ಜಗಳ ಬಿಡಿಸಲು ಹೋದ ಕೆಲವರಿಗೂ ಗಾಯಗಳಾಗಿವೆ. ಘಟನಾ ಸ್ಥಳಕ್ಕೆ ಕೊಪ್ಪಳ ಗ್ರಾಮೀಣ ಪೊಲೀಸರು ಆಗಮಿಸಿ ಜನರನ್ನು ಚದುರಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಿದ್ದಾರೆ. ಗಲಾಟೆಯಿಂದಾಗಿ ಜಾತ್ರೆ ಹಾಗೂ ಜಾತ್ರೆ ನಿಮಿತ್ತ ಹಮ್ಮಿಕೊಂಡಿದ್ದ ನಾಟಕವನ್ನು ರದ್ದು ಮಾಡಲಾಗಿದೆ.
ಘಟನೆಯಲ್ಲಿ ಎರಡೂ ಗುಂಪಿನ ಆರು ಜನ ಗಾಯಗೊಂಡಿದ್ದು, ಗಾಯಾಳುಗಳನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಈ ಸಂಬಂಧ ಕೊಪ್ಪಳ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸ್ ತನಿಖೆ ಆರಂಭಿಸಿದ್ದಾರೆ.