ಬಾಗಲಕೋಟೆ: ಕಬ್ಬು ಕಡಿಯುವ ಎರಡು ಗ್ಯಾಂಗ್ಗಳ ಸದಸ್ಯರ ಪೊಲೀಸ್ ಠಾಣಾ ಎದುರೇ ಹೊಡೆದಾಡಿಕೊಂಡ ಘಟನೆ ರಬಕವಿ-ಬನಹಟ್ಟಿ ತಾಲೂಕಿನ ತೇರದಾಳ ಪಟ್ಟಣದಲ್ಲಿ ನಡೆದಿದೆ.
ಈ ಘಟನೆಯಲ್ಲಿ ಮಹೇಶ್ ಬಡಿಗೇರ ಹಾಗೂ ರಾಹುಲ್ ರೋಡಕರ್ ಎಂಬವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಅವರನ್ನು ಸಮೀಪ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.
ಘಟನೆಯ ವಿವರ:
ಈ ಎರಡು ಗುಂಪುಗಳು ಹದಿನೈದು ದಿನಗಳ ಹಿಂದೆ ಜಗಳವಾಡಿಕೊಂಡಿದ್ದವು. ಈ ವೇಳೆ ಮಹೇಶ್ ಬಡಿಗೇರ ಕೈಗೆ ಬಲವಾದ ಹೊಡೆತ ಬಿದ್ದು, ಮೂಳೆ ಮುರಿದಿತ್ತು. ಈ ಕುರಿತು ದೂರು ನೀಡಲು ಮಹೇಶ್ ಹಾಗೂ ರಾಹುಲ್ ಇಂದು ತೇರದಾಳ ಪಟ್ಟಣದ ಪೊಲೀಸ್ ಠಾಣೆಗೆ ಬಂದಿದ್ದರು. ಇದನ್ನು ತಡೆಯಲು ಮುಂದಾದ ಗುಂಪು ಮಹೇಶ್ ಮೇಲೆ ಹಲ್ಲೆ ಮಾಡಿದೆ. ಇದನ್ನು ತಡೆಯಲು ಮುಂದಾದ ರಾಹುಲ್ ಮೇಲೆಯೂ ಹಲ್ಲೆ ಮಾಡಿ ಪರಾರಿಯಾಗಿದ್ದಾರೆ.
ಜಗಳವನ್ನು ನೋಡಿ ತಕ್ಷಣವೇ ಸ್ಥಳಕ್ಕೆ ಆಗಮಿಸಿದ ಪೊಲೀಸರು ಗುಂಪನ್ನು ಚದುರಿಸಿದ್ದಾರೆ. ಬಳಿಕ ಗಂಭೀರವಾಗಿ ಗಾಯಗೊಂಡಿದ್ದ ಇಬ್ಬರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸುತ್ತಿದ್ದಾರೆ. ಈ ಕುರಿತು ಮಹೇಶ್ ಹಾಗೂ ರಾಹುಲ್ ಸಂಬಂಧಿಕರು ದೂರು ನೀಡಿಲ್ಲ. ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ವಶಕ್ಕೆ ಪಡೆದು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv