ಬೆಂಗಳೂರು: ಒತ್ತುವರಿ ತೆರವು ವಿಚಾರವಾಗಿ ತಾಲೂಕು ಕಚೇರಿಯಲ್ಲಿ ತಹಶೀಲ್ದಾರ್ ಹಾಗು ಜಿಲ್ಲಾ ಪಂಚಾಯತ್ ಅಧ್ಯಕ್ಷರ ನಡುವೆ ಮಾತಿನ ಚಕಮಕಿ ನಡೆದ ಘಟನೆ ಆನೇಕಲ್ ನಲ್ಲಿ ನಡೆದಿದೆ.
ಬೆಂಗಳೂರು ಜಿಲ್ಲಾ ಪಂಚಾಯತ್ ಅಧ್ಯಕ್ಷ ಸಿ. ಮುನಿರಾಜು ಹಾಗೂ ಆನೇಕಲ್ ತಾಲೂಕು ತಹಶೀಲ್ದಾರ್ ಆಶಾ ಪರ್ವಿನ್ ನಡುವೆ ಮಾತಿನ ಚಕಮಕಿ ನಡೆದಿದೆ. ಆನೇಕಲ್ ತಾಲೂಕಿನ ಸರ್ಜಾಪುರ ಗ್ರಾಮದ ಬಳಿ ಸರ್ವೇ ನಂ.24 ರ ಒಟ್ಟು 1.5 ಗುಂಟೆ ಸರ್ಕಾರಿ ಜಾಗವನ್ನು ಒತ್ತುವರಿ ಮಾಡಿಕೊಂಡಿದ್ದಾರೆ ಎಂಬುವುದು ಸರ್ವೆಯಲ್ಲಿ ಸಾಬೀತಾದ ಹಿನ್ನಲೆಯಲ್ಲಿ ಒತ್ತುವರಿದಾರರಿಗೆ ನೋಟಿಸ್ ಜಾರಿ ಮಾಡಲಾಗಿತ್ತು. ಈ ಜಾಗವನ್ನು ಜಿಲ್ಲಾ ಪಂಚಾಯ್ತಿ ಅಧ್ಯಕ್ಷ ಸೇರಿ ಒಟ್ಟು 10 ಮಂದಿ ಒತ್ತುವರಿ ಮಾಡಿಕೊಂಡಿದ್ದರು. ತಕ್ಷಣ ಒತ್ತುವರಿ ಮಾಡಿಕೊಂಡಿದ್ದ ಸರ್ಕಾರಿ ಜಾಗವನ್ನು ತೆರುವುಗೊಳಿಸುವಂತೆ ತಹಶೀಲ್ದಾರ್ ನೋಟಿಸ್ನಲ್ಲಿ ಸೂಚಿಸಿದ್ದರು.
ಈ ನೋಟಿಸ್ ವಿಚಾರವಾಗಿ ತಾಲೂಕು ಕಚೇರಿಗೆ ಆಗಮಿಸಿ ಜಿಲ್ಲಾ ಪಂಚಾಯತ್ ಅಧಕ್ಷರು ಹಾಗೂ ಅವರ ಬೆಂಬಲಿಗರು ತಹಶೀಲ್ದಾರ್ ಆಶಾ ಪರ್ವಿನ್ ಅವರೊಂದಿಗೆ ಮಾತಿನ ಚಕಮಕಿ ನಡೆಸಿದರು. ಈ ಸಂದರ್ಭದಲ್ಲಿ ಮಾತಾನಾಡಿದ ಆಶಾ, ಯಾರೇ ಸರ್ಕಾರಿ ಜಾಗವನ್ನು ಒತ್ತುವರಿ ಮಾಡಿಕೊಂಡರೂ ಅದನ್ನು ತೆರವುಗೊಳಿಸುವುದು ನಮ್ಮ ಕರ್ತವ್ಯ. ಈಗಾಗಲೇ ವಿವಾದಿತ ಸ್ಥಳದಲ್ಲಿ ಎರಡು ಬಾರಿ ಸರ್ವೇ ಕಾರ್ಯವನ್ನು ನಡೆಸಲಾಗಿದೆ. ಜಿಲ್ಲಾ ಪಂಚಾಯ್ತಿ ಅಧ್ಯಕ್ಷರ ಈ ವರ್ತನೆ ಸಮಂಜಸವಲ್ಲ. ಅಲ್ಲದೇ ನಮ್ಮ ಅಧಿಕಾರಿಗಳ ಜೊತೆಯೂ ಅನುಚಿವಾಗಿ ವರ್ತಿಸಿದ್ದಾರೆ ಎಂದು ಆರೋಪಿಸಿದರು.
ಇನ್ನೂ ಜಿಲ್ಲಾ ಪಂಚಾಯತ್ ಅಧ್ಯಕ್ಷರ ವಾದವೇ ಬೇರೆಯಾಗಿದೆ. ಈ ಜಾಗ ನಮ್ಮ ತಾತನ ಕಾಲದಿಂದಲೂ ಬಂದಿರುವ ಆಸ್ತಿಯಾಗಿದ್ದು, ತಹಶೀಲ್ದಾರರು ಕೆಲವರ ಚಿತಾವಣೆಯ ಮೇರೆಗೆ ಸುಖಾಸುಮ್ಮನೆ ಕಿರುಕುಳವನ್ನು ನೀಡುತ್ತಿದ್ದಾರೆ. ಇದರ ಹಿಂದೆ ರಾಜಕೀಯ ಕೈವಾಡವಿದೆ ಎಂದು ಆರೋಪಿಸಿದರು.