ನವದೆಹಲಿ: ಸುಪ್ರೀಂ ಕೋರ್ಟ್ ಪಕ್ಷೇತರ ಶಾಸಕರು ಸಲ್ಲಿಸಿದ್ದ ಅರ್ಜಿಯನ್ನು ವಾಪಸ್ ಪಡೆಯಲು ಸಮ್ಮತಿ ಸೂಚಿಸಿದೆ. ಆದರೆ ಇದೇ ಸಂದರ್ಭದಲ್ಲಿ ಶಾಸಕರ ಪರ ವಕೀಲರಾದ ಮುಕುಲ್ ರೋಹಟಗಿ ಅವರಿಗೆ ಚಾಟಿ ಬೀಸಿದೆ.
ವಕೀಲ ಮುಕುಲ್ ರೋಹಟಗಿ ಕಲಾಪಕ್ಕೆ ಗೈರಾಗಿದ್ದರು. ಅವರ ಪರವಾಗಿ ನಿನ್ನೆ ಹಾಗೂ ಇಂದು ಜ್ಯೂನಿಯರ್ ವಕೀಲರು ವಿಚಾರಣೆಗೆ ಹಾಜರಾಗಿದ್ದರು. ಈ ಹಿನ್ನೆಲೆಯಲ್ಲಿ ನ್ಯಾಯಮೂರ್ತಿಗಳು ಗರಂ ಆಗಿದ್ದು, ನಿಮಗೆ ಬೇಕಾದಾಗ ಮಧ್ಯರಾತ್ರಿ ವಿಚಾರಣೆ ನಡೆಸಬೇಕು, ಅಗತ್ಯ ಇದ್ದರೆ ಮಧ್ಯರಾತ್ರಿ ಆದೇಶ ನೀಡಬೇಕು. ಆದರೆ ನಾವು ಕರೆದಾಗ ನೀವು ವಿಚಾರಣೆಗೆ ಬರುವುದಿಲ್ಲ ಯಾಕೆ ಎಂದು ಪ್ರಶ್ನಿಸಿ ಮುಖ್ಯ ನ್ಯಾ. ರಂಜನ್ ಗೊಗೋಯ್ ಅವರು ಚಾಟಿ ಬೀಸಿದ್ದಾರೆ.
ಬುಧವಾರ ವಿಚಾರಣೆ ಸಂದರ್ಭದಲ್ಲಿ ವಕೀಲರ ಗೈರಿನ ಬಗ್ಗೆ ಪ್ರಶ್ನೆ ಮಾಡಿದ್ದರೂ ಕೂಡ ಇಂದು ನ್ಯಾಯಾಲಯಕ್ಕೆ ಹಾಜರಾಗದ ಹಿನ್ನೆಲೆಯಲ್ಲಿ ನ್ಯಾಯಾಮೂರ್ತಿಗಳು ಗರಂ ಆಗಿದ್ದಾರೆ.
ಪಕ್ಷೇತರ ಶಾಸಕರಾದ ನಾಗೇಶ್ ಮತ್ತು ಶಂಕರ್ ಅವರು ವಿಶ್ವಾತ ಮತಯಾಚನೆ ಮಾಡಲು ಆದೇಶ ನೀಡಬೇಕೆಂದು ಕೋರಿ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯನ್ನು ನಿನ್ನೆಯೂ ಕೂಡ ಸುಪ್ರೀಂ ಕೋರ್ಟ್ ಮುಖ್ಯ ನ್ಯಾ. ರಂಜನ್ ಗೊಗೋಯ್ ಅವರಿದ್ದ ತ್ರಿಸದಸ್ಯ ಪೀಠ ವಿಚಾರಣೆ ನಡೆಸಿತ್ತು. ಈ ವೇಳೆ ಸಿಜೆಐ ಶಾಸಕರ ಪರ ವಕೀಲರು ಎಲ್ಲಿ ಪ್ರಶ್ನೆ ಮಾಡಿ ಅರ್ಜಿಯ ವಿಚಾರಣೆಯನ್ನು ಮುಂದೂಡಿತ್ತು.
ಈ ವೇಳೆ ಪಕ್ಷೇತರ ಶಾಸಕರ ಪರವಾಗಿ ಹಾಜರಾಗಿದ್ದ ಜ್ಯೂನಿಯರ್ ಲಾಯರ್ ದೀಕ್ಷಾ ರೈ ವಿಶ್ವಾಸ ಮತಯಾಚನೆ ಸಾಬೀತಾದ ಹಿನ್ನೆಲೆಯಲ್ಲಿ ಅರ್ಜಿಯನ್ನು ವಾಪಸ್ ಪಡೆಯಲು ನಿರ್ಧಾರ ಮಾಡಲಾಗಿದೆ ಎಂದು ಸ್ಪಷ್ಟನೆ ನೀಡಿದ್ದರು. ಆದರೆ ಈ ಸಂದರ್ಭದಲ್ಲಿ ಅಂತಿಮ ತೀರ್ಪು ನೀಡುವ ಮುನ್ನ ವಕೀಲರು ನ್ಯಾಯಾಲಯಕ್ಕೆ ಹಾಜರಾಗಬೇಕು ಎಂದು ಸೂಚಿಸಿದ್ದರು.
ಇಂದು ಮತ್ತೆ ಅರ್ಜಿಯ ವಿಚಾರಣೆಗೆ ತೆಗೆದುಕೊಂಡ ಪೀಠ ವಕೀಲರು ಹಾಜರಾಗದೇ ಇರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದೆ. ರೊಹಟಗಿ ವಿಚಾರಣೆ ಆಗಮಿಸಿಬೇಕಿದ್ದು ಅವರಿಗೆ ನಾವು ಕೆಲವು ಪ್ರಶ್ನೆಗಳನ್ನು ಕೇಳಬೇಕಿದೆ ಎಂದು ನ್ಯಾಯಮೂರ್ತಿಗಳು ಹೇಳಿದ್ದಾರೆ.
ಹಿರಿಯ ವಕೀಲರಾದ ರೋಹಟಗಿ ಅವರು ಇಬ್ಬರು ಪಕ್ಷೇತರ ಶಾಸಕರ ಪರ ವಾದ ಮಂಡಿಸಿದ್ದರೆ, ಸಿಂಘ್ವಿ ಅವರು ಸ್ಪೀಕರ್ ಪರ ವಾದ ಮಂಡಿಸಿದ್ದರು. ಮಂಗಳವಾರ ವಿಶ್ವಾಸ ಮತಯಾಚನೆ ನಡೆದಿದ್ದರಿಂದ ಪಕ್ಷೇತರ ಶಾಸಕರು ತಮ್ಮ ಅರ್ಜಿಯನ್ನು ವಾಪಸ್ ಪಡೆಯಲು ಇಚ್ಛೆ ಪಟ್ಟಿದ್ದರು.