ಕಾಂಗ್ರೆಸ್ ಬೆಂಕಿ ಹಚ್ಚುವ ಕೆಲಸ ಮಾಡುತ್ತಿದೆ: ಕಟೀಲ್

Public TV
1 Min Read
nalin kumar

ಶಿವಮೊಗ್ಗ: ಪೌರತ್ವ ಕಾಯ್ದೆ ವಿರುದ್ಧ ಕೇವಲ ಕಾಂಗ್ರೆಸಿಗರು ಮಾತ್ರ ಹೋರಾಟ ಮಾಡುತ್ತಿದ್ದಾರೆ. ಕಾಂಗ್ರೆಸ್ಸಿಗರು ಬೆಂಕಿ ಹಚ್ಚುವ ಕೆಲಸ ಮಾಡುತ್ತಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ವಾಗ್ದಾಳಿ ನಡೆಸಿದ್ದಾರೆ.

ಶಿವಮೊಗ್ಗದಲ್ಲಿ ಇಂದು ಈ ಬಗ್ಗೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಏಕ ಪೌರತ್ವ ಕಾಯ್ದೆ ಜಾರಿಯಿಂದ ವಲಸಿಗರಿಗೆ ಮಾತ್ರ ತೊಂದರೆ ಆಗುತ್ತದೆಯಾ ವಿನಃ ಈ ದೇಶದ ನಾಗರೀಕರಿಗೆ ಯಾವುದೇ ಸಮಸ್ಯೆ, ಅನ್ಯಾಯ ಆಗುವುದಿಲ್ಲ ಎಂದರು.

ಕಾಂಗ್ರೆಸ್ ಅಧಿಕಾರದಲ್ಲಿ ಇಲ್ಲದಿದ್ದಾಗ ರಾಷ್ಟ್ರದಲ್ಲಿ ಗಲಭೆ ಸೃಷ್ಟಿಸುವ ತಂತ್ರಗಾರಿಕೆ ಹುಡುಕಿಕೊಂಡಿದೆ. ಈ ಹಿಂದಿನಿಂದಲೂ ಕಾಂಗ್ರೆಸ್ ಅದನ್ನೇ ಮಾಡಿಕೊಂಡು ಬಂದಿದ್ದು, ಅಧಿಕಾರದಲ್ಲಿ ಇದ್ದಾಗ ಪ್ರಜಾಪ್ರಭುತ್ವದ ಕಗ್ಗೊಲೆ ಮಾಡಿದೆ. ಅಧಿಕಾರ ಇಲ್ಲದಿದ್ದಾಗ ಗಲಭೆ ಸೃಷ್ಟಿ ಮಾಡುತ್ತೆ ಇದು ಈ ದೇಶದ ಕಾಂಗ್ರೆಸ್ ಇತಿಹಾಸ ಎಂದರು.

Nalin

ಕಾಂಗ್ರೆಸ್ ನವರಿಗೆ ಕಳೆದ 6 ವರ್ಷದಲ್ಲಿ ಗಲಭೆ ಮಾಡಲು ಒಂದೇ ಒಂದು ವಿಷಯ ಸಿಕ್ಕಿರಲಿಲ್ಲ. ಕಾಶ್ಮೀರ ವಿಷಯ ಇಟ್ಟುಕೊಂಡು ಗಲಭೆ ಮಾಡಬೇಕು ಅಂದುಕೊಂಡ್ರು ಜನ ಅದಕ್ಕೆ ಒಪ್ಪಲಿಲ್ಲ. ಅಯೋಧ್ಯೆ ವಿಷಯ ಇಟ್ಟುಕೊಂಡು ಗಲಭೆ ಮಾಡಬೇಕು ಎಂಬ ಹುನ್ನಾರ ನಡೆಸಿದ್ರು ಅದೂ ಆಗಲಿಲ್ಲ. ಹೀಗಾಗಿ ಕಾಂಗ್ರೆಸ್ ಗಲಭೆ ಮಾಡಿ ಲಾಭ ಪಡೆದುಕೊಳ್ಳುವ ಕೆಲಸದಲ್ಲಿ ಸೋತಿದೆ. ಹಾಗಾಗಿಯೇ ಕಾಂಗ್ರೆಸ್ ಏಕ ಪೌರತ್ವ ವಿಷಯ ಮುಂದಿಟ್ಟುಕೊಂಡು ಬೆಂಕಿ ಹಚ್ಚುವ ಕೆಲಸ ಮಾಡುತ್ತಿದೆ. ಈ ಬೆಂಕಿಯ ಹಿಂದೆ ಕಾಂಗ್ರೆಸ್ ಹೊರತಾಗಿ ಬೇರೆ ಯಾರೊಬ್ಬರು ಇಲ್ಲ ಎಂಬ ಆರೋಪ ಮಾಡಿದರು.

ಕಾಂಗ್ರೆಸ್ ಈಗಾಗಲೇ ವೈಚಾರಿಕವಾಗಿ, ಬೌದ್ಧಿಕವಾಗಿ, ಸಂಘಟನಾತ್ಮಕವಾಗಿ ದಿವಾಳಿಯಾಗಿದೆ. ಈ ದಿವಾಳಿ ಸರಿ ಮಾಡಿಕೊಳ್ಳಲು ಸಹ ಈ ತಂತ್ರಗಾರಿಕೆ ಮಾಡಿದೆ. ಆದರೆ ದೇಶದ ಯಾವ ನಾಗರೀಕರೂ ಇದರ ಹಿಂದೆ ಇಲ್ಲ. ಬದಲಿಗೆ ಕಾಂಗ್ರೆಸ್ ಏಕ ಪೌರತ್ವ ವಿಷಯದಲ್ಲಿ ರಾಜಕೀಯ ಆಟ ಆಡುತ್ತಿದೆ ಎಂದು ಕಟೀಲ್ ಕಿಡಿಕಾರಿದರು.

Share This Article
Leave a Comment

Leave a Reply

Your email address will not be published. Required fields are marked *