ಬಾಗಲಕೋಟೆ: ಪ್ರಾರ್ಥನೆ ಮಾಡುವ ನೆಪದಲ್ಲಿ ಮತಾಂತರಕ್ಕೆ ಪ್ರೇರಣೆ ಮಾಡುತ್ತಿದ್ದಾರೆ ಎಂದು ಆರೋಪಿಸಿ ಕ್ರಿಶ್ಚಿಯನ್ ಮಿಷನರಿ ಸಿಬ್ಬಂದಿಯನ್ನು ಲಂಬಾಣಿ ಸಮುದಾಯದ ಮುಖಂಡರು ತರಾಟೆ ತೆಗೆದುಕೊಂಡ ಘಟನೆ ನಗರದ ಬಿಲಾಲ್ ಮಸ್ಜಿದ್ ಬಡಾವಣೆ ಬಳಿ ನಡೆದಿದೆ.
ಪ್ರಾರ್ಥನೆ ನೆಪದಲ್ಲಿ ಲಂಬಾಣಿ ಸಮುದಾಯದ ಮಹಿಳೆಯರ ಮತಾಂತರಕ್ಕೆ ಪ್ರೇರೇಪಿಸುತ್ತಿದ್ದರು ಎನ್ನಲಾಗಿದ್ದು, ಮನೆಯಲ್ಲಿ ಬೈಬಲ್ ಓದಿಸುವ ಮೂಲಕ ಪ್ರಾರ್ಥನೆ ಮಾಡಿಸಲಾಗುತ್ತಿತ್ತು. ಬ್ಲೆಸ್ ಮಿಷನರಿಸ್ ಸಂಸ್ಥೆಯ ಸಿಬ್ಬಂದಿ ಮತಾಂತರಕ್ಕೆ ಯತ್ನಿಸಿದ್ದರು ಎಂದು ಆರೋಪಿಸಲಾಗಿದೆ.
ಸುದ್ದಿ ತಿಳಿಯುತ್ತಿದ್ದಂತೆ ಬಾಗಲಕೋಟೆ ನಗರ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಸ್ಥಿತಿ ತಿಳಿಗೊಳಿಸಿದರು. ಸದ್ಯ ವಿಚಾರಣೆಗಾಗಿ ಮಿಷನರಿಯ ಕೆಲ ಸಿಬ್ಬಂದಿಯನ್ನು ಪೊಲೀಸರು ಠಾಣೆಗೆ ಕರೆದೊಯ್ದಿದ್ದಾರೆ. ನಾವು ಕೇವಲ ಪ್ರಾರ್ಥನೆ ಮಾಡುತ್ತಿದ್ದೆವು. ಯಾರನ್ನೂ ನಾವು ಕರೆದಿಲ್ಲ ಅವರಾಗಿಯೇ ಬಂದಿದ್ದಾರೆ. ಇದು ಮತಾಂತರವಲ್ಲ ಪ್ರಾರ್ಥನೆ ಎಂದು ಮಿಷನರಿ ಸಿಬ್ಬಂದಿ ಸಮರ್ಥನೆ ಮಾಡಿಕೊಂಡಿದ್ದಾರೆ. ಇದು ಮತಾಂತರವೇ ಅಥವಾ ಆರೋಪವೇ ಎಂಬುದೇ ಪೊಲೀಸರಿಗೆ ತಿಳಿಯುತ್ತಿಲ್ಲ. ಪೊಲೀಸರು ಎರಡು ಸಮುದಾಯದ ಮುಖಂಡರನ್ನು ಕರೆಸಿ ಮಾಹಿತಿ ಪಡೆಯುತ್ತಿದ್ದಾರೆ.