ತಿರುವನಂತಪುರಂ: ಶಬರಿಮಲೆ ಅಯ್ಯಪ್ಪ ಸ್ವಾಮಿಯ ದರ್ಶನ ಪಡೆಯಲು ಮುಂದಾಗಿರುವ ಮಹಿಳೆಯರನ್ನು ಹೆಲಿಕಾಪ್ಟರ್ ಮೂಲಕ ಕಳುಹಿಸಿಕೊಡುವ ಬಗ್ಗೆ ಕೇರಳ ಪೊಲೀಸರ ಚಿಂತನೆ ನಡೆಸಿದ್ದಾರೆ.
ಹೌದು. ಇದೇ ತಿಂಗಳ 17ನೇ ತಾರೀಖಿನಿಂದ ‘ಮಂಡಲಂ ಮಕರವಿಳಕ್ಕು’ ಪೂಜೆ ನಿಮಿತ್ತ ಶಬರಿಮಲೆ ಅಯ್ಯಪ್ಪ ಸ್ವಾಮಿ ದೇವಾಲಯದ ಬಾಗಿಲು ತೆರೆಯಲಾಗುತ್ತದೆ. ಇಲ್ಲಿಂದ 41 ದಿನಗಳ ಕಾಲ ಅಯ್ಯಪ್ಪ ಸ್ವಾಮಿ ಭಕ್ತರಿಗೆ ದರ್ಶನ ನೀಡಲಿದ್ದಾನೆ. ಹೀಗಾಗಿ ದೇಗುಲ ಪ್ರವೇಶಕ್ಕೆ ನೂರಾರು ಮಹಿಳೆಯರು ಆಸಕ್ತಿ ತೋರಿದ್ದಾರೆ. ಆದರೆ ‘ಶಬರಿಮಲೆ ರಕ್ಷಿಸಿ’ ಅಭಿಯಾನದ ಮೂಲಕ ಸಾವಿರಾರು ಭಕ್ತರು ದೇವಾಲಯಕ್ಕೆ ತೆರಳುವ ಮುಖ್ಯ ದ್ವಾರದಲ್ಲಿ ಪ್ರತಿಭಟನೆ ನಡೆಸುತ್ತಾರೆಂದು ಹೇಳಲಾಗುತ್ತಿದೆ.
ಪ್ರತಿಭಟನೆಯಿಂದಾಗಿ ಈ ಬಾರಿಯೂ ಸಹ ಮಹಿಳೆಯ ಪ್ರವೇಶಕ್ಕೆ ಅಡ್ಡಿಯುಂಟಾಗುತ್ತದೆ ಎನ್ನುವ ನಿರೀಕ್ಷೆಯಿದೆ. ಹೀಗಾಗಿ ಕೇರಳ ಪೊಲೀಸರು ಮಹಿಳೆಯರ ಭದ್ರತೆಯ ದೃಷ್ಟಿಯಿಂದ ಅವರನ್ನು ಕೊಚ್ಚಿ ಹಾಗೂ ತಿರುವನಂತಪುರಂನಿಂದ ನೇರವಾಗಿ ಶಬರಿಮಲೆ ಬೆಟ್ಟಕ್ಕೆ ಹೆಲಿಕಾಪ್ಟರ್ ಮೂಲಕ ತಲುಪಿಸುವ ಕಾರ್ಯಕ್ಕೆ ಮುಂದಾಗಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಈಗಾಗಲೇ ತುರ್ತು ಸನ್ನಿವೇಶಗಳಲ್ಲಿ ಭಕ್ತರ ರಕ್ಷಣೆಗಾಗಿ ಸಿದ್ಧವಾಗಿರುವ ಹೆಲಿಪ್ಯಾಡ್ಗಳಲ್ಲಿ ಹೆಲಿಕಾಪ್ಟರ್ ಗಳನ್ನು ಇಳಿಸುವ ಮೂಲಕ ಮಹಿಳೆಯರನ್ನು ಕರೆತರುವ ಬಗ್ಗೆ ಯೋಚಿಸಿದ್ದಾರೆ. ಆದರೆ ಶಬರಿಮಲೆ ಅರಣ್ಯ ವ್ಯಾಪ್ತಿಯಲ್ಲಿ ಬರುವ ಹೆಲಿಪ್ಯಾಡ್ ನಲ್ಲಿ ಹೆಲಿಕಾಪ್ಟರ್ ಗಳನ್ನು ಇಳಿಸಲು ಅರಣ್ಯ ಇಲಾಖೆಯ ಅನುಮತಿ ಬೇಕು. ಹೀಗಾಗಿ ಕೇರಳ ಪೊಲೀಸರು ಈ ಬಾರಿ ಮಹಿಳೆಯರನ್ನು ಹೇಗೆ ದೇಗುಲದ ಪ್ರವೇಶಕ್ಕೆ ಅನುವು ಮಾಡಿಕೊಡುತ್ತಾರೆಂದು ಕಾದು ನೋಡಬೇಕಿದೆ.
ಶಬರಿಮಲೆ ಪ್ರವೇಶಕ್ಕೆ 560 ಮಹಿಳೆಯರ ನೋಂದಣಿ:
ವಿಶೇಷ ಪೂಜೆ ನಿಮಿತ್ತ 10ರಿಂದ 50 ವರ್ಷದೊಳಗಿನ 560 ಮಹಿಳೆಯರು ಅಯ್ಯಪ್ಪ ಸ್ವಾಮಿ ದರ್ಶನಕ್ಕೆ ನೋಂದಣಿ ಮಾಡಿಕೊಂಡಿದ್ದಾರೆ. ಈ ಬಗ್ಗೆ ಶಬರಿಮಲೆ ದೇಗುಲದ ವೆಬ್ಸೈಟ್ ನಲ್ಲಿ ಮಾಹಿತಿ ಬಿಡುಗಡೆಯಾಗಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
ಯೂ ಟ್ಯೂಬ್ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
ಫೇಸ್ಬುಕ್ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
ಟ್ವಿಟ್ಟರ್ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews