ಬೆಂಗಳೂರು: ಸಿಲಿಕಾನ್ ಸಿಟಿಯ ಕಲಾಸಕ್ತರಿಗಾಗಿ, ಪ್ರತಿ ವರ್ಷದಂತೆ ಈ ವರ್ಷವೂ ನಗರದಲ್ಲಿ ಚಿತ್ರಸಂತೆ ಕಾರ್ಯಕ್ರಮ ಏರ್ಪಡಿಸಲಾಗಿದೆ. ನಾಳೆ ಈ ಕಾರ್ಯಕ್ರಮ ನಡೆಯಲಿದ್ದು, ಈ ಬಾರಿ `ನೇಗಿಲಯೋಗಿ ರೈತರಿಗೆ’ ಚಿತ್ರಸಂತೆ ಸಮರ್ಪಣೆಗೊಳ್ಳುತ್ತಿದೆ.
ನೇಗಿಲ ಕುಲದೊಳಗಡಗಿದೆ ಕರ್ಮ, ನೇಗಿಲ ಮೇಲೆಯೇ ನಿಂತಿದೆ ಧರ್ಮ’ ಸಾಲನ್ನು ಈ ಚಿತ್ರಸಂತೆಯ ಧ್ಯೇಯವಾಕ್ಯವಾಗಿದೆ. ಕುಮಾರಕೃಪಾ ರಸ್ತೆಯಲ್ಲಿ ನಡೆಯುವ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಭಾನುವಾರ(ನಾಳೆ) ಬೆಳಗ್ಗೆ 10.30ಕ್ಕೆ ಚಾಲನೆ ನೀಡಲಿದ್ದಾರೆ.
ಚಿತ್ರಸಂತೆಯಲ್ಲಿ ಪಾಲ್ಗೊಳ್ಳಲು 1,300 ಕಲಾವಿದರನ್ನು ಆಯ್ಕೆ ಮಾಡಿದ್ದು, ಹೊರ ರಾಜ್ಯದ ಕಲಾವಿದರಿಗೆ ಚಿತ್ರಕಲಾ ಪರಿಷತ್ ಊಟ, ವಸತಿ ಸೌಲಭ್ಯ ನೋಡಿಕೊಳ್ಳುತ್ತಿದೆ. ಚಿತ್ರಸಂತೆಯನ್ನು ರೈತರಿಗೆ ಸಮರ್ಪಿಸುತ್ತಿರುವುದರಿಂದ ಈ ಮೇಳದಲ್ಲಿ ರೈತರು ಬಳಸುವ ವಸ್ತು, ಕೃಷಿ ಪರಿಕರಗಳು, ರಾಜ್ಯದ ನಾನಾ ಭಾಗಗಳಲ್ಲಿ ಬಳಸಲಾಗುವ ಎಲ್ಲಾ ರೀತಿಯ ಕೃಷಿ ವಸ್ತುಗಳನ್ನು ಸಂಗ್ರಹಿಸಿ ಅವುಗಳನ್ನು ಪ್ರದರ್ಶಿಸಲಾಗುತ್ತದೆ. ಸುಮಾರು 4 ಲಕ್ಷ ಕಲಾಸಕ್ತರು ಚಿತ್ರಸಂತೆಗೆ ಭೇಟಿ ನೀಡುವ ನಿರೀಕ್ಷೆ ಇದೆ.