ಚಿತ್ರಕಥಾ: ಸಿವಿಲ್ ಎಂಜಿನಿಯರ್ ಆಗಬೇಕಿದ್ದ ಸುಜಿತ್‍ರ ಕಲಾ ಕಾಮಗಾರಿ!

Public TV
2 Min Read
chitra katha aa

ಬೆಂಗಳೂರು: ಕೈಯಲ್ಲಿ ಸಿವಿಲ್ ಎಂಜಿನಿಯರಿಂಗ್ ಪದವಿ, ಆದರೆ ಮೈ ಮನಸುಗಳ ತುಂಬೆಲ್ಲ ನಟನಾಗೋ ಕನಸು. ಇಂಥಾ ತೋಯ್ದಾಟದಲ್ಲಿಯೇ ಕನಸು ಮುಖ್ಯವಾ, ತಕ್ಷಣಕ್ಕೆ ಬದುಕು ರೂಪಿಸಿಕೊಳ್ಳೋದು ಮುಖ್ಯವಾ ಎಂಬ ಆಪ್ಷನ್‍ಗಳಲ್ಲಿ ಕನಸಿಗೇ ಆದ್ಯತೆ ಕೊಟ್ಟು ಮುನ್ನಡೆದವರು ಸುಜಿತ್ ರಾಥೋಡ್. ಇವರು ಈ ವಾರ ಬಿಡುಗಡೆಯಾಗುತ್ತಿರೋ ಚಿತ್ರಕಥಾ ಚಿತ್ರದಲ್ಲಿ ಪ್ರಧಾನ ಪಾತ್ರ ನಿರ್ವಹಿಸುವ ಮೂಲಕ ವರ್ಷಾಂತರಗಳ ಹಿಂದೆ ಆಯ್ಕೆ ಮಾಡಿಕೊಂಡಿದ್ದ ಆಪ್ಷನನ್ನು ಸಾರ್ಥಕಗೊಳಿಸಿಕೊಂಡಿದ್ದಾರೆ.

chitra katha

ಚಿತ್ರಕಥಾ ನೋಡ ನೋಡುತ್ತಲೇ ಬಹುನಿರೀಕ್ಷಿತ ಚಿತ್ರವಾಗಿ ಹೊರ ಹೊಮ್ಮಿದೆ. ಯಶಸ್ವಿ ಬಾಲಾದಿತ್ಯ ಚೊಚ್ಚಲ ನಿರ್ದೇಶನದ ಈ ಚಿತ್ರ ವಿಭಿನ್ನ ಪೋಸ್ಟರ್, ಟ್ರೈಲರ್ ಗಳ ಮೂಲಕ ಹೊಸ ಅಲೆಯನ್ನೇ ಸೃಷ್ಟಿಸಿದೆ. ಎಲ್ಲ ವರ್ಗದ ಪ್ರೇಕ್ಷಕರೂ ಚಿತ್ರಕಥಾ ಬಿಡುಗಡೆಗಾಗಿ ಕಾತರರಾಗಿದ್ದಾರೆ. ಇಂಥದ್ದೊಂದು ಒಳ್ಳೆ ಕಥೆಯ ಮೂಲಕ ಗ್ರ್ಯಾಂಡ್ ಓಪನಿಂಗ್ ಸಿಕ್ಕಿದ್ದರ ಬಗ್ಗೆ ಸುಜಿತ್ ಅವರಲ್ಲಿಯೂ ಸಾರ್ಥಕ ಭಾವವಿದೆ. ಇದನ್ನೂ ಓದಿ : ಚಿತ್ರಕಥಾ: ಓದು ಅರ್ಧಕ್ಕೇ ಬಿಟ್ಟು ಕಲೆಯ ಕರೆಗೆ ಓಗೊಟ್ಟ ಯಶಸ್ವಿ!

chitra katha

2016ರಲ್ಲಿ ವಿದೇಶದಲ್ಲಿ ಮಾಸ್ಟರ್ಸ್ ಮುಗಿಸಿಕೊಂಡು ಭಾರತಕ್ಕೆ ಮರಳಿದ ಸುಜಿತ್ ಅವರಿಗೆ ಈ ಚಿತ್ರದಲ್ಲಿ ನಾಯಕನಾಗೋ ಅವಕಾಶ ಕೂಡಿ ಬಂದಿತ್ತು. ಅಷ್ಟು ವರ್ಷಗಳ ಕನಸು ನನಸಾದ ಸಂತಸದಲ್ಲಿದ್ದ ಅವರ ಪಾಲಿಗೆ ಆರಂಭದಲ್ಲಿಯೇ ವಿಘ್ನ ಎದುರಾಗಿತ್ತು. ಈ ನಿರಾಸೆಯಲ್ಲಿಯೇ ಒಂದು ವರ್ಷ ಕಳೆದು 2017ರಲ್ಲಿಯೇ ನಿರ್ದೇಶಕ ಬಾಲಾದಿತ್ಯರ ಕಥೆಗೆ ಸುಜಿತ್ ಕಮಿಟ್ ಆಗಿದ್ದರು. ಅದಾಗಿ ಮಾರನೇ ವರ್ಷವೇ ಈ ಚಿತ್ರಕ್ಕೆ ಚಾಲನೆ ಸಿಕ್ಕಿತ್ತು. ಅದರಲ್ಲಿ ನಾನಾ ಶೇಡುಗಳಿರೋ ಅದ್ಭುತ ಪಾತ್ರವೂ ಅವರದ್ದಾಗಿತ್ತು. ಇದನ್ನೂ ಓದಿ : ಚಿತ್ರಕಥಾ: ಕಥೆಯ ವೇಗಕ್ಕೆ ಕೊರವಂಜಿಯ ಕನೆಕ್ಷನ್ನು!

chitra katha c

ಹುಬ್ಬಳ್ಳಿಯವರಾದ ಸುಜಿತ್‍ರ ತಂದೆ ಸರ್ಕಾರಿ ಅಧಿಕಾರಿಯಾಗಿದ್ದವರು. ಈ ಕಾರಣದಿಂದಲೇ ಇಡೀ ಕರ್ನಾಟಕದ ಬೇರೆ ಬೇರೆ ಪ್ರದೇಶಗಳಲ್ಲಿ ಬದುಕುವ, ಅಲ್ಲಿಯೇ ಓದುವ ಅವಕಾಶವೂ ಅವರಿಗೆ ಸಿಕ್ಕಿತ್ತು. ಆದ್ದರಿಂದಲೇ ಹುಬ್ಬಳ್ಳಿ, ಕಾರವಾರ, ದಾಂಡೇಲಿ, ಶಿವಮೊಗ್ಗ ಮುಂತಾದೆಡೆಗಳಲ್ಲಿ ಅವರ ವಿದ್ಯಾಭ್ಯಾಸ ನಡೆದಿತ್ತು. ನಂತರ ಎಂಜಿನಿಯರಿಂಗ್‍ಗಾಗಿ ಬೆಂಗಳೂರಿಗೆ ಬಂದ ಸುಜಿತ್‍ರ ಮುಂದಿದ್ದದ್ದು ನಟನಾಗೋ ಗುರಿ. ಆದರೆ ಅನಿವಾರ್ಯವಾಗಿ ತಮ್ಮ ಆಸಕ್ತಿಗೆ ವಿರುದ್ಧವಾದ ದಿಕ್ಕಿನಲ್ಲಿಯೂ ಸಾಗಬೇಕಾಗಿ ಬಂತಾದರೂ ಅವರು ಕಡೆಗೂ ಗುರಿಯತ್ತ ಮೊದಲ ಹೆಜ್ಜೆಯಿಟ್ಟಿದ್ದಾರೆ. ಇದನ್ನೂ ಓದಿ : ಚಿತ್ರಕಥಾ: ತಾಂತ್ರಿಕ ಶ್ರೀಮಂತಿಕೆಯ ಮಾಂತ್ರಿಕ ಸೆಳೆತ!

Chitra katha Yashaswi Baaladitya

ಇದಕ್ಕೆ ಸ್ನೇಹಿತ ಪ್ರಜ್ವಲ್ ಎಂ ರಾಜ ನಿರ್ಮಾಪಕರಾಗಿ ಸಾಥ್ ನೀಡಿದ್ದಾರೆ. ಪ್ರಜ್ವಲ್ ಮತ್ತು ಸುಜಿತ್ ಕಾಲೇಜು ಗೆಳೆಯರು. ಪ್ರಜ್ವಲ್ ಅವರಿಗೆ ಆ ಕಾಲಕ್ಕೇ ನಿರ್ಮಾಪಕನಾಗೋ ಕನಸಿತ್ತು. ಅದನ್ನು ಮನಗಂಡಿದ್ದ ಸುಜಿತ್ ನಿರ್ದೇಶಕ ಯಶಸ್ವಿ ಬಾಲಾದಿತ್ಯ ಹೇಳಿದ ಕಥೆಯನ್ನು ಪ್ರಜ್ವಲ್‍ಗೆ ಒಪ್ಪಿಸಿದಾಗ ಅವರೂ ಥ್ರಿಲ್ ಆಗಿ ನಿರ್ಮಾಣ ಮಾಡಲು ಮುಂದಾಗಿದ್ದರಂತೆ. ಹೀಗೆ ಒಂದಕ್ಕೊಂದು ಪೂರಕ ಸನ್ನಿವೇಶಗಳಿಂದಲೇ ಚಿತ್ರಕಥಾ ಸಿದ್ಧಗೊಂಡಿದೆ. ಎತ್ತ ನೋಡಿದರೂ ಈ ಚಿತ್ರದೆಡೆಗೆ ಕುತೂಹಲವೇ ಕಾಣಿಸುತ್ತಿದೆ. ಅದರ ಅಲೆಯಲ್ಲಿಯೇ ಈ ಚಿತ್ರ ಇದೇ 12ರಂದು ಬಿಡುಗಡೆಯಾಗುತ್ತಿದೆ.

Share This Article
Leave a Comment

Leave a Reply

Your email address will not be published. Required fields are marked *