ಚಿತ್ರದುರ್ಗ: ನೋಡನೋಡುತ್ತಿದ್ದಂತೆ ಭೂಮಿಯಿಂದ ಬೆಂಕಿಯ ಜ್ವಾಲೆ ಉಕ್ಕಿರುವ ಘಟನೆ ಜಿಲ್ಲೆಯ ಚಳ್ಳಕೆರೆ ತಾಲೂಕು ನಾಯಕನಹಟ್ಟಿಯಲ್ಲಿ ನಡೆದಿದೆ.
ನಾಯಕನಹಟ್ಟಿ ಸಮೀಪದ ಮನಮೈನಹಟ್ಟಿ ನಾರಾಯಣ ನಾಯ್ಕ್ ಎಂಬವರ ಜಮೀನಿನಲ್ಲಿ ಈ ರೀತಿಯಾಗಿ ಬೆಂಕಿಯ ಜ್ವಾಲೆ ಉಕ್ಕಿದೆ. ಈ ಘಟನೆ ನಾಲ್ಕು ದಿನಗಳ ಹಿಂದೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಬೆಂಕಿಯ ಜ್ವಾಲೆಯ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ನಾರಾಯಣ ನಾಯ್ಕ್ ಜಮೀನಿನಲ್ಲಿ ವಿದ್ಯುತ್ ತಂತಿಯನ್ನು ಅಳವಡಿಸಲಾಗಿತ್ತು. ವಿದ್ಯುತ್ ಕಂಬವನ್ನು ಅಳವಡಿಸಿ ಸುಮಾರು ವರ್ಷಗಳು ಕಳೆದಿದೆ. ಆದರೆ ವಿದ್ಯುತ್ ಕಂಬದಿಂದ ಹಾದು ಹೋಗಿರುವ 11 ಕೆವಿ ವೋಲ್ಟೇಜ್ ಇರುವ ತಂತಿ ಕಂಬಕ್ಕೆ ತಗುಲಿ ಲಾವರಸದಂತೆ ಬೆಂಕಿ ಉತ್ಪತ್ತಿಯಾಗಿದೆ ಎಂದು ಬೆಸ್ಕಾಂ ಅಧಿಕಾರಿಗಳು ಸ್ಪಷ್ಟನೆ ಕೊಟ್ಟಿದ್ದಾರೆ.
ಈ ಘಟನೆ ನಡೆದಿದ್ದರೂ ಭೂ ವಿಜ್ಞಾನ ಇಲಾಖೆ ಮತ್ತು ಸಂಬಂಧಪಟ್ಟ ಅಧಿಕಾರಿಗಳು ಬಂದು ಪರಿಶೀಲನೆ ನಡೆಸಿಲ್ಲ. ಇತ್ತ ಬೆಸ್ಕಾಂ ಅಧಿಕಾರಿಗಳು ಕೂಡ ಬಂದು ಪರೀಕ್ಷಿಸದೇ ಕಚೇರಿಯಲ್ಲಿಯೇ ಕುಳಿತು ಈ ಬಗ್ಗೆ ಹೇಳಿದ್ದಾರೆ. ಇದರಿಂದ ಅಲ್ಲಿನ ಸುತ್ತಮುತ್ತಲಿನ ಜನರು ಮುಂದೆ ಪರಿಣಾಮ ಉಂಟಾಗಬಹುದು ಎಂದು ಭಯಭೀತರಾಗಿದ್ದಾರೆ.
ಮಧ್ಯಾಹ್ನ ನಾನು ಜಮೀನಿನ ಬಳಿ ಇದ್ದೆ. ಸುಮಾರು ದೂರದಲ್ಲಿ ಹೊಗೆ ಬರುವುದು ಕಾಣಿಸುತ್ತಿತ್ತು. ನಾನು ಎದ್ದು ನೋಡಿದಾಗ ಬೆಂಕಿ ಕೆಂಡದ ರೀತಿ ಉಕ್ಕುತ್ತಿತ್ತು. ನಾನು ದೂರದಿಂದ ನೋಡಿದೆ. ಬಳಿಕ ಅಲ್ಲಿಂದ ನಾನು ವಿಡಿಯೋ ಮಾಡಿಕೊಂಡು ನನ್ನ ಸ್ನೇಹಿತರಿಗೆ ಕಳುಹಿಸಿದೆ. ನಂತರ ಕೆಇಬಿ ಅವರಿಗೆ ಫೋನ್ ಮಾಡಿ ಈ ಬಗ್ಗೆ ಮಾಹಿತಿ ತಿಳಿಸಿದೆ. ಸ್ವಲ್ಪ ಸಮಯದ ನಂತರ ಬೆಂಕಿ ಉಕ್ಕುವುದು ನಿಂತಿತ್ತು. ಹತ್ತಿರ ಹೋಗಿ ನೋಡಿದಾಗ ಭೂಮಿಯ ಒಳಗೆ ಕೆಂಡ ಕಾಣಿಸುತ್ತಿತ್ತು ಎಂದು ಸ್ಥಳೀಯ ತಿಪ್ಪೇಸ್ವಾಮಿ ಅವರು ಹೇಳಿದ್ದಾರೆ.
ಈ ಹಿಂದೆ ತಮಿಳುನಾಡಿನಲ್ಲಿ ಹಾಗೂ ಕರ್ನಾಟಕದಲ್ಲೂ ಈ ರೀತಿ ಘಟನೆ ನಡೆದಿತ್ತು. ಭೂಮಿ ಬಿಸಿಯಾಗಿ ವಿದ್ಯುತ್ ಕಂಬದ ಪಕ್ಕದಲ್ಲಿ ವಿದ್ಯುತ್ ಭೂಮಿಗೆ ಒಳಗೆ ಹೋದಾಗ ಶಿಲೆಗಳು ಕರಗಿ, ಅದರ ಪಾಕ ಉಕ್ಕಿ ಹೊರ ಬರುತ್ತದೆ. ಅದೇ ರೀತಿ ಇಲ್ಲೂ ಆಗಿದೆ, ಇದು ಲಾವರಸ ಅಲ್ಲ. ವಿದ್ಯುತ್ ಭೂಮಿಯ ಒಳಗೆ ಹೋಗಿದ್ದು, ಹೆಚ್ಚಿನ ಉಷ್ಣತೆಯಿಂದ ಈ ರೀತಿ ಆಗಿದೆ ಅಷ್ಟೇ. ಇದರಿಂದ ಜನರು ಆತಂಕ ಪಡುವ ಅವಶ್ಯಕತೆ ಇಲ್ಲ ಎಂದು ಭೂ ವಿಜ್ಞಾನ ತಜ್ಞ ಪ್ರಕಾಶ್ ತಿಳಿಸಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
https://www.youtube.com/watch?v=tgsmoRfZ-hw