ಚಿತ್ರದುರ್ಗ: ಐಎಂಎ ಪ್ರಕರಣದಲ್ಲಿ ಸಚಿವ ಜಮೀರ್ ಅಹಮ್ಮದ್ ಖಾನ್ ಭಾಗಿಯಾಗಿದ್ದಾರೆ ಹೀಗಾಗಿ ಅವರನ್ನು ಸಚಿವ ಸ್ಥಾನದಿಂದ ವಜಾಗೊಳಿಸುವಂತೆ ಮೊಳಕಾಲ್ಮೂರು ಶಾಸಕ ಶ್ರೀರಾಮುಲು ಆಗ್ರಸಿದ್ದಾರೆ.
ಮೊಳಕಾಲ್ಮೂರು ತಾಲ್ಲೂಕಿನ ರಾಂಪುರದಲ್ಲಿ ಭದ್ರಾ ಹಿನ್ನೀರು ಯೋಜನೆಯ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಐಎಂಎ ಪ್ರಕರಣದ ಪ್ರಮುಖ ಆರೋಪಿ ಮನ್ಸೂರ್ ಖಾನ್ಗೆ ಬನ್ನಿ ನಾವು ರಕ್ಷಣೆ ನೀಡುತ್ತೇವೆ ಎಂದು ಜಮೀರ್ ಅಹಮ್ಮದ್ ಖಾನ್ ಹೇಳುತ್ತಾರೆ. ಇದನ್ನು ನೋಡಿದರೆ ಅವರು ಕೂಡ ನೇರವಾಗಿ ಈ ಅಕ್ರಮದಲ್ಲಿ ಭಾಗಿಯಾಗಿದ್ದಾರೆ ಅನ್ನಿಸುತ್ತಿದೆ ಎಂದು ಆರೋಪ ಮಾಡಿದರು.
ಈ ಸಮ್ಮಿಶ್ರ ಸರ್ಕಾರ ಭ್ರಷ್ಟಾಚಾರ ರಹಿತ ಸರ್ಕಾರ ಆಗಿದ್ದರೆ, ಈಗಾಗಲೇ ಇಡಿ ತನಿಖೆಗೆ ಹಾಜರಾಗುವಂತೆ ನೋಟಿಸ್ ನೀಡಿರುವ ಸಚಿವರಾದ ಡಿಕೆಶಿ ಹಾಗು ಜಮೀರ್ ಅವರ ರಾಜೀನಾಮೆ ಪಡೆಯಬೇಕು. ಅಲ್ಲದೇ ಮಾಜಿ ಹಾಗೂ ಹಾಲಿ ಸಿಎಂಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಅವರು, ಸಿದ್ದರಾಮಯ್ಯ ರಾಜ್ಯದಲ್ಲಿ ಅಸ್ತಿತ್ವ ಕಳೆದುಕೊಂಡಿದ್ದಾರೆ. ಇನ್ನು ಈ ಕುಮಾರಸ್ವಾಮಿ ಲಾಟರಿ ಮೂಲಕ ಸಿಎಂ ಆಗಿದ್ದಾರೆ. ಹೀಗಾಗಿ ಇವರಿಬ್ಬರು ಸೇರಿ ಎಂಪಿ ಚುನಾವಣೆಯಲ್ಲಿ ಎರಡು ಸ್ಥಾನ ಗೆಲ್ಲಲು ಆಗಿಲ್ಲ ಎಂದು ವ್ಯಂಗ್ಯವಾಡಿದರು.
ಕಾಂಗ್ರೆಸ್ ಮತ್ತು ದಳದವರಿಗೆ ಭಾರತ ದೇಶದಲ್ಲಿ ಮೋದಿ ಅಲೆ ಇರೋದನ್ನು ಸಹಿಸಿಕೊಳ್ಳಲು ಸಹ ಆಗುತ್ತಿಲ್ಲ. ಹೀಗಾಗಿ ಈ ಮೈತ್ರಿ ಸರ್ಕಾರ ಇರುವವರೆಗೂ ಯಾವುದೇ ಅಭಿವೃದ್ಧಿ ಮಾಡದೇ ಕೇವಲ ವರ್ಗಾವಣೆಯಲ್ಲಿ ಹಣ ಮಾಡುವ ಕೆಲಸ ಮಾಡುತ್ತಿದ್ದು, ಈ ಮೈತ್ರಿ ಸರ್ಕಾರವು ಭ್ರಷ್ಟಾಚಾರದ ಕೂಪವೆಂದು ಹೇಳಿದರು.
ಇದೇ ವೇಳೆ ಸಿಎಂ ಗ್ರಾಮ ವಾಸ್ತವ್ಯ ಬಗ್ಗೆ ಮಾತನಾಡಿ, ಅವರು ಗ್ರಾಮ ವಾಸ್ತವ್ಯ ಮಾಡುತ್ತಾರೆ ಆದರೆ ಅಲ್ಲಿನ ಸಮಸ್ಯೆ ಆಲಿಸಿ ಪರಿಹಾರ ಸೂಚಿಸುವ ಬದಲಾಗಿ ಎಲ್ಲರನ್ನೂ ಬೈಯುತ್ತಾರೆ ಎಂದು ಕುಟುಕಿದರು.