ಚಿತ್ರದುರ್ಗ: ಕರ್ನಾಟಕ ರಾಜ್ಯದಲ್ಲಿ ಈವರೆಗೆ 247 ಜನರಲ್ಲಿ ಕೊರೊನಾ ಸೋಂಕು ಪತ್ತೆಯಾಗಿದ್ದು, 8 ಜನ ಸಾವಿಗೀಡಾಗಿದ್ದರೆ 60 ಜನ ಗುಣಮುಖರಾಗಿದ್ದಾರೆ. ಹೀಗಾಗಿ ಭಾರತ ದೇಶದಲ್ಲಿ ಪ್ರಾರಂಭದಲ್ಲಿ ಕೊರೊನಾ ಪೀಡಿತರ ಸಂಖ್ಯೆಯಲ್ಲಿ 3ನೇ ಸ್ಥಾನದಲ್ಲಿದ್ದ ಕರ್ನಾಟಕ ರಾಜ್ಯ ಈಗ 12ನೇ ಸ್ಥಾನಕ್ಕೆ ಇಳಿದಿದೆ ಎಂದು ಆರೋಗ್ಯ ಸಚಿವ ಶ್ರೀರಾಮುಲು ತಿಳಿಸಿದ್ದಾರೆ.
ಚಿತ್ರದುರ್ಗದ ಡಿಸಿ ಕಚೇರಿಯಲ್ಲಿ ನಡೆದ ಅಧಿಕಾರಿಗಳ ಸಭೆಯ ಬಳಿಕ ಮಾತನಾಡಿದ ಅವರು, ಕೊರೊನಾ ಸೋಂಕು ಹರಡದಂತೆ ಮೇ 3ರವರೆಗೆ ಲಾಕ್ ಡೌನ್ ಮುಂದುವರಿಯಲಿದೆ ಎಂದು ಪ್ರಧಾನಿ ಮೋದಿಯವರು ತಿಳಿಸಿದ್ದಾರೆ. ಆದ್ದರಿಂದ ಎಲ್ಲರೂ ಪ್ರಧಾನಿ ಮೋದಿಯವರು ನೀಡಿರುವ ಸಪ್ತ ಸೂತ್ರಗಳನ್ನು ಚಾಚು ತಪ್ಪದೇ ಪಾಲಿಸಬೇಕು ಎಂದರು.
ಮೋದಿಯವರು ಹೇಳಿರುವಂತೆ ರಾಜ್ಯದಲ್ಲಿ ಯಾರು ಸಹ ಹಸಿವಿನಿಂದ ಬಳಲಬಾರದು. ಹೀಗಾಗಿ ಶ್ರೀಮಂತರು ಹಾಗೂ ಸ್ಥಿತಿವಂತರಾಗಿರುವವರು ಬಡವರಿಗೆ, ನಿರ್ಗತಿಕರಿಗೆ ಮತ್ತು ಕೂಲಿಕಾರ್ಮಿಕರಿಗೆ ಸಹಾಯವಾಗುವಂತೆ ದಾನಮಾಡಿ ಎಂದು ಕರೆನೀಡಿದರು. ಜೊತೆಗೆ ಸರ್ಕಾರದಿಂದ ಕೂಡ ಬಡವರು, ನಿರ್ಗತಿಕರಿಗೆ ಆಹಾರ ವ್ಯವಸ್ಥೆ ಮಾಡಲಾಗುವುದು ಎಂಬ ಭರವಸೆ ಸಹ ನೀಡಿದರು.
ಕೊರೊನಾ ಭೀತಿಯಿಂದ ಎಲ್ಲರೂ ಮಾಸ್ಕ್ ಬಳಸುತ್ತಿದ್ದಾರೆ. ಆದರೆ ವೈದ್ಯರು ಹೊರತುಪಡಿಸಿ ಸಾರ್ವಜನಿಕರು ಎನ್ 95 ಮಾಸ್ಕ್ ಧರಿಸುವ ಅಗತ್ಯವಿಲ್ಲ. ಜನಸಾಮಾನ್ಯರು ಕೇವಲ ಬಟ್ಟೆಗಳಿಂದ ತಯಾರಿಸಿದ ಮಾಸ್ಕ್ ಧರಿಸಿದರೆ ಸಾಕು. ಅದರಿಂದ ಯಾವುದೇ ಸಮಸ್ಯೆಗಳಿಲ್ಲ ಎಂದರು. ಜೊತೆಗೆ ಕೋವಿಡ್ 19 ಹರಡದಂತೆ ಜಿಲ್ಲೆಯ ಗಡಿಭಾಗದಲ್ಲಿ ಬಂದ್ ಮಾಡಿ ಕೊರೊನಾ ಹರಡದಂತೆ ಕಟ್ಟೆಚ್ಚರ ವಹಿಸಲಾಗಿದೆ. ಈ ವೇಳೆ ಕೃಷಿ ಕಾಯಕಕ್ಕೆ ಸಕಲ ನೆರವು ನೀಡುವ ಮೂಲಕ ರೈತರ ಸಮಸ್ಯೆಗಳಿಗೆ ಸ್ಪಂದಿಸುವಂತೆ ಕೃಷಿ ಇಲಾಖೆ ಅಧಿಕಾರಿಗಳಿಗೆ ಸಚಿವ ರಾಮುಲು ಸೂಚಿಸಿದರು.