ಚಿತ್ರದುರ್ಗ: ರ್ಯಾಲಿ ವೇಳೆ ಮೋದಿ ಹೆಲಿಕಾಪ್ಟರ್ ನಿಂದ ಟ್ರಂಕ್ ಒಂದನ್ನು ಇನ್ನೋವಾ ಕಾರಿಗೆ ತುಂಬಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಚಿತ್ರದುರ್ಗ ಪೊಲೀಸ್ ವರಿಷ್ಠಾಧಿಕಾರಿ ಡಾ.ಕೆ ಅರುಣ್ ಸ್ಪಷ್ಟನೆ ನೀಡಿದ್ದಾರೆ.
ಆ ಟ್ರಂಕ್ ನಲ್ಲಿ ಭದ್ರತೆಗೆ ಸಂಬಂಧಿಸಿದ ಸಲಕರಣೆಗಳು ಇದ್ದವು. ಆ ಕಾರು ಕೂಡ ಬೆಂಗಾವಲು ಪಡೆಯ ವಾಹನವಾಗಿತ್ತು ಎಂದು ಭದ್ರತಾ ಸಂಸ್ಥೆಗಳಿಂದ ಮಾಹಿತಿ ಸಿಕ್ಕಿದೆ. ಈ ಬಗ್ಗೆ ಮತ್ತಷ್ಟು ಮಾಹಿತಿಯನ್ನು ಸಂಗ್ರಹಿಸುತ್ತಿದ್ದೇವೆ ಎಂದು ಅರುಣ್ ತಿಳಿಸಿದ್ದಾರೆ.
ಏನಿದು ವಿವಾದ?
ಏಪ್ರಿಲ್ 9 ರಂದು ಚಿತ್ರದುರ್ಗಕ್ಕೆ ಆಗಮಿಸಿದ್ದ ಮೋದಿ ಅವರ ಹೆಲಿಕಾಪ್ಟರ್ ನಲ್ಲಿ ದೊಡ್ಡ ಟ್ರಂಕ್ ಒಂದನ್ನು ತರಲಾಗಿತ್ತು. ಈ ವೇಳೆ ಹೆಲಿಕಾಪ್ಟರ್ ಲ್ಯಾಂಡ್ ಆಗುತ್ತಿದಂತೆ ಅಲ್ಪ ದೂರದಲ್ಲಿ ನಿಂತಿದ್ದ ಇನ್ನೋವಾ ಕಾರಿಗೆ ಟ್ರಂಕ್ ಅನ್ನು ತರಾತುರಿಯಲ್ಲಿ ಶಿಫ್ಟ್ ಮಾಡಲಾಗಿತ್ತು. ರಕ್ಷಣಾ ಪಡೆ ಸಿಬ್ಬಂದಿ ಟ್ರಂಕ್ ಅನ್ನು ಕ್ಷಣಾರ್ಧದಲ್ಲಿ ತೆಗೆದು ಕಾರಿಗೆ ತುಂಬಿಸಿದ್ದರು. ಅಲ್ಲದೆ ಪರಿಶೀಲನೆ ಮಾಡದೇ ಕಾರನ್ನು ಅಲ್ಲಿಂದ ತೆರಳಲು ಅನುಮತಿ ನೀಡಲಾಗಿತ್ತು.
ಇನ್ನೋವಾ ಕಾರು ಮೋದಿಯ ಬೆಂಗಾವಲು ವಾಹನದ ಸಾಲಿನಲ್ಲಿ ಇರಲಿಲ್ಲ. ಆದರೂ ಅದು ಹೇಗೆ ಅಲ್ಲಿಗೆ ಆಗಮಿಸಿತು. ಆ ಕಾರಿನ ಮಾಲೀಕರು ಯಾರು? ಅಲ್ಲದೇ ಯಾವ ಸೆಕ್ಯೂರಿಟಿ ಪರಿಶೀಲನೆ ಇಲ್ಲದೇ ತರಾತುರಿಯಲ್ಲಿ ತೆಗೆದುಕೊಂಡು ಹೋಗಿದ್ದು ಏಕೆ ಎಂಬ ಪ್ರಶ್ನೆಗಳನ್ನು ಕಾಂಗ್ರೆಸ್ ಮುಂದಿಟ್ಟಿತ್ತು. ಕಾಂಗ್ರೆಸ್ ನಾಯಕರು ಚುನಾವಣೆ ಸಮಯದಲ್ಲಿ ಮೋದಿ ಹಣ ಹಂಚಿಕೆ ಮಾಡಲು ಮೋದಿ ಟ್ರಂಕ್ ನಲ್ಲಿ ಹಣವನ್ನು ತಂದಿದ್ದಾರೆ ಎಂದು ಆರೋಪಿಸಿದ್ದರು.
ಕಾಂಗ್ರೆಸ್ ದೂರು:
ಮೋದಿ ಹೆಲಿಕಾಪ್ಟರ್ ಮೂಲಕ ಅಕ್ರಮವಾಗಿ ಹಣ ಸಾಗಾಟ ಮಾಡುವ ಶಂಕೆ ಕೇಳಿ ಬಂದಿದೆ. ಹೀಗಾಗಿ ಈ ಘಟನೆಯನ್ನು ಗಂಭೀರವಾಗಿ ಸ್ವೀಕರಿಸಿ ಪ್ರಧಾನಿ ವಿರುದ್ಧ ಪ್ರಕರಣ ದಾಖಲಿಸಿ ತನಿಖೆ ನಡೆಸಬೇಕೆಂದು ಚಿತ್ರದುರ್ಗ ಕಾಂಗ್ರೆಸ್ ವಕ್ತಾರ ಶಿವು ಯಾದವ್ ಚುನಾವಣಾ ಅಧಿಕಾರಿಗೆ ದೂರು ನೀಡಿದ್ದಾರೆ.