ಚಿತ್ರದುರ್ಗ: ಪೋಕ್ಸೋ ಕೇಸಲ್ಲಿ ಶುಕ್ರವಾರದಿಂದ ಪೊಲಿಸ್ ಕಸ್ಟಡಿಯಲ್ಲಿ ಇರುವ ಮುರುಘಾ ಶ್ರೀಗಳನ್ನು ಇಂದು ತನಿಖಾ ತಂಡ ವಿಚಾರಣೆಗೆ ಒಳಪಡಿಸಿದೆ. ಆದರೆ ಶ್ರೀಗಳು ವಿಚಾರಣೆಗೆ ಸಹಕರಿಸ್ತಿಲ್ಲ ಎನ್ನಲಾಗಿದೆ.
ಎಲ್ಲಾ ರೀತಿಯ ಆರೋಪಗಳನ್ನು ಸ್ವಾಮೀಜಿ ತಳ್ಳಿ ಹಾಕಿದ್ದಾರೆ. ನನ್ನ ವಿರುದ್ಧ ಷಡ್ಯಂತ್ರ್ಯ ನಡೆದಿದೆ ಎಂದು ಆರೋಪ ಮಾಡಿದ್ದಾರೆ. ವಿಚಾರಣೆ ಮಧ್ಯೆ ಶ್ರೀಗಳನ್ನು ಜಿಲ್ಲಾಸ್ಪತ್ರೆಗೆ ಕರೆದೊಯ್ದ ಪೊಲೀಸರು ಇಸಿಜಿ, ಎಕೋ ಸೇರಿ ಹಲವು ಟೆಸ್ಟ್ ಮಾಡಿಸಿದ್ರು. ಜೊತೆಗೆ ಸ್ವಾಮೀಜಿಗಳ ಉಗುರು, ಕೂದಲು ಸಂಗ್ರಹಿಸಿದರು. ಈ ನಡುವೆ ಶ್ರೀಗಳ ಪುರುಷತ್ವ ಪರೀಕ್ಷೆ ಫಲಿತಾಂಶ, ಪಾಸಿಟೀವ್ ಎಂದು ಬಂದಿದೆ.
ಶ್ರೀಗಳ ಜಾಮೀನು ಪ್ರಯತ್ನಕ್ಕೆ ಕೋರ್ಟ್ನಲ್ಲಿ ಹಿನ್ನಡೆ ಆಗಿದೆ. ಪೊಲೀಸ್ ಕಸ್ಟಡಿ ಅವಧಿ ಮುಗಿಯೋವರೆಗೂ ಜಾಮೀನು ಅರ್ಜಿ ಸಲ್ಲಿಸದಂತೆ ಕೋರ್ಟ್ ಸೂಚಿಸಿದೆ. ಪ್ರಕರಣದ ಎ3, ಎ4, ಎ5 ಆರೋಪಿಗಳು ನಾಪತ್ತೆಯಾಗಿದ್ದು, ನಿರೀಕ್ಷಣಾ ಜಾಮೀನು ಕೋರಿ ಕೋರ್ಟ್ ಮೊರೆ ಹೋಗಿದ್ದಾರೆ. ಈ ನಿರೀಕ್ಷಣಾ ಜಾಮೀನು ಅರ್ಜಿಗಳಿಗೆ ಆಕ್ಷೇಪಣೆ ಸಲ್ಲಿಸಲು ಪೊಲೀಸರು ಸೋಮವಾರದವರೆಗೆ ಸಮಯ ಪಡೆದಿದ್ದಾರೆ.
ಇತ್ತ ಮಠದಲ್ಲಿ ನೀರವ ಮೌನ ಆವರಿಸಿದೆ. ಮುರುಘಾ ಶ್ರೀಗಳ ಭಕ್ತೆಯೊಬ್ಬರು ರಸ್ತೆಯಲ್ಲಿ ಹೈಡ್ರಾಮಾ ಮಾಡಿದ್ದಾರೆ. ಮಠದ ಸಿಬ್ಬಂದಿ ಬಿಟ್ಟು ಯಾರೂ ಮಠದ ಕಡೆ ಸುಳಿದಿಲ್ಲ. ಭಾನುವಾರ ಬಂತೆಂದ್ರೆ ಗಿಜಿಗುಡುತ್ತಿದ್ದ ಮಠ ಮತ್ತು ಉದ್ಯಾನವನದ ಕಡೆ ಇಂದು ಜನ ಸುಳಿದಿಲ್ಲ. ಶ್ರೀಗಳ ಬಂಧನದ ಪರಿಣಾಮ ಮುರುಘಾ ಮಠದಲ್ಲಿ ಪ್ರತಿತಿಂಗಳು ನಡೆಯುತ್ತಿದ್ದ ಕಲ್ಯಾಣೋತ್ಸವದ ಮೇಲೆಯೂ ಆಗಿದೆ. ನೋಂದಣಿ ಮಾಡಿಕೊಂಡಿದ್ದ 9 ಜೋಡಿಗಳ ಪೈಕಿ, 2 ಜೋಡಿ ಇಲ್ಲಿ ಮದ್ವೆ ರದ್ದು ಮಾಡಿಕೊಂಡಿವೆ. ಆದರೆ ಕಲ್ಯಾಣೋತ್ಸವ ಎಂದಿನಂತೆ ನಡೆಯುತ್ತೆ ಎಂದು ಮುರುಘಾ ಮಠ ಪ್ರಕಟಣೆಯಲ್ಲಿ ತಿಳಿಸಿದೆ.