ಚಿತ್ರದುರ್ಗ: ಅತ್ತೆ ಮಗನೋರ್ವ ವಿವಾಹಿತ ಮಹಿಳೆಗೆ ಮೊಬೈಲ್ ಸಂದೇಶ ಕಳುಹಿಸಿದ ಹಿನ್ನೆಲೆಯಲ್ಲಿ ಆರಂಭವಾದ ಕೌಟಂಬಿಕ ಕಲಹ, ದಂಪತಿಯ ಆತ್ಮಹತ್ಯೆಯಿಂದ ಅಂತ್ಯವಾಗಿರುವ ಘಟನೆ ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲೂಕಿನಯಾದಲಗಟ್ಟ ಗ್ರಾಮದಲ್ಲಿ ನಡೆದಿದೆ.
ಯಾದಲಗಟ್ಟೆ ಗ್ರಾಮದಲ್ಲಿ ಪತ್ನಿ ಶೈಲ ಮತ್ತು ಪತಿ ಮಹಂತೇಶ್ ಇಬ್ಬರು 9 ವರ್ಷಗಳ ಹಿಂದೆ ಮದುವೆಯಾಗಿದ್ದರು. ಇವರಿಗೆ 4 ವರ್ಷದ ಹಾಗೂ 6 ವರ್ಷದ ಇಬ್ಬರು ಗಂಡು ಮಕ್ಕಳಿದ್ದಾರೆ. ಆದರೆ ಕಳೆದ ಆರೇಳು ತಿಂಗಳಿಂದ ಶೈಲ ಅವರ ಮೊಬೈಲ್ ಗೆ ಪತಿ ಕರೆ ಮಾಡಿದಾಗ ಅವರ ಮೊಬೈಲ್ ಸದಾ ಎಂಗೇಜ್ ಬರುತ್ತಿತ್ತು. ಅಲ್ಲದೇ ಪ್ರತಿದಿನ ಸಾಕಷ್ಟು ಮೆಸೇಜ್ ಗಳು ಸಹ ಶೈಲ ಅವರ ಮೊಬೈಲ್ ಗೆ ಬರುತ್ತಿದ್ದವಂತೆ. ಹೀಗಾಗಿ ಮೊಬೈಲ್ ಗಮನಿಸಿದ ಪತಿ ಮಹಂತೇಶ್, ಪತ್ನಿ ಶೈಲ ಜೊತೆ ಜಗಳವಾಡಿದ್ದಾನೆ. ಅಲ್ಲದೆ ಪತ್ನಿಗೆ ಎಚ್ಚರಿಕೆ ನೀಡಿದ್ದನು. ಬಳಿಕ ಎಲ್ಲಾ ವಿಚಾರದಲ್ಲೂ ಅನುಮಾನಿಸುತ್ತಿದ್ದನು. ಇದನ್ನೂ ಓದಿ: ಮಹಿಳೆಯನ್ನು ನಗ್ನ ಮಾಡಿ ಪೈಶಾಚಿಕ ಹಲ್ಲೆ ನಡೆಸಿದ ಕಿರಾತಕರು
ಗಂಡನ ಅನುಮಾನ ಹಾಗೂ ಗಲಭೆಯಿಂದ ಮನನೊಂದ ಪತ್ನಿ ಶೈಲ ಭಾನುವಾರ ರಾತ್ರಿ ನೇಣಿಗೆ ಶರಣಾಗಿದ್ದಾಳೆ. ಆಗ ಪತ್ನಿಯ ಸಾವಿನಿಂದ ಮನನೊಂದ ಪತಿ ಮಹಂತೇಶ್ ಕೂಡ ಗಾಬರಿಯಾಗಿ ಸೋಮವಾರ ಬೆಳಗ್ಗೆ ನೇಣು ಹಾಕಿಕೊಂಡು ಸಾವನ್ನಪ್ಪಿದ್ದಾನೆ. ಇದಿರಿಂದಾಗಿ ಏನು ಅರಿಯದ ಕಂದಮ್ಮಗಳು ಅನಾಥರಾಗಿದ್ದಾರೆ.
ಈ ಸಂಬಂಧ ತಳಕು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಘಟನೆ ಕುರಿತು ತನಿಖೆಯನ್ನು ಚುರುಕುಗೊಳಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ಎಸ್ಪಿ ಜಿ.ರಾಧಿಕಾ ತಿಳಿಸಿದ್ದಾರೆ. ಇದನ್ನೂ ಓದಿ: ಯಾದಗರಿಯಲ್ಲಿ ಮಹಿಳೆಯನ್ನು ನಗ್ನಗೊಳಿಸಿ ಥಳಿಸಿದ ನಾಲ್ವರು ಅರೆಸ್ಟ್