– ಆತಂಕಕ್ಕೊಳಗಾದ ಕೋಟೆನಾಡಿನ ಜನ
ಚಿತ್ರದುರ್ಗ: ಎಲ್ಲೆಡೆ ಕೊರೊನಾ ವೈರಸ್ ತಾಂಡವವಾಡ್ತಿದೆ. ಈ ನಡುವೆ ಕೋಟೆನಾಡು ಚಿತ್ರದುರ್ಗ ತಾಲೂಕಿನ ಮಲ್ಲಾಪುರ ಕೆರೆಯಲ್ಲಿ 2 ದಿನಗಳಿಂದ ನಿರಂತರವಾಗಿ ಸಾವಿರಾರು ಮೀನುಗಳು ಸಾವನ್ನಪ್ಪಿವೆ. ಹೀಗಾಗಿ ಮೀನುಪ್ರಿಯರು ಹಾಗೂ ಕೋಟೆನಾಡಿನ ಜನರಲ್ಲಿ ಭಾರೀ ಆತಂಕ ಸೃಷ್ಟಿಯಾಗಿದೆ. ಮೀನುಗಳನ್ನು ತಿನ್ನಬೇಕೋ, ಬೇಡವೋ ಎಂಬ ಪ್ರಶ್ನೆ ಮೂಡಿದೆ.
ಕೆರೆಯಲ್ಲಿ ಮೀನುಗಳ ಸಾವು ಕಂಡು ಅವುಗಳನ್ನು ಖರೀದಿಸಲು ಜನರು ಹಿಂದೇಟು ಹಾಕುತ್ತಿದ್ದು, ಮೀನುಗಳ ಸಾವಿನಿಂದಾಗಿ ಗ್ರಾಮದಲ್ಲಿ ದುರ್ನಾಥ ಸಹ ಬೀರುತ್ತಿದೆ. ಹೀಗಾಗಿ ಜನರು ಸಹ ಮೀನುಗಾರಿಕೆ ಇಲಾಖೆಗೆ ಹಿಡಿ ಶಾಪ ಹಾಕುತ್ತಿದ್ದಾರೆ. ಅಲ್ಲದೇ ಚಿತ್ರದುರ್ಗ ನಗರದಿಂದ ಬರುವ ಯೂಜಿಡಿ ಹಾಗೂ ಚರಂಡಿಯ ನೀರು ಸಹ ಈ ಕೆರೆಗೆ ಸೇರುತ್ತಿದ್ದು, ಘನತ್ಯಾಜ್ಯದ ಮಿಶ್ರಣದಿಂದಾಗಿಯೂ ಮೀನುಗಳು ಸಾವನ್ನಪ್ಪಿರಬಹುದೆಂಬ ಅಭಿಪ್ರಾಯ ಸಾರ್ವಜನಿಕರಲ್ಲಿ ಕೇಳಿ ಬಂದಿವೆ.
ಇದನ್ನೆಲ್ಲ ಕೇಳಿದ ಮೀನುಗಾರಿಕೆ ಇಲಾಖೆ ಅಧಿಕಾರಿಗಳು ಪ್ರತಿಕ್ರಿಯಿಸಿದ್ದು, ಮಲ್ಲಾಪುರ ಕೆರೆಯಲ್ಲಿ ಮೀನುಗಳು ಸಾವನ್ನಪ್ಪಲು ಕೊರೊನಾ ಕಾರಣವಲ್ಲ. ಇದರಿಂದಾಗಿ ಮೀನುಪ್ರಿಯರು ಆತಂಕಪಡುವ ಅಗತ್ಯವಿಲ್ಲ. ಪ್ರತಿವರ್ಷವೂ ಈ ರೀತಿ ಎಲ್ಲೆಡೆ ಮೀನುಗಳ ಸಾವು ಸಹಜವಾಗಿದೆ. ಹೊಸ ಮಳೆ ಹಾಗೂ ಬೇಸಿಗೆಯ ತಾಪ ಹೆಚ್ಚಾಗಿ ಮೀನುಗಳಿಗೆ ಆಮ್ಲಜನಕದ ಕೊರತೆಯಿಂದ ಅವುಗಳು ಈ ರೀತಿ ಸಾವನ್ನಪ್ಪುತ್ತವೆ ಎಂದು ಸ್ಪಷ್ಟಪಡಿಸಿದ್ದಾರೆ.