ಚಿತ್ರದುರ್ಗ: ಪ್ರೀತಿಗೆ ಬಿದ್ದು ಐದು ದಿನಗಳ ಹಿಂದೆ ದಿಢೀರ್ ಅಂತ ನಾಪತ್ತೆಯಾಗಿದ್ದ ಬಾಲಕಿ ಇಂದು ಶವವಾಗಿ ಪತ್ತೆಯಾದ ಘಟನೆ ಹಿರಿಯೂರು ತಾಲೂಕಿನ ಆದಿವಾಲ ಗ್ರಾಮದಲ್ಲಿ ನಡೆದಿದೆ.
ಆದಿವಾಲ ಗ್ರಾಮದ ಚಂದ್ರಮ್ಮ ಹಾಗೂ ಕುಮಾರ್ ದಂಪತಿಯ ಪುತ್ರಿ ಪಲ್ಲವಿ (15) ಮೃತ ಬಾಲಕಿ. ಸರ್ಕಾರಿ ಶಾಲೆಯಲ್ಲಿ ಎಸ್ಎಸ್ಎಲ್ಸಿ ಓದುತ್ತಿದ್ದ ಪಲ್ಲವಿ ನಾಪತ್ತೆಯಾಗಿ, ಶವವಾಗಿ ಪತ್ತೆಯಾಗಿರುವುದು ಅನೇಕ ಅನುಮಾನಗಳಿಗೆ ಕಾರಣವಾಗಿದೆ.
ಪಲ್ಲವಿ ಆದಿವಾಲ ಗ್ರಾಮದ ಮಲ್ಲೇಶ್ನ್ನು ಪ್ರೀತಿಸಿತ್ತದ್ದಳು. ಈ ವಿಚಾರವನ್ನು ಮಲ್ಲೇಶ್ ಪಲ್ಲವಿ ಮನೆಯವರಿಗೆ ತಿಳಿಸಿ, ಆಕೆಯನ್ನು ಮದುವೆಯಾಗುವುದಾಗಿ ಸಹ ಹೇಳಿದ್ದ. ಆದರೆ ಪಲ್ಲವಿ ಮನೆಯವರು ಯಾರೂ ಒಪ್ಪಿರಲಿಲ್ಲ. ಅಲ್ಲದೆ ಇವರ ಪ್ರೀತಿಗೂ ಪೋಷಕರು ವಿರೋಧ ವ್ಯಕ್ತಪಡಿಸಿದ್ದರು.
ಪಲ್ಲವಿ ಐದು ತಿಂಗಳ ಹಿಂದೆ ನಾಪತ್ತೆಯಾಗಿದ್ದಳು. ಹೀಗಾಗಿ ಆಕೆ ಮಲ್ಲೇಶ್ ಜೊತೆಗೆ ಓಡಿ ಹೋಗಿರಬಹುದು ಎಂಬ ಅನುಮಾನ ಕೂಡ ಗ್ರಾಮದಲ್ಲಿ ವ್ಯಕ್ತವಾಗಿತ್ತು. ಈ ಸಂಬಂಧ ಪಲ್ಲವಿ ಪೋಷಕರು ಹಿರಿಯೂರು ಗ್ರಾಮಾಂತರ ಠಾಣೆಗೆ ದೂರು ನೀಡಿದ್ದರು. ಆದರೆ ಇಂದು ಗ್ರಾಮದ ಹೊರವಲಯದಲ್ಲಿರುವ ಬೋವಿ ಕಾಲೋನಿಯ ಬಾವಿಯಲ್ಲಿ ಪಲ್ಲವಿ ಶಚ ಪತ್ತೆಯಾಗಿದೆ.
ಮಲ್ಲೇಶ್ ನಮ್ಮ ಮಗಳನ್ನು ಅಪಹರಿಸಿ ಕೊಲೆ ಮಾಡಿದ್ದಾನೆ ಎಂದು ಮೃತಳ ತಾಯಿ ಆರೋಪಿಸಿದ್ದಾರೆ. ಜೊತೆಗೆ ಆರೋಪಿಗೆ ತಕ್ಕ ಶಿಕ್ಷೆ ಆಗಬೇಕು ಎಂದು ಆಗ್ರಹಿಸಿದ್ದಾರೆ. ಆದರೆ ಪೋಲಿಸರು ಮಾತ್ರ ಇದೊಂದು ಆತ್ಮಹತ್ಯೆಯೆಂದು ಮೇಲ್ನೋಟಕ್ಕೆ ತಿಳಿದುಬಂದಿದ್ದು, ಕುಟುಂಬಸ್ಥರ ದೂರಿನ ಮೇರೆಗೆ ಅಗತ್ಯ ತನಿಖೆ ನಡೆಸಿ ಆರೋಪ ಸಾಬೀತಾದಲ್ಲಿ ಮಲ್ಲೇಶ್ ವಿರುದ್ಧ ಅಗತ್ಯ ಕಾನೂನು ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ.
ಪಲ್ಲವಿಯನ್ನು ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಈ ಸಂಬಂಧ ಹಿರಿಯೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.