ಚಿತ್ರದುರ್ಗ: ತೋಟದ ಮನೆಯಲ್ಲಿ ಕಲ್ಲಿನಿಂದ ಜಜ್ಜಿ ವ್ಯಕ್ತಿಯೊಬ್ಬರನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ಪಟ್ಟಣದ ಹೊರವಲಯದಲ್ಲಿ ನಡೆದಿದೆ.
ಹತ್ಯೆಯಾದ ವ್ಯಕ್ತಿಯನ್ನು 45 ವರ್ಷದ ಸರವಣ ಎಂದು ಗುರುತಿಸಲಾಗಿದೆ. ಸರವಣ ಲಕ್ಷ್ಮಮ್ಮ ಬಡಾವಣೆಯ ನಿವಾಸಿಯಾಗಿದ್ದು, ಹತ್ಯೆಗೆ ನಿಖರವಾದ ಕಾರಣ ತಿಳಿದು ಬಂದಿಲ್ಲ.
ವೃತ್ತಿಯಲ್ಲಿ ರೈತನಾಗಿರುವ ಸರವಣ ರಾತ್ರಿ ವೇಳೆ ಮಲಗಲು ತೋಟದ ಮನೆಗೆ ಹೋಗುತ್ತಿದ್ದರು. ದುಷ್ಕರ್ಮಿಗಳು ತಡರಾತ್ರಿ ತೋಟದ ಮನೆಗೆ ನುಗ್ಗಿ ಕಲ್ಲಿನಿಂದ ಜಜ್ಜಿ ಬರ್ಬರವಾಗಿ ಹತ್ಯೆ ಮಾಡಿ ಪರಾರಿಯಾಗಿದ್ದಾರೆ. ಈ ಸಂಬಂಧ ಹಿರಿಯೂರು ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.