ಚಿತ್ರದುರ್ಗ: ಮದಿಸಿದ ಆನೆಯ ಮದವನ್ನಡಗಿಸಿ ಮದಕರಿ ಎಂಬ ಖ್ಯಾತಿಗೊಳಿಸಿರುವ ಕೋಟೆನಾಡು ಚಿತ್ರದುರ್ಗದ ರಾಜವೀರ ಮದಕರಿ ನಾಯಕರ ವಂಶಸ್ಥ ರಾಜ ಓಬಣ್ಣ ನಾಯಕರ ಸ್ಮಾರಕವನ್ನು ಚಿತ್ರದುರ್ಗ ತಾಲ್ಲೂಕಿನ ಹಳಿಯೂರು ಬಳಿ ಧ್ವಂಸ ಮಾಡಿದ್ದ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ.
ತಾಲೂಕಿನ ಹಳಿಯೂರು ಬಳಿ ಇತ್ತೀಚೆಗೆ ಚಿತ್ರದುರ್ಗ ಮಾಜಿ ನಗರಸಭೆ ಉಪಾಧ್ಯಕ್ಷೆ ರುದ್ರಾಣಿ ಗಂಗಾಧರ ಅವರು ನಿಧಿ ಆಸೆ ಹಾಗೂ ಆಸ್ತಿ ಸಮತಟ್ಟು ಮಾಡುವ ತರಾತುರಿಯಲ್ಲಿ ಪಾಳೆಗಾರ ಓಬಣ್ಣ ನಾಯಕನ ಸಮಾಧಿಯನ್ನು ಧ್ವಂಸ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ಅವರ ವಿರುದ್ಧ ನಾಯಕ ಸಮುದಾಯ ಸಮರ ಸಾರಿದ್ದೂ, ವಾಲ್ಮಿಕಿ ಸಮುದಾಯದ ಸ್ವಾಮೀಜಿ ಕೂಡ ಅವರಿಗೆ ಶಿಕ್ಷೆ ವಿಧಿಸುವಂತೆ ಆಗ್ರಹಿಸಿದ್ದರು. ಇದನ್ನೂ ಓದಿ: ರೈತನ ಮನೆಯಲ್ಲಿ ಕಡೆಗೋಲು ಹಿಡಿದು ಮಜ್ಜಿಗೆ ತಯಾರಿಸಿದ ಬಿ.ಸಿ ಪಾಟೀಲ್
ಇದೀಗ ಅದರ ಬೆನ್ನಲ್ಲೇ ರುದ್ರಾಣಿ ಗಂಗಾಧರ್ ಅವರಿಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ರುದ್ರಾಣಿಯವರು ಖರೀಧಿಸಿದ್ದ ಜಮೀನಿನಲ್ಲಿದ್ದ ಸ್ಮಾರಕವನ್ನು ಧ್ವಂಸ ಮಾಡುವ ವೇಳೆ ನಾಗರಹಾವು ಪ್ರತ್ಯಕ್ಷವಾಗಿದ್ದು, ಸ್ಮಾರಕ ಧ್ವಂಸ ಮಾಡಲು ಅಡ್ಡಿ ಪಡಿಸಿದೆ. ಆದರೂ ರುದ್ರಾಣಿಯವರು ಹಾವು ಹಿಡಿಯುವವರನ್ನು ಕರೆಸಿ ಸಮಾಧಿಯೊಳಗಿದ್ದ ನಾಗರಹಾವನ್ನು ಹಿಡಿಸಿ ಬೇರೆಡೆಗೆ ಸ್ಥಳಾಂತರಿಸಿ ಸಮಾಧಿ ದ್ವಂಸ ಮಾಡಿದ್ದಾರೆಂಬ ಆರೋಪ ಕೇಳಿಬಂದಿದೆ. ಇದನ್ನೂ ಓದಿ: ಸಿದ್ದರಾಮಯ್ಯಗೆ ಮಾತಿನ ಮೇಲೆ ಹಿಡಿತ ಇಲ್ಲ: ವಿಶ್ವನಾಥ್ ಕಿಡಿ
ಸಮಾಧಿಯೊಳಗಿದ್ದ ನಾಗರಹಾವು ಹಿಡಿಯುವ ದೃಶ್ಯ ಮೊಬೈಲ್ನಲ್ಲಿ ಸೆರೆಯಾಗಿದ್ದು, ಆ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಸಮಾಧಿಯೊಳಗೆ ಸಿಕ್ಕಂತಹ ನಾಗರಹಾವನ್ನು ಸ್ನೇಕ್ ಚೇತನ್ ಅವರು ರಕ್ಷಿಸಿ ಕಾಡಿಗೆ ಬಿಟ್ಟಿದ್ದಾರೆಂದು ತಿಳಿದು ಬಂದಿದೆ.