ಚಿತ್ರದುರ್ಗ: ಓಬವ್ವ ಎಂದಾಕ್ಷಣ ಎಲ್ಲಿರಿಗೂ ನೆನಪಾಗೋದು ಐತಿಹಾಸಿಕ ಹಿನ್ನಲೆಯ ಐತಿಹಾಸಿಕ ಏಳು ಸುತ್ತಿನ ಕೋಟೆ. ಆದರೆ ಇತ್ತೀಚೆಗೆ ಇಲ್ಲಿ ನಿಧಿಗಳ್ಳರ ಹಾವಳಿ ಹೆಚ್ಚಾಗಿದ್ದು, ವಾಮಾಚಾರ ಕೂಡ ಮಾಡಲಾಗಿದೆ. ಹೀಗಾಗಿ ನಾಗರೀಕರು ಮತ್ತು ಪ್ರವಾಸಿಗರು ಕೋಟೆಗೆ ಬರಲು ಹಿಂದೇಟು ಹಾಕುತ್ತಿದ್ದಾರೆ.
ಚಿತ್ರದುರ್ಗದ ಕೋಟೆಯನ್ನು ಪಾಳೆಗಾರರು ಕಟ್ಟಿಸಿದ್ದು, ಶತ್ರುಪಾಳಯವಾದ ಹೈದರಾಲಿ ಸೈನ್ಯವು ಯುದ್ಧಕ್ಕೆ ಬಂದಾಗ ಅವರಿಂದ ಬೆಲೆಬಾಳುವ ಬಂಗಾರ, ಮುತ್ತುರತ್ನ ಹಾಗೂ ಹಣವನ್ನು ಸಂರಕ್ಷಿಸಲು ಕೋಟೆಯಲ್ಲಿ ಎಲ್ಲೆಂದರಲ್ಲಿ ನೆಲದೊಳಗೆ ಬಚ್ಚಿಟ್ಟಿದ್ದಾರೆ ಎಂಬ ಮಾತಿನ ಮೇರೆಗೆ ಕಿಡಿಗೇಡಿ ಇಂತಹ ಕೃತ್ಯಕ್ಕೆ ಮುಂದಾಗಿದ್ದಾರೆ. ಕೋಟೆಯ ಮೇಳೆ ಕಣ್ಣಿಟ್ಟಿರುವ ಕಿಡಿಗೇಡಿಗಳು, ನಿಧಿಗಳ್ಳರು ಅಕ್ರಮವಾಗಿ ಕೋಟೆಯಲ್ಲಿ ವಾಮಾಚಾರ ನಡೆಸಿ ನಿಧಿಗಾಗಿ ಶೋಧ ನಡೆಸುತ್ತಿದ್ದಾರೆ.
ಕೋಟೆಯೊಳಗಿನ ಅರಮನೆ ಮೈದಾನದಲ್ಲಿ ಹಾಗೂ ಸಂಪಿಗೆ ಸಿದ್ದೇಶ್ವರ ಸ್ವಾಮಿ ದೇಗುಲದ ಹಿಂಭಾಗದಲ್ಲಿ ಕಳೆದ ಒಂದು ವಾರದಿಂದ ನಿಧಿಗಳ್ಳರು ನಿಧಿ ಶೋಧ ನಡೆಸುತ್ತಿದ್ದಾರೆ. ಇಂತಹ ಕೃತ್ಯಗಳಿಗೆ ಬ್ರೇಕ್ ಹಾಕಬೇಕಾದ ಪುರಾತತ್ವ ಇಲಾಖೆ ಅಧಿಕಾರಿಗಳು ಮಾತ್ರ ಕಣ್ಮುಚ್ಚಿ ಕುಳಿತ್ತಿದ್ದು, ನಾಗರೀಕರಿಕರು ಹಿಡಿಶಾಪ ಹಾಕುತ್ತಿದ್ದಾರೆ.
ಐತಿಹಾಸಿಕ ಕೋಟೆಯಲ್ಲಿ ಹಲವು ಬಾರಿ ಪ್ರವಾಸಿಗರ ಮೇಲೆ ಹಲ್ಲೆ ಹಾಗೂ ದೌರ್ಜನ್ಯ ಪ್ರಕರಣಗಳು ಸಹ ನಡೆದಿದೆ. ಇಂತಹ ಪ್ರಕರಣಗಳು ಸ್ಥಳೀಯ ನಾಗರೀಕರ ನೇತೃತ್ವದಲ್ಲಿ ಸುಖಾಂತ್ಯಗೊಂಡಿವೆ. ಆದರೆ ಪುರಾತತ್ವ ಇಲಾಖೆ ಅಧೀನದಲ್ಲಿರುವ ಕೋಟೆಯಲ್ಲಿ ನಿಧಿಗಳ್ಳರ ಹಾವಳಿ ವಿಪರೀತವಾಗಿದೆ. ಆದರೂ ಪುರಾತತ್ವ ಇಲಾಖೆ ಅಧಿಕಾರಿಗಳು ಮಾತ್ರ ಯಾವುದೇ ಕ್ರಮಕೈಗೊಳ್ಳುತ್ತಿಲ್ಲ. ಕೋಟೆಯಲ್ಲಿ ಸಿಸಿಟಿವಿ ಅಳವಡಿಸುವ ಮೂಲಕ ಈ ನಿಧಿಗಳ್ಳರ ಹಾವಳಿಗೆ ಬ್ರೇಕ್ ಹಾಕುವ ಮೂಲಕ ಸಾರ್ವಜನಿಕ ಹಿತ ಕಾಪಾಡಬೇಕೆಂಬುದು ನಾಗರೀಕರ ಆಶಯವಾಗಿದೆ.