ಚಿತ್ರದುರ್ಗ: ಸತತ ಪರಿಶ್ರಮವಿದ್ದರೆ ಫಲ ತನ್ನಷ್ಟಕ್ಕೆ ತಾನು ಬರಲಿದೆ ಎಂಬ ಮಾತಿದೆ. ಹಾಗೆಯೇ ಕಾಲೇಜು ಹಂತದಿಂದಲೇ ಸಂಘ ಪರಿವಾರದೊಂದಿಗೆ ಗುರುತಿಸಿಕೊಂಡು ಬಳಿಕ ಬಿಜೆಪಿ ಸೇರಿದ್ದ ಸಾಮಾನ್ಯ ಕಾರ್ಯಕರ್ತ ಮುರುಳಿಯವರು ಬಿಜೆಪಿಯ ಚಿತ್ರದುರ್ಗ ಘಟಕದ ಜಿಲ್ಲಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ಸುಮಾರು ಇಪ್ಪತ್ತು ವರ್ಷಗಳ ಕಾಲ ಎಬಿವಿಪಿ ಸಂಘಟನೆಯಲ್ಲಿ ಹೋರಾಟ ಮಾಡಿಕೊಂಡು ಬಂದಿದ್ದ ಮುರುಳಿಯವರು ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲೂಕು ಆಲಮರದಹಟ್ಟಿ ಗ್ರಾಮದವರು. ಕಡು ಬಡ ಕುಟುಂಬದಲ್ಲಿ ಜನಿಸಿ, ಚಿಕ್ಕಂದಿನಿಂದಲೂ ನಾಯಕತ್ವದ ಗುಣಗಳನ್ನು ಬೆಳೆಸಿಕೊಂಡು ಬಂದಿದ್ದರು
ಚಿತ್ರದುರ್ಗ ಜಿಲ್ಲೆಯ ಹಿರಿಯೂರು ವಿಧಾನಸಭಾ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪನ್ನು ಮೂಡಿಸಿಕೊಂಡಿರುವ ಮುರುಳಿಯವರು, ಕಳೆದ ನಾಲ್ಕು ವರ್ಷಗಳಿಂದ ಬಿಜೆಪಿ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿಯ ಜವಾಬ್ದಾರಿ ನಿರ್ವಹಿಸುತ್ತಿದ್ದರು. ಹಿರಿಯೂರು ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿದ್ದ ಪೂರ್ಣಿಮಾ ಶ್ರೀನಿವಾಸ್ ಗೆಲ್ಲಲು ಶ್ರಮಿಸಿದ್ದರು.
ಕಳೆದ ಮೂರು ತಿಂಗಳುಗಳಿಂದ ಆರಂಭವಾಗಿದ್ದ ಜಿಲ್ಲಾಧ್ಯಕ್ಷರ ಆಯ್ಕೆ ಪ್ರಕ್ರಿಯೆಯಲ್ಲಿ ಸುಮಾರು ಐದು ಜನ ಆಕಾಂಕ್ಷಿಗಳು ಕಣದಲ್ಲಿದ್ದರು. ಅವರವರ ಶಕ್ತಿಯನುಸಾರ ರಾಜ್ಯ ನಾಯಕರುಗಳ ಬಳಿ ದುಂಬಾಲು ಬಿದ್ದಿದ್ದವರಲ್ಲಿ ಬಿಎಸ್ವೈ ಬಣದಿಂದ ಲಿಂಗಮೂರ್ತಿ, ಈಶ್ವರಪ್ಪ ಬಣದಿಂದ ಸಿದ್ದೇಶ್ ಯಾದವ್ ಹಾಗೂ ಜಿಲ್ಲಾ ಮುಖಂಡರ ಬೆಂಬಲದಿಂದ ಬದರಿನಾಥ್ ಮತ್ತು ಮಲ್ಲಿಕಾರ್ಜುನ್ ತೀವ್ರ ಪ್ರಯತ್ನ ನಡೆಸಿದ್ದರು.
ಜಿಲ್ಲಾ ಘಟಕದ ಶಿಫಾರಸು ಹಾಗೂ ರಾಜ್ಯ ನಾಯಕರುಗಳ ಅಭಿಪ್ರಾಯದ ಮೇರೆಗೆ ಕಳೆದ ಬಾರಿ ಲಿಂಗಾಯತ ಸಮುದಾಯದ ನವೀನ್ ಅಧ್ಯಕ್ಷರಾಗಿದ್ದರು. ಈ ಬಾರಿಯೂ ಮತ್ತೆ ಲಿಂಗಾಯತ ಸಮುದಾಯದವರೇ ಮೂರು ಜನ ಕಣದಲ್ಲಿದ್ದ ಪರಿಣಾಮ ಪಕ್ಷದ ನಿಷ್ಠಾವಂತ ಕಾರ್ಯಕರ್ತ, ಹಾಲಿ ಪ್ರದಾನ ಕಾರ್ಯದರ್ಶಿಯಾಗಿದ್ದ ಗೊಲ್ಲಸಮುದಾಯದ ಮುರುಳಿ ನೂತನ ಜಿಲ್ಲಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.