ಚಿತ್ರದುರ್ಗ: ಅದೊಂದು ಬರದನಾಡಿನ ಪಕ್ಷಿಧಾಮ. ಅಲ್ಲಿಗೆ ಪ್ರತಿವರ್ಷ ವಿದೇಶಿ ಹಕ್ಕಿಗಳು ವಲಸೆ ಬರುತ್ತವೆಂಬ ಹೆಗ್ಗಳಿಕೆ ಗಳಿಸಿದ್ದ ಚಿತ್ರದುರ್ಗ ತಾಲೂಕಿನ ಮಲ್ಲಾಪುರದ ಕೆರೆಯಂಗಳದ ಪಕ್ಷಿಧಾಮ ಈ ಬಾರಿ ಖಾಲಿಖಾಲಿಯಾಗಿದೆ.
ಬೆಳ್ಳಂಬೆಳಗ್ಗೆ ಚಿಲಿಪಿಲಿ ಎನ್ನುತ್ತಿದ್ದ ವಿದೇಶಿ ಹಕ್ಕಿಗಳ ಕಲರವ ನಾಪತ್ತೆಯಾಗಿದೆ. ಈ ಕೆರೆಗೆ ಚಿತ್ರದುರ್ಗ ನಗರದ ಯೂಜಿಡಿನೀರು ಹರಿದು ಬರುವ ಮೂಲಕ ಪ್ಲಾಸ್ಟಿಕ್ ತ್ಯಾಜ್ಯ ಕೆರೆಯಲ್ಲಿ ಭರ್ತಿಯಾಗಿದೆ. ಹೀಗಾಗಿ ದುರ್ನಾಥ ಬೀರುತ್ತಿರುವ ಕೆರೆ ಸಂಪೂರ್ಣ ಮಲೀನವಾಗಿ ನೀರು ಹಚ್ಚ ಹಸುರಾಗಿದೆ. ಇದರಿಂದಾಗಿ ಈ ವರ್ಷ ಪಕ್ಷಿಗಳ ಸದ್ದಿಲ್ಲದೇ ಆಕರ್ಷಕ ಪಕ್ಷಿಧಾಮ ಬಿಕೋ ಎನ್ನುತ್ತಿದೆ.
ಪ್ರತಿವರ್ಷ ವಿವಿಧೆಡೆಯಿಂದ ವಿದೇಶಿ ಹಕ್ಕಿಗಳು ವಲಸೆ ಬರುತ್ತಿದ್ದವು. ಇಲ್ಲಿನ ನೈಸರ್ಗಿಕ ಸೊಬಗನ್ನು ಹೆಚ್ಚಿಸುತಿದ್ದವು. ಹೀಗಾಗಿ ಈ ದೃಶ್ಯವನ್ನು ಸವಿಯಲು ಪ್ರವಾಸಿಗರು ಧಾವಿಸುತ್ತಿದ್ದರು. ಅಲ್ಲದೆ ಇಲ್ಲಿನ ನಾಗರೀಕರು ಸಹ ವಾಯುವಿಹಾರಕ್ಕೆ ಬರುತ್ತಿದ್ದರು. ಆದರೆ ಈ ಬಾರಿ ಒಂದು ಪಕ್ಷಿಯ ಸಹ ಕೆರೆಯತ್ತ ಸುಳಿದಿಲ್ಲ ಅಂತ ಪಕ್ಷಿ ಪ್ರಿಯರಾದ ಬಸವರಾಜ್ ಕಿಡಿಕಾರಿದ್ದಾರೆ. ಇದನ್ನೂ ಓದಿ: ಘಮ ಘಮಿಸುವ ಚಿಕನ್ ಮಸಾಲ ಮಾಡುವ ವಿಧಾನ
ಈ ಕೆರೆ ತುಂಬಿದಾಗ ಜಮೀನುಗಳಿಗೆ ನುಗ್ಗುವ ನೀರಿನಿಂದಾಗಿ ಬರದನಾಡಿನ ರೈತರ ಬೆಳೆಗಳು ಸಹ ನಾಶವಾಗ್ತಿವೆ. ಹೀಗಾಗಿ ಯೂಜಿಡಿ ನೀರನ್ನು ಶುದ್ಧೀಕರಿಸಿ ಕೆರೆಗೆ ಬಿಡುವಂತೆ ಅಧಿಕಾರಿಗಳಿಗೆ ಮನವಿ ಮಾಡಲಾಗಿದೆ. ಆದರೆ ಯಾವುದೇ ಪ್ರಯೋಜನವಾಗಿಲ್ಲ ಅಂತ ಇಲ್ಲಿನ ರೈತ ಹೊರಕೇರಪ್ಪ ನಗರಸಭೆ ಅಧಿಕಾರಿಗಳ ನಿರ್ಲಕ್ಷ್ಯದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಆಕರ್ಷಕ ನೈಸರ್ಗಿಕ ಪಕ್ಷಿಧಾಮ ಉಳಿಸಬೇಕು. ಮುಂದಿನ ಪೀಳಿಗೆಗೆ ಈ ಸೊಬಗನ್ನು ವೀಕ್ಷಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು. ಆದರೆ ಬರದನಾಡಲ್ಲಿ ಸ್ವಯಂ ನಿರ್ಮಾಣವಾದ ನೈಸರ್ಗಿಕ ಪಕ್ಷಿಧಾಮ ವಿನಾಶದ ಅಂಚಿಗೆ ತಲುಪಿರೋದು ಬೇಸರಮೂಡಿಸಿದೆ ಎಂದು ಅಸಮಧಾನ ಹೊರಹಾಕಿದ್ದಾರೆ.