– ಕಾಲ್ತುಳಿತದಲ್ಲಿ ನರಕಯಾತನೆಯ ಅನುಭವ ಬಿಚ್ಚಿಟ್ಟ ಪ್ರಶಾಂತ್
ಬೆಂಗಳೂರು: ಕಾಲ್ತುಳಿತದ (Chinnaswamy Stampede) ವೇಳೆ ಕತ್ತು, ಬೆನ್ನು ತುಳಿದುಕೊಂಡು ಹೋಗುತ್ತಿದ್ದರು. ಉಸಿರಾಡೋಕೆ ತುಂಬಾ ಕಷ್ಟ ಆಗ್ತಿತ್ತು ಎಂದು ಗಾಯಾಳು ಪ್ರಶಾಂತ್ ತಮ್ಮ ನೋವನ್ನು ಬಿಚ್ಚಿಟ್ಟಿದ್ದಾರೆ.
`ಪಬ್ಲಿಕ್ ಟಿವಿ’ (PUBLiC TV) ಜೊತೆ ಮಾತನಾಡಿದ ಅವರು, ನಾನು ನನ್ನ ತಾಯಿ ಜೊತೆ ಕೋರ್ಟ್ ಕೆಲಸಕ್ಕೆಂದು ಹೋಗಿದ್ದೆ, ಆ ವೇಳೆ ಅಲ್ಲಿ ತುಂಬಾ ಜನ ಸೇರಿದ್ದರು. ಹೀಗಾಗಿ ನಾನು ನನ್ನ ತಾಯಿಯನ್ನು ಮನೆಗೆ ಕಳುಹಿಸಿದೆ. ಜನರ ಸಂಖ್ಯೆ ಹೆಚ್ಚಾಗುತ್ತಲೇ ಇತ್ತು, ನಾನಿರುವ ಜಾಗದಲ್ಲಿಯೇ ಇಬ್ಬರು ಸಾವನ್ನಪ್ಪಿದರು. ನಾನು ನಮ್ಮ ಮನೆಯವರಿಗೆ ಕಾಲ್ ಮಾಡಿ, ನಂಗೆ ಬರೋಕೆ ಆಗಲ್ಲ ಕ್ಷಮಿಸಿ ಬಿಡಿ ಎಂದು ಹೇಳಿದೆ.ಇದನ್ನೂ ಓದಿ: ಜೈಲಾಧಿಕಾರಿಗಳ ಜೊತೆ ಕಿರಿಕ್ – ಹರ್ಷ ಕೊಲೆ ಆರೋಪಿಗಳಿಗೆ ಜೈಲಿನಲ್ಲಿ ಕ್ಲಾಸ್
ನಾನು ಕೆಳಗೆ ಬಿದ್ದಾಗ ನನ್ನನ್ನು ತುಳಿದುಕೊಂಡು ಹೋಗುತ್ತಿದ್ದರು. ನಾನು ಎಷ್ಟೇ ಒದ್ದಾಡುತ್ತಿದ್ದರೂ ಯಾರೂ ಸಹಾಯಕ್ಕೆ ಬರಲಿಲ್ಲ. ಕತ್ತು, ಬೆನ್ನು ತುಳಿದುಕೊಂಡು ಹೋಗುತ್ತಿದ್ದರು. ಆಕ್ಸಿಜನ್ ಕೂಡ ಸಿಗುತ್ತಿರಲಿಲ್ಲ. ಉಸಿರಾಡೋಕೆ ತುಂಬಾ ಕಷ್ಟ ಆಗುತ್ತಿತ್ತು. ಎಲ್ಲರೂ ತುಳಿದುಕೊಂಡು ಹೋಗುತ್ತಿರುವಾಗ ಓರ್ವ ವ್ಯಕ್ತಿ ಬಂದು ನನ್ನನ್ನು ಖಾಲಿ ಜಾಗಕ್ಕೆ ಬಿಟ್ಟರು. ಆಗ ಸ್ವಲ್ಪ ಉಸಿರಾಡೋಕೆ ಆಯ್ತು. ಆದರೆ ಅಲ್ಲಿಂದ ಆಸ್ಪತ್ರೆಗೆ ಕರೆದುಕೊಂಡು ಹೋಗಲು ಯಾರೂ ಬರಲಿಲ್ಲ. ಬಳಿಕ ನಮ್ಮ ಮನೆಯವರೇ ನನ್ನನ್ನು ಹುಡುಕಿಕೊಂಡು ಬಂದು ಪೊಲೀಸರಿಗೆ ಮಾಹಿತಿ ನೀಡಿದರು. ಆಗ ನನ್ನನ್ನ ಬೌರಿಂಗ್ ಆಸ್ಪತ್ರೆಗೆ (Bowring Hospital) ದಾಖಲಿಸಿದರು. ಅಲ್ಲಿ ಸರಿಯಾಗಿ ಚಿಕಿತ್ಸೆ ಸಿಗಲಿಲ್ಲ. ಇವರೆಗೂ ಯಾರೂ ನನ್ನ ಸಹಾಯಕ್ಕೆ ಬರಲಿಲ್ಲ ಎಂದು ತಮ್ಮ ಕರಾಳ ಅನುಭವ ಹಂಚಿಕೊಂಡರು.
ಕಾಲ್ತುಳಿತದ ವೇಳೆ ನಿಧಿ ಎಂಬ ಯುವತಿಯ ಮೇಲೆ ಬ್ಯಾರಿಕೇಡ್ ಬಿದ್ದಿತ್ತು. ಆದರೂ ಕೂಡ ಜನರು ಬ್ಯಾರಿಕೇಡ್ನ್ನು ತುಳಿದುಕೊಂಡು ಓಡಾಡುತ್ತಿದ್ದರು. ಯುವತಿ ಎಡಗೈ ಮತ್ತು ಎಡಗಾಲಿಗೆ ಗಾಯವಾಗಿದ್ದು, ರಕ್ತಸ್ರಾವವಾಗಿದೆ. ಸದ್ಯ ಟ್ರೀಟ್ಮೆಂಟ್ ಪಡೆದು ಡಿಸ್ಚಾರ್ಜ್ ಆಗಿದ್ದು, ಚೇತರಿಸಿಕೊಳ್ಳುತ್ತಿದ್ದಾರೆ.ಇದನ್ನೂ ಓದಿ: ಗೋವಿಂದರಾಜ್ ಎಸಗಿದ ತಪ್ಪನ್ನು ಜನರ ಮುಂದೆ ಹೇಳಿ – ಗಾಢ ಮೌನಕ್ಕೆ ಜಾರಿದ್ದು ಯಾಕೆ: ಸಿಎಂಗೆ ಸುನಿಲ್ ಕುಮಾರ್ ಪ್ರಶ್ನೆ
ಏನಿದು ಪ್ರಕರಣ?
ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challengers Bengaluru) 18 ವರ್ಷಗಳ ಬಳಿಕ ಐಪಿಎಲ್ (IPL) ಚಾಂಪಿಯನ್ ಪಟ್ಟವನ್ನೇನೋ ಅಲಂಕರಿಸಿದೆ. ಪಂಜಾಬ್ (PBKS) ವಿರುದ್ಧ ಬೆಂಗಳೂರು 6 ರನ್ಗಳ ಭರ್ಜರಿ ಜಯ ಸಾಧಿಸ್ತಿದ್ದಂತೆಯೇ ಸಿಲಿಕಾನ್ ಸಿಟಿಯಲ್ಲಿ ಮಂಗಳವಾರ (ಜೂ.3) ರಾತ್ರಿಯೇ ದೀಪಾವಳಿಯಂತಹ ಸಂಭ್ರಮ ಇತ್ತು. ಬುಧವಾರ (ಜೂ.4) ಇಡೀ ದಿನ ಹೆಚ್ಎಎಲ್ ಏರ್ಪೋರ್ಟ್ ರೋಡ್, ತಾಜ್ ವೆಸ್ಟ್ ಎಂಡ್ ಹೊಟೇಲ್ ರೋಡ್, ವಿಧಾನಸೌಧ, ಚಿನ್ನಸ್ವಾಮಿ ಸ್ಟೇಡಿಯಂ ರಸ್ತೆ ಸುತ್ತ ಮುತ್ತ ರೆಡ್ ಆರ್ಮಿ ಎಲ್ಲಾ ಕಡೆ ಆರ್ಸಿಬಿ ತಂಡಕ್ಕೆ ತಮ್ಮ ಅಭಿಮಾನ ತೋರಿದರು.
ಅದೇ ದಿನ ದಿಢೀರನೇ ಆರ್ಸಿಬಿ (RCB) ವಿಜಯೋತ್ಸವ ಕಾರ್ಯಕ್ರಮವನ್ನು ಆಯೋಜಿಸಿತ್ತು. ಉಚಿತ ಪ್ರವೇಶ ಆಗಿದ್ದರಿಂದ ಕ್ರೀಡಾಂಗಣಕ್ಕೆ ಅಭಿಮಾನಿ ಸಾಗರವೇ ಹರಿದುಬಂದಿತ್ತು. ಗೇಟ್ ನಂಬರ್ 18, 19, 20ರ ಬಳಿ ಅಭಿಮಾನಿಗಳನ್ನು ತಡೆಯಲು ಪೊಲೀಸರು ಹೈರಾಣಾಗಿ ಹೋಗಿದ್ದರು. ಒಂದು ಹಂತದಲ್ಲಿ ಲಾಠಿಯನ್ನೂ ಬೀಸಿದರು. ಕ್ಷಣ ಕ್ಷಣಕ್ಕೂ ಆರ್ಸಿಬಿ ಅಭಿಮಾನಿಗಳ ಸಂಖ್ಯೆ ಹೆಚ್ಚುತ್ತಲೇ ಇತ್ತು. ಆದರೆ, ಗೇಟ್ ನಂ.12ರ ಬಳಿ ಗೇಟ್ ತೆಗೆಯುತ್ತಿದ್ದಂತೆಯೇ ಭಾರೀ ಪ್ರಮಾಣದಲ್ಲಿ ನೂಕು ನುಗ್ಗಲು ಉಂಟಾಯಿತು. ಒಬ್ಬರ ಮೇಲೋಬ್ಬರು ಬಿದ್ದು, ಉಸಿರಾಟದ ಸಮಸ್ಯೆ ಉಂಟಾಗಿ ಒಟ್ಟು 11 ಜನ ಸಾವನ್ನಪ್ಪಿದ್ದರು.ಇದನ್ನೂ ಓದಿ: ನಾಳೆ ರಾಯಚೂರಿನಲ್ಲಿ ನಡೆಯಬೇಕಿದ್ದ ಸಿಎಂ ಕಾರ್ಯಕ್ರಮ ದಿಢೀರ್ ರದ್ದು