ಕಲಬುರಗಿ: ಜಿಲ್ಲೆಯ ಚಿಂಚೋಳಿ ಕ್ಷೇತ್ರದಲ್ಲಿ ಗೆಲ್ಲುವ ಪಕ್ಷವೇ ರಾಜ್ಯದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದಿದೆ. ದುರಂತ ಅಂದ್ರೆ ಹೀಗೆ ಆಯ್ಕೆಯಾದ ಬಹುತೇಕ ಶಾಸಕರು ಅದೇ ಪಕ್ಷದ ವಿರುದ್ಧ ಬಂಡಾಯ ಸಾರಿ ಸಿಕ್ಕ ಹುದ್ದೆ ಕಳೆದುಕೊಂಡಿದ್ದಾರೆ. ಚಿಂಚೋಳಿ ವಿಧಾನಸಭಾ ಕ್ಷೇತ್ರ ಅಂದ್ರೆ ಸಾಕು ರಾಜಕೀಯವಾಗಿ ಅದೃಷ್ಟದ ಕ್ಷೇತ್ರ ಅಂತಲೇ ಪ್ರಖ್ಯಾತಿ. ಯಾಕಂದ್ರೆ 1983ರ ಅವಧಿ ಹೊರತುಪಡಿಸಿ ಈ ಕ್ಷೇತ್ರದಲ್ಲಿ ಯಾವ ಪಕ್ಷ ಗೆಲ್ಲುತ್ತೋ ಅದೇ ಪಕ್ಷ ರಾಜ್ಯದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದಿದೆ. ಅಲ್ಲದೆ ಚಿಂಚೋಳಿಯಿಂದ ಆಯ್ಕೆಯಾದ ಶಾಸಕರು ಒಂದಿಲ್ಲೊಂದು ರೀತಿಯ ಉನ್ನತ ಹುದ್ದೆಯಲ್ಲಿರುತ್ತಾರೆ.
ಚಿಂಚೋಳಿ ಕ್ಷೇತ್ರ ಅದೃಷ್ಟಕ್ಕೆ ಎಷ್ಟು ಹೆಸರುವಾಸಿಯೂ ಅಷ್ಟೇ ದುರಾದೃಷ್ಟಕ್ಕೂ ಹೆಸರುವಾಸಿಯಾಗಿದೆ. ಯಾಕಂದ್ರೆ ಇಲ್ಲಿ ಗೆದ್ದ ಪಕ್ಷ ಗದ್ದುಗೆ ಏರಿದ್ರೂ ಪಕ್ಷದಿಂದ ಆಯ್ಕೆಯಾದವರು ಪಕ್ಷದ ವಿರುದ್ಧವೇ ತಿರುಗಿ ಬೀಳುತ್ತಾರೆ. ಇದಕ್ಕೆ ಪೂರಕವೆಂಬಂತೆ ದಿವಗಂತ ವೀರೇಂದ್ರ ಪಾಟೀಲ್ ಸಿಎಂ ಸ್ಥಾನ ಕಳೆದುಕೊಂಡಿದ್ದರು. ನಂತರದ ದಿನಗಳಲ್ಲಿ ಸಚಿವರಾಗಿದ್ದ ಘಾಳೆಪ್ಪ ಹಲವು ಆಪಾದನೆಗಳನ್ನು ಹೊತ್ತು ರಾಜೀನಾಮೆ ನೀಡಿದ್ದರು. ನಂತರ ಬಂದ ವೈಜನಾಥ ಪಾಟೀಲ್ ಹೈದರಾಬಾದ್ ಕರ್ನಾಟಕ ಭಾಗಕ್ಕೆ 371 ವಿಶೇಷ ಸ್ಥಾನಮಾನ ಸಿಗಲಿಲ್ಲ ಎಂದು ರಾಜೀನಾಮೆ ನೀಡಿದರು. ಬಳಿಕ ಸಚಿವ ಸ್ಥಾನ ಪಡೆದು ಸುನೀಲ್ ವಲ್ಯಾಪುರ ಬಿಜೆಪಿ-ಕೆಜೆಪಿ ಜಗಳದಲ್ಲಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಹೀಗೆ ಹಲವಾರು ಉದಾಹರಣೆಗಳಿವೆ. ಇದೀಗ ಅದೇ ಸಾಲಿನಲ್ಲಿ ಚಿಂಚೋಳಿ ಕಾಂಗ್ರೆಸ್ನ ಅತೃಪ್ತ ಶಾಸಕ ಉಮೇಶ್ ಜಾಧವ್ ಸೇರಿದ್ದಾರೆ.
ರಾಜ್ಯದ ಚುಕ್ಕಾಣಿ ಹಿಡಿಯಲು ಲಕ್ಕಿ ಕ್ಷೇತ್ರವಾದ ಚಿಂಚೋಳಿ ಇಲ್ಲಿನ ಶಾಸಕರಿಗೆ ಮಾತ್ರ ಅದೃಷ್ಟ ತಂದುಕೊಟ್ಟಿಲ್ಲ. ಶಾಸಕ ಜಾಧವ್ ಇದೀಗ ಬಂಡಾಯ ನಾಯಕರ ಪಟ್ಟಿಯಲ್ಲಿದ್ದು ಅವರ ನಡೆ ಏನು ಎಂಬುದು ರಾಜ್ಯ ರಾಜಕೀಯದಲ್ಲಿ ತೀವ್ರ ಕೂತೂಹಲ ಸೃಷ್ಟಿಸಿದೆ. ಈಗಾಗಲೇ ಕಾಂಗ್ರೆಸ್ ಅತೃಪ್ತ ಶಾಸಕರನ್ನು ಅನರ್ಹಗೊಳಿಸಬೇಕೆಂದು ಸ್ಪೀಕರ್ ರಮೇಶ್ ಕುಮಾರ್ ಅವರಿಗೆ ಸೋಮವಾರ ಮನವಿ ಸಲ್ಲಿಸಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv