– ಚೀನಾದಲ್ಲಿ ಮೆಡಿಕಲ್ ಓದುತ್ತಿರುವ ತುಮಕೂರಿನ ಯುವಕ
ತುಮಕೂರು: ಚೀನಾದಿಂದ ಭಾರತಕ್ಕೆ ಬಂದು ರೋಗ ಹರಡುಲು ನನಗೆ ಇಷ್ಟವಿಲ್ಲ. ನಾನು ಇಲ್ಲೇ ಇರುತ್ತೇನೆ ಎಂದು ತುಮಕೂರಿನ ಯುವಕನೋರ್ವ ಕಾಳಜಿ ಮೆರೆದಿದ್ದಾರೆ.
ತುಮಕೂರಿನ ಶಿಕ್ಷಕ ಹೊಸಕೆರೆ ರಿಜ್ವಾನ್ ಭಾಷಾ ಅವರ ಕಿರಿಯ ಪುತ್ರ ಸಾಹಿಲ್ ಹುಸೇನ್ ಕಳೆದ ಮೂರು ವರ್ಷಗಳಿಂದ ಚೀನಾದ ವಾನ್ಲಿ ಜಿಲ್ಲೆಯಲ್ಲಿ ಉಳಿದುಕೊಂಡಿದ್ದಾರೆ. ಅಲ್ಲಿನ ನಾಚಂಗ್ ಸಿಟಿಯ ‘ಜಿಯಾಂಗ್ಸಿ ಯೂನಿವರ್ಸಿಟಿ ಆಫ್ ಟ್ರಡಿಷನಲ್ ಅಂಡ್ ಚೈನೀಸ್ ಮೆಡಿಸಿನ್ಸ್’ ವಿಶ್ವವಿದ್ಯಾಲಯದಲ್ಲಿ ಸಾಹಿಲ್ 3ನೇ ವರ್ಷದ ಎಂಬಿಬಿಎಸ್ ಕಲಿಯುತ್ತಿದ್ದಾರೆ. ಇದನ್ನೂ ಓದಿ: ಕೊರೊನಾ ವೈರಸ್ಗೆ ದೇಶದಲ್ಲಿ ಎರಡನೇ ಬಲಿ
ಕೊರೊನಾ ವೈರಸ್ ಭೀತಿಯಿಂದಾಗಿ ಅವರು ಓದುತ್ತಿರುವ ವಿಶ್ವವಿದ್ಯಾನಿಲಯದ ಎಲ್ಲಾ 1,000ಕ್ಕೂ ಅಧಿಕ ವಿದ್ಯಾರ್ಥಿಗಳು ವಿವಿ ತ್ಯಜಿಸಿದ್ದು, ತಮ್ಮ ತಮ್ಮ ದೇಶಗಳಿಗೆ ಹಿಂತಿರುಗಿದ್ದಾರೆ. ಸ್ಥಳೀಯ ಕೇವಲ ಐವತ್ತು ವಿದ್ಯಾರ್ಥಿಗಳು ಹಾಗೂ ವಿವಿ ಸಿಬ್ಬಂದಿ ಮಾತ್ರ ಅಲ್ಲಿ ಉಳಿದುಕೊಂಡಿದ್ದು, ವಿವಿ ಶೇ.90ರಷ್ಟು ಖಾಲಿಯಾಗಿದೆ. ಆದರೆ ಭಾರತದ ಸಾಹಿಲ್ ಹುಸೇನ್ ಮಾತ್ರ ಸ್ವದೇಶಕ್ಕೆ ಮರಳಲು ನಿರಾಕರಿಸಿ, ಕೊರೊನಾಗೆ ಸೆಡ್ಡು ಹೊಡೆದು ವಿವಿಯಲ್ಲೇ ವಾಸ್ತವ್ಯ ಮುಂದುವರಿಸಿದ್ದಾರೆ. ಇದನ್ನೂ ಓದಿ: ಸಿದ್ದಗಂಗಾ ಮಠದ ಮೇಲೂ ಕೊರೊನಾ ಎಫೆಕ್ಟ್- ಶಿವಕುಮಾರ ಶ್ರೀಗಳ ಜಯಂತಿ ರದ್ದು
ಭಾರತಕ್ಕೆ ಬರಲ್ಲ ಎಂದ ಪುತ್ರ:
ಚೀನಾದಲ್ಲಿ ಕೊರೊನಾ ವೈರಸ್ ಹರಡುತ್ತಿದ್ದಂತೆ ಪುತ್ರನಿಗೆ ಕರೆ ಮಾಡಿದ ತಂದೆ ರಿಜ್ವಾನ್ ಭಾಷಾ, ತಕ್ಷಣವೇ ಭಾರತಕ್ಕೆ ಮರಳುವಂತೆ ತಿಳಿಸಿದ್ದರು. ತಂದೆಯ ಆಹ್ವಾನವನ್ನು ನಯವಾಗಿ ನಿರಾಕರಿಸಿದ ಪುತ್ರ ಸಾಹಿಲ್ ಹುಸೇನ್, ‘ಸದ್ಯಕ್ಕೆ ನಾನಿಲ್ಲಿ ಕ್ಷೇಮವಾಗಿದ್ದೇನೆ. ನಾನು ಭಾರತಕ್ಕೆ ಪ್ರಯಾಣಿಸುವ ವೇಳೆಯೇ ಕೊರೊನಾ ವೈರಸ್ ತಗುಲಿ, ಅದು ತನ್ನ ಮೂಲಕ ಭಾರತವನ್ನು ಪ್ರವೇಶಿಸಬಹುದು. ಇದರಿಂದ ಕ್ಷೇಮವಾಗಿರುವ ಭಾರತದಲ್ಲಿ ಅದರಲ್ಲೂ ಕರ್ನಾಟಕದಲ್ಲಿ ವೈರಸ್ ಹರಡುವ ಸಾಧ್ಯತೆಗಳಿರುತ್ತವೆ. ಹೀಗಾಗಿ ನಾನು ಚೀನಾದಲ್ಲೇ ಉಳಿಯುತ್ತೇನೆ. ನನ್ನಿಂದಾಗಿ ನನ್ನ ದೇಶದ ಜನರು ಅಪಾಯ ಎದುರಿಸುವುದು ಬೇಡ’ ಎಂದು ತಿಳಿಸಿದ್ದಾರೆ.
ಭಾರತಕ್ಕೆ ಮರಳುವಂತೆ ಪೋಷಕರು ಹಾಗೂ ಸ್ನೇಹಿತರಿಂದ ಒತ್ತಾಯ ಹೆಚ್ಚಾದ ಬಳಿಕ ಸಾಹಿಲ್ ಹುಸೇನ್, 14 ನಿಮಿಷಗಳ ವಿಡಿಯೋ ಮಾಡಿ ಕಳುಹಿಸುವ ಮೂಲಕ ತನ್ನ ಕ್ಷೇಮ ಸಮಾಚಾರವನ್ನು ತಿಳಿಸಿದ್ದಾರೆ. ತಾನಿರುವ ಹಾಸ್ಟೆಲ್ ಕೊಠಡಿಯಿಂದ ಸರ್ಜಿಕಲ್ ಮಾಸ್ಕ್ ಧರಿಸಿ ಹೊರಡುವ ಸಾಹೀಲ್, ಇಡೀ ವಿಶ್ವವಿದ್ಯಾನಿಲಯದ ಆವರಣದಲ್ಲಿ ಸುತ್ತಾಡಿ ಅಲ್ಲಿನ ಪರಿಸ್ಥಿತಿಯನ್ನು ಪೋಷಕರಿಗೆ ಮನವರಿಕೆ ಮಾಡಿಕೊಟ್ಟಿದ್ದಾರೆ. ವಿಡಿಯೋ ವೀಕ್ಷಿಸಿದ ಬಳಿಕ ಪೋಷಕರು ಸಮ್ಮತಿಸಿದ್ದು, ಪುತ್ರನ ನಿರ್ಧಾರಕ್ಕೆ ಹೆಮ್ಮೆ ಪಟ್ಟಿದ್ದಾರೆ.
ತಲೆದೂಗಿದ ಚೀನಾ:
ಸಾಹಿಲ್ ಹುಸೇನ್ ಮಾಡಿರುವ ವಿಡಿಯೋದಲ್ಲಿ ಕೊರೊನಾ ವೈರಸ್ ಹರಡದಂತೆ ಚೀನಾ ಸರ್ಕಾರ ತೆಗೆದುಕೊಂಡಿರುವ ಕ್ರಮಗಳನ್ನು ವಿಡಿಯೋದಲ್ಲಿ ವಿವರಿಸಿದ್ದಾರೆ. ಈ ವಿಡಿಯೋ ಅಲ್ಲಿನ ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದ್ದು, ಚೀನಾದ ದೃಶ್ಯ ಮಾಧ್ಯಮಗಳಲ್ಲಿ ಕೂಡ ಪ್ರಸಾರವಾಗಿದೆ.
ಚೀನಾದಿಂದ ಕರ್ನಾಟಕಕ್ಕೆ ನೇರ ವಿಮಾನ ಸೌಲಭ್ಯವಿಲ್ಲ. ಮೂರು ವಿಮಾನ ಬದಲಾಯಿಸಿ ಬರಬೇಕು. ಹೀಗಾಗಿ ಪ್ರಯಾಣದ ವೇಳೆ ನನಗೆ ಕೊರೋನಾ ವೈರಸ್ ತಗುಲಿ ನನ್ನ ದೇಶಕ್ಕೂ ಹರಡಿದರೆ ಸಮಸ್ಯೆಯಾಗುತ್ತದೆ. ಹೀಗಾಗಿ ಸದ್ಯದ ಪರಿಸ್ಥಿತಿಯಲ್ಲಿ ಭಾರತಕ್ಕೆ ಮರಳುವುದಿಲ್ಲ ಅಂತ ನನ್ನ ಮಗ ಸಾಹಿಲ್ ತಿಳಿಸಿದ್ದಾನೆ. ಮಗನ ತೀರ್ಮಾನದ ಬಗ್ಗೆ ನಮಗೆ ಆತಂಕದ ಜೊತೆಗೆ ಹೆಮ್ಮೆಯೂ ಇದೆ. ಅವನೊಂದಿಗಿದ್ದ ಬೆಂಗಳೂರಿನ ಅರುಣ್ ಕುಮಾರ್ ಮತ್ತು ಲೋಕೇಶ್ ಪೋಷಕರ ಒತ್ತಾಯಕ್ಕಾಗಿ ಮರಳಿದ್ದಾರೆ ಎಂದು ಹೊಸಕೆರೆ ರಿಜ್ವಾನ್ ಭಾಷಾ ತಿಳಿಸಿದ್ದಾರೆ.