-ಕಂದಮ್ಮಗಳ ಆಕ್ರಂದನ
ಕಲಬುರಗಿ: ಸೂರ್ಯಗ್ರಹಣದ ಹಿನ್ನೆಲೆಯಲ್ಲಿ ಜಿಲ್ಲೆಯ ತಾಜಾಸುಲ್ತಾನಪುರದಲ್ಲಿ ಪೋಷಕರು ಮಕ್ಕಳನ್ನು ಮಣ್ಣಿನಲ್ಲಿ ಕುತ್ತಿಗೆಯವರೆಗೆ ಹೂತಿಟ್ಟಿದ್ದಾರೆ. ಗ್ರಹಣದ ವೇಳೆ ಮಕ್ಕಳನ್ನು ಹೂತಿಟ್ಟರೆ ಅಂಗವೈಕಲ್ಯ ನಿವಾರಿಸುತ್ತೆ ಎಂಬ ಮೂಢನಂಬಿಕೆ ಈ ಆಚರಣೆಗೆ ಪೋಷಕರು ಮುಂದಾಗಿದ್ದಾರೆ.
ಇತ್ತ ಕಲಬುರಗಿ ಜಿಲ್ಲೆಯ ಅಫಜಲ್ಪುರ ತಾಲೂಕಿನ ಅರ್ಜುಣಗಿ ಗ್ರಾಮದಲ್ಲಿ ಸಹ ಮಕ್ಕಳನ್ನು ಕುತ್ತಿಗೆಯವರೆಗೆ ಮಣ್ಣಿನಲ್ಲಿ ಹೂತಿಡಲಾಗಿದೆ. ಒಂದೇ ಕಡೆ ಮೂರು ಮಕ್ಕಳನ್ನು ಮಣ್ಣಿನಲ್ಲಿ ಕುತ್ತಿಗೆ ಭಾಗದವರೆಗೆ ಹೂತಿಡಲಾಗಿದೆ. ಈ ಕುರಿತು ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಪೋಷಕರು, ಮಗನ ಬಲಗೈನಲ್ಲಿ ಯಾವುದೇ ಶಕ್ತಿ ಇಲ್ಲ. ಗ್ರಹಣದ ದಿನ ಹೀಗೆ ಹೂತಿಟ್ಟರೆ ನಿವಾರಣೆ ಆಗುತ್ತೆ ಅಂತಾ ಹೇಳಿದ್ರು. ಆದ್ದರಿಂದ ಮಕ್ಕಳನ್ನು ಹೂತಿಡಲಾಗಿದೆ ಎಂದು ಹೇಳಿದ್ದಾರೆ.
ಮತ್ತೊಂದು ಮಗುವಿನ ತಾಯಿ ಮಾತನಾಡಿ, ಈಕೆಗೆ ಕುಳಿತುಕೊಳ್ಳಲು ಬರಲ್ಲ. ನಮ್ಮ ಮನೆಯ ಹಿರಿಯರು ಗ್ರಹಣದ ವೇಳೆ ಮಕ್ಕಳನ್ನು ಹೂತಿಡಬೇಕೆಂದು ಹೇಳಿದ್ರು. ಒಳ್ಳೆಯದಾಗುತ್ತೆ ಎಂಬ ನಂಬಿಕೆಯಿಂದ ಮಣ್ಣಿನಲ್ಲಿ ಹೂತಿಡಲಾಗಿದೆ. ಮಗಳು ಆರೋಗ್ಯವಾಗಲಿ ಎಂಬ ಒಂದೇ ಒಂದು ಉದ್ದೇಶದಿಂದ ಹೂತಿಟ್ಟಿದ್ದೇನೆ. ಆಕೆ ಅಳೋದನ್ನು ನೋಡಿದ್ರೆ ನನಗೂ ನೋವಾಗುತ್ತಿದೆ. ಹೀಗೆ ಹಲವು ಜನ ಹೇಳಿದ್ದರಿಂದ ಒಮ್ಮೆ ಪ್ರಯತ್ನಿಸಿದ್ರೆ ತಪ್ಪಿಲ್ಲ ಎಂದು ಈ ಕೆಲಸಕ್ಕೆ ಮುಂದಾಗಿದ್ದೇನೆ ಎಂದು ತಿಳಿಸಿದರು.