ಕೊಪ್ಪಳ: ಬೆಳ್ಳಂಬೆಳಗ್ಗೆ ಮನೆಯ ಮೇಲ್ಛಾವಣಿ ಕುಸಿದು ಮೂವರು ಮಕ್ಕಳು ಸಾವನ್ನಪ್ಪಿರುವ ಘಟನೆ ಕೊಪ್ಪಳದಲ್ಲಿ ನೆಡದಿದೆ.
ಕೊಪ್ಪಳ ತಾಲೂಕಿನ ಯಲಮಗೇರಿಯಲ್ಲಿ ಗ್ರಾಮದಲ್ಲಿ ಬೆಳಗ್ಗಿನ ಜಾವ ಮೂರು ಗಂಟೆಗೆ ಈ ದುರ್ಘಟನೆ ಸಂಭವಿಸಿದೆ. ಘಟನೆಯಲ್ಲಿ 22 ವರ್ಷದ ಸುಜಾತ, 15 ವರ್ಷದ ಅಮರೇಶ, 18 ವರ್ಷದ ಗವಿಸಿದ್ದಪ್ಪ ಸಾವನ್ನಪ್ಪಿದ್ದಾರೆ. ಕಳೆದ ಎರಡು ವಾರದಿಂದ ಕೊಪ್ಪಳ ಜಿಲ್ಲೆಯಲ್ಲಿ ಬಾರಿ ಮಳೆ ಸುರಿಯುತ್ತಿದ್ದು ಕೊಪ್ಪಳ ತಾಲೂಕಿನ ಯಲಮಗೇರಿ ಗ್ರಾಮದಲ್ಲೂ ಮಳೆಯ ಆರ್ಭಟ ಜೋರಾಗಿತ್ತು.
ಸೋಮವಾರ ರಾತ್ರಿಯೂ ಮಳೆ ಸುರಿದಿದೆ. ಈ ಕಾರಣದಿಂದ ಮನೆಯೆ ಮೇಲೆ ಮಲಗಿದ್ದವರು ಒಳಗೆ ಬಂದು ಮಲಗಿದ್ದಾರೆ. ಎಡಬಿಡದೆ ಮಳೆ ಸುರಿದಿದ್ದರಿಂದ ಮನೆಯ ಮೇಲ್ಛಾವಣಿ ಸಂಪೂರ್ಣ ಶಿಥಿಲಗೊಂಡು ಏಕಾಏಕಿ ಕುಸಿದು ಬಿದ್ದಿದೆ. ಮನೆಯ ಮೇಲ್ಛಾವಣಿ ಕುಸಿಯುತ್ತಿದ್ದಂತೆ ಕೆಳಗೆ ಮಲಗಿದ್ದ ಮೂವರಲ್ಲಿ ಬಾಲಕ ಗವಿಸಿದ್ದಪ್ಪ ಸ್ಥಳದಲ್ಲೆ ಮೃತ ಪಟ್ಟಿದ್ದಾನೆ.
ಸುಜಾತ, ಅಮರೇಶ ಗೆ ತೀವ್ರ ಉಸಿರಾಟದ ತೊಂದರೆಯಾಗಿದೆ. ಕೂಡಲೇ ಕೊಪ್ಪಳ ಜಿಲ್ಲಾ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದಾರೆ. ಆದರೆ ದುರದೃಷ್ಟವಶಾತ್ ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಮಕ್ಕಳನ್ನು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.
ಈ ಘಟನೆ ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.