– ದ್ರೋಹಕ್ಕೆ ಕಣ್ಣೀರಿಟ್ಟ 90ರ ಹಿರಿ ಜೀವಗಳು
ಬೆಂಗಳೂರು: ತಂದೆ-ತಾಯಿ ಮಕ್ಕಳಿಗೋಸ್ಕರ ತಮ್ಮ ಇಡೀ ಬದುಕನ್ನೇ ಮುಡಿಪಿಡುತ್ತಾರೆ. ಕಷ್ಟಪಟ್ಟು ಮಕ್ಕಳನ್ನು ಸಾಕಿ ಅವರೆಲ್ಲರಿಗೂ ಸೂರು ಮಾಡಿಕೊಟ್ಟ ತಂದೆ-ತಾಯಿ, ಹೆಣ್ಣುಮಕ್ಕಳು ಮನೆ ಕಣ್ಣು ಎನ್ನುವಂತೆ ಸಾಕಿ ಸಲಹಿದರು. ಆದರೆ ಅದೇ ಮಕ್ಕಳು ಆಸ್ತಿಯ ಆಸೆಗೆ ಹೆತ್ತವರಿಗೆ ದ್ರೋಹ ಬಗೆದಿದ್ದಾರೆ.
ಮಕ್ಕಳಿಗಾಗಿ ನಿಸ್ವಾರ್ಥವಾಗಿ ತಮ್ಮ ಸುಖವನ್ನೂ ಮರೆತು ಅವರ ಸುಖಕ್ಕೆ ಬದುಕನ್ನೇ ಹೆತ್ತವರು ಸವೆಯುತ್ತಾರೆ. ಆದರೆ ವೆಲ್ಲಿಯನ್, ಕಮಲಮ್ಮ ದಂಪತಿಗೆ ತಮ್ಮ ಮಕ್ಕಳೇ ಮೋಸ ಮಾಡಿದ್ದಾರೆ. ವೆಲ್ಲಿಯನ್ ದಂಪತಿಗೆ ಒಟ್ಟು ನಾಲ್ಕು ಜನ ಹೆಣ್ಣುಮಕ್ಕಳು. ಈ ಮಕ್ಕಳನ್ನು ಓದಿಸಿ, ಅವರಿಗೊಂದು ಬದುಕು ಕಟ್ಟಿಕೊಟ್ಟಿದ್ದು, ನಾಲ್ಕು ಜನರಿಗೂ ಚಾಮರಾಜಪೇಟೆಯಲ್ಲಿ ಪ್ರತ್ಯೇಕ ಮನೆ ಕಟ್ಟಿಕೊಟ್ಟಿದ್ದಾರೆ. ಇಷ್ಟೆಲ್ಲ ಮಾಡಿದ್ದರೂ ಹೆತ್ತವರು ಮಾತ್ರ ಈ ಮಕ್ಕಳಿಗೆ ಭಾರವಾಗಿದ್ದಾರೆ. ನಾಲ್ವರಲ್ಲಿ ಮೂವರು ಆಸ್ತಿಯನ್ನು ಫೋರ್ಜರಿ ಸಹಿ ಮೂಲಕ ತಮ್ಮ ಹೆಸರಿಗೆ ಬರೆದುಕೊಂಡಿದ್ದು, ತಂದೆ- ತಾಯಿಯನ್ನು ಮನೆಗೆ ಸೇರಿಸಿಕೊಳ್ಳುತ್ತಿಲ್ಲ.
ಆದರೆ ಒಬ್ಬಳು ಪುತ್ರಿ ಹೆತ್ತವರನ್ನು ಮನೆಗೆ ಕರೆತಂದು ಸಾಕಲು ಮುಂದಾದಾಗ ಆಕೆಯ ಮನೆ ಸೇರಿದಂತೆ, ಆಸ್ತಿಯನ್ನು ಕೂಡ ಲಪಟಾಯಿಸಲು ಉಳಿದ ಮೂವರು ಸ್ಕೆಚ್ ಹಾಕಿದ್ದಾರಂತೆ. ಹೆಣ್ಣು ಮಕ್ಕಳ ಮೃಗೀಯ ವರ್ತನೆಗೆ ವೃದ್ದ ದಂಪತಿ ಕಣ್ಣೀರು ಹಾಕಿದ್ದಾರೆ.
ಮಕ್ಕಳಿಗೆಂದು ದಂಪತಿ ವಿಲ್ ಸಹ ಮಾಡಿದ್ದರು. ಅದನ್ನ ನಂಬದೇ ಫೋರ್ಜರಿ ಮಾಡಿ ಆಸ್ತಿಯನ್ನ ಮಕ್ಕಳು ಕಬಳಿಸಿಕೊಂಡಿದ್ದಾರೆ. ಹೆಣ್ಣು ಮಕ್ಕಳಿಗೆ ಇರಲು ಮನೆ ಬೇಕು ಎಂದು ದೊಡ್ಡ ಸೈಟಿನಲ್ಲಿ ನಾಲ್ಕು ಮನೆಗಳನ್ನ ನಿರ್ಮಿಸಿ, ಎಲ್ಲರ ಹೆಸರಲ್ಲೂ ಒಂದೊಂದು ಮನೆಯನ್ನ ದಂಪತಿ ಬರೆದು ವಿಲ್ ಮಾಡಿದ್ದರು. ಆದರೆ ಆ ವಿಲ್ ಅನ್ನು ಹೆಣ್ಣು ಮಕ್ಕಳಿಗೆ ತೋರಿಸಿರಲಿಲ್ಲ. ಇದೇ ವಿಚಾರಕ್ಕೆ ತಂದೆ ತಾಯಿ ಮೇಲೆ ಮಕ್ಕಳು ಮುನಿಸಿಕೊಂಡಿದ್ದರು.
ನಂತರ ಜನವರಿಯಲ್ಲಿ ಜಿಗಣಿ ರಿಜಿಸ್ಟ್ರಾರ್ ಆಫೀಸಿನಲ್ಲಿ ಸಬ್ ರಿಜಿಸ್ಟ್ರಾರ್ ಮಂಜುನಾಥ್ ಅನ್ನೋರು ಚಿನ್ನಪ್ಪ ಎಂಬವರಿಗೆ ಜನರಲ್ ಪವರ್ ಆಫ್ ಅಟಾರ್ನಿಯ(ಜಿಪಿಎ) ಕೊಟ್ಟು ನಂತರ ಅದನ್ನ ದಾನದ ರೂಪದಲ್ಲಿ ಈ ಹೆಣ್ಣು ಮಕ್ಕಳು ಫೋರ್ಜರಿ ಮಾಡಿ ಬರೆಸಿಕೊಂಡಿದ್ದಾರೆ. ಈಗ ತಾವೇ ಕಟ್ಟಿದ ಮನೆಯಲ್ಲಿ ಇರಲೂ ಆಗದೇ ಕಣ್ಣೀರಿಡುತ್ತಿದ್ದಾರೆ. ಹೆಣ್ಣುಮಕ್ಕಳ ಬಗ್ಗೆ ತಂದೆಗೆ ಹೆಚ್ಚು ಪ್ರೀತಿ ಅಂತಾರೆ ಆದರೆ ಮಕ್ಕಳಿಂದಲೇ ತಂದೆಯ ಇಷ್ಟೊಂದು ನೋವು ಅನುಭವಿಸುತ್ತಿದ್ದಾರೆ.
ತಂದೆ ತಾಯಿ ಕಣ್ಣಿಗೆ ಕಾಣೋ ದೇವರು ಅಂತಾರೆ ಆದರೆ ಕೇವಲ ತಂದೆ ತಾಯಿಯೇ ಕಷ್ಟ ಪಟ್ಟು ಸಂಪಾದಿಸಿದ ಆಸ್ತಿಗಾಗಿ ಅವರನ್ನೇ ಬೀದಿ ಪಾಲು ಮಾಡಲು ಹೊರಟಿರುವ ಇಂತಹ ಮಕ್ಕಳಿಗೆ ಕಾನೂನು ತಕ್ಕ ಶಾಸ್ತಿ ಮಾಡಬೇಕು ಅನ್ನೊದು ನೊಂದವರ ಒತ್ತಾಯವಾಗಿದೆ.