– ಮೂವರು ಬಾಲಕಿಯರು ಸೇರಿ ನಾಲ್ವರು ಸಾವು
ರಾಯಚೂರು: ಹೊಸ ವರ್ಷಾಚರಣೆಯನ್ನು ಸಂಭ್ರಮಿಸಲು ನದಿದಂಡೆಗೆ ತೆರಳಿದ್ದ ರಾಯಚೂರಿನ ಮೂವರು ಬಾಲಕಿಯರು ಸೇರಿದಂತೆ ಒಟ್ಟು ನಾಲ್ವರು ಆಂಧ್ರ ಪ್ರದೇಶದಲ್ಲಿ ನದಿ ಪಾಲಾಗಿದ್ದಾರೆ.
ಮದಿಹಾ (12), ಫರಿಯಾ (10) ಮತ್ತು ಲೋದಾ (10) ಮೃತ ದುರ್ದೈವಿಗಳು. ನದಿಗೆ ಬಿದ್ದ ಅಕ್ಕನ ಮಕ್ಕಳನ್ನ ಕಾಪಾಡಲು ಹೋದ ನೂರ್ ಅಹ್ಮದ್ (35) ಸಹ ನದಿಯಲ್ಲಿ ಮುಳುಗಿ ಸಾವನ್ನಪ್ಪಿದ್ದಾನೆ. ಆಂಧ್ರ ಪ್ರದೇಶದ ಕಡಪ ಜಿಲ್ಲೆಯ ಸಿದ್ದವಟಂನಲ್ಲಿ ಈ ಘಟನೆ ನಡೆದಿದೆ.
ಹೊಸ ವರ್ಷದ ಸಂಭ್ರಮಾಚರಣೆ ಮಾಡಲು ಆಂಧ್ರದ ಸಿದ್ದವಟಂನಲ್ಲಿನ ಅಜ್ಜಿಯ ಮನೆಗೆ ತೆರಳಿದ್ದರು. ಅಲ್ಲಿ ಮಾವ ನೂರ್ ಅಹ್ಮದ್ ಜೊತೆ ಪೆನ್ನಾ ನದಿಯಲ್ಲಿ ಈಜಲು ತೆರಳಿದ್ದರು. ಈ ವೇಳೆ ನದಿಯಲ್ಲಿ ಮಕ್ಕಳು ಮುಳುಗಿದ್ದಾರೆ. ಮಕ್ಕಳನ್ನ ಕಾಪಾಡಲು ಹೋದ ನೂರ್ ಅಹ್ಮದ್ ಸಹ ನೀರಿನ ಸೆಳೆತಕ್ಕೆ ಕೊಚ್ಚಿ ಹೋಗಿ ಮೃತಪಟ್ಟಿದ್ದಾನೆ.
ಮೃತ ಮಕ್ಕಳು ರಾಯಚೂರು ನಗರದ ಮೆಥೋಡಿಸ್ಟ್ ಚರ್ಚ್ ಪ್ರದೇಶದ ಇನಾಂದಾರ್ ಕಾಲೋನಿ ನಿವಾಸಿ ಗೌಸ್ಪೀರ್ ಎಂಬವರ ಮಕ್ಕಳು ಎಂದು ತಿಳಿದು ಬಂದಿದೆ. ಗೌಸ್ಪೀರ್ ಲಾರಿ ಚಾಲಕನಾಗಿ ಕೆಲಸ ಮಾಡುತ್ತಿದ್ದರು. ಮಕ್ಕಳನ್ನ ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.