ಮೈಸೂರು: ಹೇಳಿಕೊಳ್ಳುವುದಕ್ಕೆ ಸಿಎಂ ಸಿದ್ದರಾಮಯ್ಯ, ಕ್ಯಾಬಿನೆಟ್ನ ಪವರ್ ಫುಲ್ ಮಿನಿಸ್ಟರ್ ಡಾ.ಎಚ್.ಸಿ. ಮಹದೇವಪ್ಪ ಹಾಗೂ ಶಿಕ್ಷಣ ಸಚಿವ ತನ್ವೀರ್ ಸೇಠ್ ಎಲ್ಲರೂ ಮೈಸೂರಿನವರು. ಆದರೆ ನಗರದ ನಂಜನಗೂಡು ಪಟ್ಟಣದಲ್ಲಿ ಸರ್ಕಾರಿ ಶಾಲೆಯೊಂದರ ಕಟ್ಟಡದ ಮೇಲ್ಛಾವಣಿ ಕುಸಿಯುತ್ತಿದ್ದು, ಆತಂಕದಲ್ಲಿಯೇ ಮಕ್ಕಳು ಪಾಠ ಕೇಳುವ ಪರಿಸ್ಥಿತಿ ಎದುರಾಗಿದೆ.
ಬಡ ಮಕ್ಕಳ ವಿದ್ಯಾಭ್ಯಾಸಕ್ಕೆ ನೆರವಾಗಿದ್ದ ಶತಮಾನದ ಕಟ್ಟಡ ಈಗ ದುಃಸ್ಥಿತಿ ತಲುಪಿದೆ. ಯಾವುದೇ ಕ್ಷಣದಲ್ಲಾದರೂ ಕುಸಿಯುವ ಹಂತದಲ್ಲಿರುವ ಕಟ್ಟಡದಲ್ಲಿ ವಿದ್ಯಾರ್ಥಿಗಳು ಪಾಠ ಕೇಳುತ್ತಿದ್ದಾರೆ. ನಂಜನಗೂಡಿನ ಬಿಇಓ ಕಚೇರಿಗೆ ಕೂಗಳತೆ ದೂರದಲ್ಲಿರುವ ಈ ಸರ್ಕಾರಿ ಶಾಲೆಯ ಸ್ಥಿತಿ ದುಸ್ತರವಾಗಿದೆ.
1946 ರಲ್ಲಿ ಸ್ವಾತಂತ್ರ್ಯ ಸಂಗ್ರಾಮದ ವೇಳೆ ಮಹಾತ್ಮಗಾಂಧಿ ಭೇಟಿ ನೀಡಿದ ಹಿನ್ನೆಲೆಯನ್ನು ಹೊಂದಿರುವ ಈ ಶಾಲೆಗೆ ಕಾಯಕಲ್ಪ ನೀಡುವುದಕ್ಕೆ ಯಾರೂ ಕೂಡ ಮನಸ್ಸು ಮಾಡುತ್ತಿಲ್ಲ. ಶಾಲೆಯ ಮೇಲ್ಛಾವಣಿ ಕುಸಿದು ಬೀಳುವ ಹಂತದಲ್ಲಿದೆ. ಶಾಲೆಯ ಕಾಂಪೌಂಡ್ ಗೋಡೆ ಯಾವ ಕ್ಷಣದಲ್ಲಾದರೂ ಕುಸಿಯಬಹುದು. ಸುಣ್ಣ ಮಿಶ್ರಿತ ಮಣ್ಣಿನಿಂದ ನಿರ್ಮಿಸಿದ ಶತಮಾನದ ಶಾಲೆಗೆ ಕಾಯಕಲ್ಪ ನೀಡದೆ ಇದ್ದರೆ ನಿಜಕ್ಕೂ ದೊಡ್ಡ ಅನಾಹುತವಾಗಿ ಮಕ್ಕಳ ಪ್ರಾಣಕ್ಕೆ ಕುತ್ತಾಗುವ ಸಾಧ್ಯತೆ ಇದೆ.
ಮಕ್ಕಳ ಪ್ರಾಣದ ಜೊತೆ ಶಿಕ್ಷಣ ಇಲಾಖೆ ಚೆಲ್ಲಾಟವಾಡದೆ ಶಾಲೆಯ ಕಟ್ಟಡವನ್ನು ಶೀಘ್ರವಾಗಿ ವ್ಯವಸ್ಥಿತವಾಗಿ ದುರಸ್ತಿ ಮಾಡಬೇಕಿದೆ.